ಹಾಲಕ್ಕಿ ಸಂಸ್ಕೃತಿ ಸಂವರ್ಧನೆಗೆ ತುಳಸಿ ಗುರುಕುಲ ಸ್ಥಾಪನೆ
ಕಾರವಾರ, ಫೆಬ್ರವರಿ 12: ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಹಾಲಕ್ಕಿ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಉದ್ದೇಶಿಸಿರುವ ಗುರುಕುಲಕ್ಕೆ ತುಳಸಿ ಗುರುಕುಲ ಎಂದು ನಾಮಕರಣ ಮಾಡಲಾಗಿದೆ.
ತುಳಸೀಕಟ್ಟೆ ಇಡೀ ಹಾಲಕ್ಕಿ ಸಂಸ್ಕೃತಿಯ ಜೀವಾಳವಾಗಿದ್ದು, ಭವಿಷ್ಯದಲ್ಲಿ ಈ ಗುರುಕುಲವನ್ನು ಹಾಲಕ್ಕಿ ಸಂಸ್ಕೃತಿಯ ಸಮಗ್ರ ಅಧ್ಯಯನ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಾಂಕೇತಿಕವಾಗಿ ತುಳಸಿ ಹೆಸರನ್ನೇ ಗುರುಕುಲಕ್ಕೆ ಇಡಲಾಗಿದೆ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಹಾಲಕ್ಕಿ ಸಮಾಜದಲ್ಲಿ ತುಳಸಿಗೆ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಮಹತ್ವವಿದ್ದು, ಸಮಗ್ರ ಹಿಂದೂ ಸಂಸ್ಕೃತಿಯಲ್ಲೂ ತುಳಸಿಗೆ ವಿಶೇಷ ಸ್ಥಾನವಿದೆ. ಹಾಲಕ್ಕಿ ಸಮಾಜದ ಮಕ್ಕಳಲ್ಲಿ ತವರು ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಜತೆಗೆ ಹಿಂದೂ ಸಂಸ್ಕೃತಿಯ ಒಳ್ಳೆಯ ಅಂಶಗಳನ್ನು ಹಾಗೂ ಉತ್ಕೃಷ್ಟ ಸಮಕಾಲೀನ ಶಿಕ್ಷಣವನ್ನೂ ನೀಡುವ ಉದ್ದೇಶದಿಂದ ಗುರುಕುಲ ಸ್ಥಾಪನೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಸಂಗಮದ ಪ್ರತೀಕವಾಗಿ, ಇಲ್ಲಿ ನೀಡುವ ಮೌಲಿಕ ಶಿಕ್ಷಣಕ್ಕೆ ಸಾಂಕೇತಿಕ ಎಂಬಂತೆ ತುಳಸಿ ಹೆಸರಿನಲ್ಲೇ ಗುರುಕುಲ ಆರಂಭಿಸಲಾಗುತ್ತಿದೆ ಎಂದು ಪ್ರಕಟಣೆ ವಿವರಿಸಿದೆ.
ಮುಂದಿನ ಶೈಕ್ಷಣಿಕ ವರ್ಷ ತುಳಸಿ ಗುರುಕುಲದಲ್ಲಿ ಆರನೇ ತರಗತಿ ಆರಂಭಿಸಲಾಗುತ್ತಿದ್ದು, ಐದನೇ ತರಗತಿ ಉತ್ತೀರ್ಣರಾದವರು ಹಾಗೂ ಅರ್ಧಕ್ಕೆ ಶಾಲೆಬಿಟ್ಟ, 12 ವರ್ಷ ತುಂಬಿದವರು ಪ್ರವೇಶ ಪಡೆಯಬಹುದಾಗಿದೆ.












Click it and Unblock the Notifications