ಕೈಕೊಟ್ಟ ಬಿಎಸ್ವೈ, ಸಚಿವ ಹೆಗಡೆ; ಪರಿಹಾರಕ್ಕಾಗಿ ಮೋದಿಗೆ ಮೊರೆ
ಕಾರವಾರ, ಅಕ್ಟೋಬರ್ 27: 2009ರಲ್ಲಿ ತಾಲ್ಲೂಕಿನ ಕಡವಾಡದ ಝರಿವಾಡ ಗ್ರಾಮದಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಇನ್ನೂ ಪರಿಹಾರ ಬಂದಿಲ್ಲ. ಹೀಗಾಗಿ ತಮಗೆ ಪರಿಹಾರ ಒದಗಿಸುವಂತೆ ನಿರಾಶ್ರಿತ ರಾಜನ್ ಕೊಠಾರಕರ್ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಮನವಿ ರವಾನಿಸಿದರು.
ಏನಿದು ಘಟನೆ?:
ಕೇವಲ ಒಂದೇ ದಿನ ಸುರಿದ ಮಳೆಗೆ 2009ರ ಅಕ್ಟೋಬರ್ 2ರಂದು ಕಡವಾಡದ ಝರಿವಾಡ ಗ್ರಾಮದಲ್ಲಿನ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ 1,636 ಮನೆಗಳು ಹಾನಿಗೊಳಗಾಗಿತ್ತು. 2,461 ಮಂದಿ ಸಂತ್ರಸ್ತರಾಗಿ, 21 ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಪ್ರಕೃತಿಯ ಮುನಿಸಿಗೆ ಘಟನೆಯಲ್ಲಿ ಒಟ್ಟು 21 ಮಂದಿ ಮಣ್ಣು ಪಾಲಾಗಿದ್ದರು. ಸತತ 7 ದಿನಕ್ಕೂ ಮೀರಿ ಸುಮಾರು 200ಕ್ಕೂ ಅಧಿಕ ಮಂದಿ ನಡೆಸಿದ ರಕ್ಷಣಾ ಕಾರ್ಯದಲ್ಲಿ ಮಣ್ಣಿನಲ್ಲಿ ಹೂತು ಹೋಗಿದ್ದವರನ್ನು ಹೊರ ತೆಗೆದಿದ್ದರು.

ಪರಿಹಾರಕ್ಕೆ ಪ್ರಧಾನಿಗೆ ಮನವಿ:
"ಗುಡ್ಡ ಕುಸಿತದ ದುರಂತದಲ್ಲಿ ನಮ್ಮ ತಾಯಿ, ತಂಗಿ ಹಾಗೂ ತಮ್ಮ ಮೃತಪಟ್ಟಿದ್ದರು. ಈ ಬಗ್ಗೆ ಕಳೆದ 8 ವರ್ಷಗಳಿಂದ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇನೆ. ಎಲ್ಲ ಇಲಾಖೆಯ ಅಧಿಕಾರಿಗಳನ್ನು ಕೂಡ ಸಂಪರ್ಕಿಸಿದ್ದೇನೆ. ರಾಜ್ಯ ಸರ್ಕಾರದಿಂದ ಘೋಷಿಸಿದ್ದ ತಲಾ 1 ಲಕ್ಷ ರೂ. ಪರಿಹಾರ ದೊರೆತಿದೆ. ಆದರೆ ಕೇಂದ್ರ ಸರ್ಕಾರ ಅಂದುಘೋಷಿಸಿದ್ದ ತಲಾ ರೂ. 1 ಲಕ್ಷ ಪರಿಹಾರ ಈ ವರೆಗೂ ಬಂದಿಲ್ಲ," ಎನ್ನುತ್ತಾರೆ ರಾಜನ್ ಕೊಠಾರಕರ್.
"ಈ ಘಟನೆಯಲ್ಲಿ ಮಣ್ಣು ಪಾಲಾಗಿದ್ದ ಬಹುತೇಕರಿಗೆ ಕೇಂದ್ರದಿಂದ ಪರಿಹಾರ ಬಂದಿದೆ. ಆದರೆ ನನಗೆ ಮಾತ್ರ ಈ ಬಗ್ಗೆ ಎಷ್ಟು ಬಾರಿ ಮನವಿ ಮಾಡಿಕೊಂಡರು ಪರಿಹಾರ ಬಿಡುಗಡೆ ಆಗಿಲ್ಲ. ಹಾಗಾಗಿ ಪ್ರಧಾನಿ ಮೋದಿ ಅವರಿಗೆ ಮನವಿ ರವಾನಿಸಿದ್ದು, ಪರಿಹಾರ ಶೀಘ್ರ ಲಭಿಸುವ ಭರವಸೆ ಇದೆ," ಎಂದು ರಾಜನ್ ಕೊಠಾರಕರ್ ವಿಶ್ವಾಸ ವ್ಯಕ್ತಪಡಿಸಿದರು.

ಕೈಕೊಟ್ಟ ಯಡಿಯೂರಪ್ಪ, ಅನಂತ ಕುಮಾರ್
'ರಾಜ್ಯದಲ್ಲೇ ಭೀಕರ ದುರಂತ ಎನ್ನಲಾದ ಕಡವಾಡದ ಗುಡ್ಡ ಕುಸಿತದಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದ ಶ್ರೀನಾಥ ಗೋವೇಕರ್ ಎಂಬುವವರ ಮೂವರು ಪುತ್ರಿಯರನ್ನು ಸಂಸದ ಅನಂತಕುಮಾರ್ ಹೆಗಡೆ ತಮ್ಮ ಕದಂಬ ಚಾರಿಟೇಬಲ್ ಟೃಸ್ಟ್ನ ಮೂಲಕ ದತ್ತು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಈವರೆಗೂ ಅದು ಸಾಧ್ಯವಾಗಿಲ್ಲ.
ರಾಜ್ಯದಲ್ಲಿ ಕೋಮು ಸೌಹಾರ್ದ ಹಾಳುಗೆಡಹುವ ಉದ್ರೇಕಕಾರಿ ಭಾಷಣಗಳನ್ನು ಮಾಡುವುದನ್ನು ನಿಲ್ಲಿಸಿ, ತಾವು ಹೇಳಿದ ಮಾತನ್ನು ಉಳಿಸಿಕೊಳ್ಳಲು ಹೆಗಡೆಯವರು ಪ್ರಯತ್ನಿಸಬೇಕು' ಎಂದು ಜನಶಕ್ತಿ ವೇದಿಕೆಯ ಮಾಧವ ನಾಯಕ ಖಾರವಾಗಿ ನುಡಿದರು.

'ಜತೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಗರಕ್ಕೆ ಭೇಟಿ ನೀಡಿ, ನಿರಾಶ್ರಿತ ವಿದ್ಯಾವಂತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅವೆಲ್ಲವೂ ಆಶ್ವಾಸನೆಯಾಗಿಯೇ ಉಳಿದಿದೆ. ಕೊಟ್ಟ ಮಾತನ್ನು ಜನಪ್ರತಿನಿಧಿಗಳು ಉಳಿಸಿಕೊಂಡಿಲ್ಲ' ಎಂದು ಆರೋಪಿಸಿದರು.












Click it and Unblock the Notifications