ಉತ್ತರ ಕನ್ನಡ ಜನತೆಗೆ ಭಾರಿ ನಿರಾಶೆ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸದ್ಯಕ್ಕಿಲ್ಲ
ಕಾರವಾರ, ಸೆಪ್ಟೆಂಬರ್ 15: ಉತ್ತರ ಕನ್ನಡ ಜಿಲ್ಲೆಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಕೂಗು ಮುಂಗಾರು ಅದಿವೇಶನದಲ್ಲಿ ಕೇಳಿಬಂದಿದ್ದು, ಕಾಂಗ್ರೆಸ್ ಶಾಸಕಿ ರೂಪಾಲಿ ನಾಯಕ್ ಈ ಬಗ್ಗೆ ಸರಕಾರನ್ನು ಪ್ರಶ್ನೆ ಮಾಡಿದ್ದರು. ಆದರೆ ಹಣಕಾಸು ಇಲಾಖೆ ಆಸ್ಪತ್ರೆಯ ಪ್ರಸ್ತಾವನೆಗೆ ಒಪ್ಪಿಗೆ ನಿರಾಕರಿಸಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಲಿಖಿತ ಉತ್ತರ ನೀಡಿದ್ದಾರೆ.
ಗುರುವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬಗ್ಗೆ 24 ಮನವಿಗಳನ್ನು ಸಲ್ಲಿಸಿದ್ದೇವೆ, ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಗ್ಯ ' ಸಚಿವ ಸುಧಾಕರ್ ಆನಾರೋಗ್ಯದ ಕಾರಣದ ಸಭೆಯಲ್ಲಿಲ್ಲ, ಇದರ ಬಗ್ಗೆ ಮುಂದಿನ ವಾರ ಅವಕಾಶ ಕೊಡುತ್ತೇನೆ, ಅದು ನಮ್ಮ ಜಿಲ್ಲೆಯ ವಿಷಯ, ನೀವು ಪ್ರಸ್ತಾಪಿಸಿದರೆ ನಾನು ನಿಮಗೆ ಧ್ವನಿಗೂಡಿಸುತ್ತೇನೆ' ಎಂದು ತಿಳಿಸಿದರು.
ಆರೋಗ್ಯ ಸಚಿವರಿಗೆ ಅನಾರೋಗ್ಯ; ಕಲಾಪಕ್ಕೆ ಹಾಜರಾಗಲ್ಲ ಡಾ. ಸುಧಾಕರ್
ಮಾತು ಮುಂದುವರಿಸಿದ ರೂಪಾಲಿ, ಈಗ ಸಚಿವರಿಗೆ ಆರೋಗ್ಯ ಸರಿಯಿಲ್ಲ, ಮುಂದೆ ನಮಗೆ ಹೇಗಿರುತ್ತೋ ಗೊತ್ತಿಲ್ಲ, ಹೀಗೆ ಮುಂದುವರಿದರೆ, ಮುಂದಿನ ಅದಿವೇಶನಕ್ಕೆ ನಾವು ಹೋಗಬೇಕಾಗುತ್ತದೆ. ಅಲ್ಲಿವರೆಗೂ ನಮ್ಮ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇರಲ್ಲ, ನಾವು ಜನರಿಂದ ಮತ್ತಷ್ಟು ಮಾತುಗಳನ್ನು ಕೇಳಬೇಕಾಗುತ್ತದೆ. ಇದು ಹುಡುಗಾಟದ ವಿಷಯವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಈ ಪ್ರಶ್ನೆಗೆ ಉತ್ತರಿಸಲು ಸದನದಲ್ಲಿ ಗೈರಾಗಿದ್ದ ಆರೋಗ್ಯ ಸಚಿವ ಢಾ. ಕೆ ಸುಧಾಕರ್ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. " ಕಾರಾವಾರದಲ್ಲಿ ಹೊಸದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವ ಬಗ್ಗೆ ಈ ಹಿಂದೆ ಸ್ವೀಕರಿಸಲಾದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯಕ್ಕಾಗಿ ಅಗತ್ಯವಿರುವ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಇತ್ಯಾದಿ ಮೂಲ ಸೌಲಭ್ಯಗಳು ಹಾಗೂ ಅದಕ್ಕೆ ತಗಲುವ ಆರ್ಥಿಕ ಹೊರೆಯ ವಿವರಗಳನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಂದ ಪಡೆದು ಸದರಿ ಪ್ರಸ್ತಾವನೆಯ ಮಂಜೂರಾತಿಗಾಗಿ ಆರ್ಥಿಕ ಇಲಾಖೆಯ ಸಹಮತಿಯನ್ನು ಕೋರಲಾಗಿತ್ತು. ಆದರೆ ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ" ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತವಾದ ಆಧುನಿಕ ತಂತ್ರಜ್ಞಾನವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವ ಕುರಿತು ಮತ್ತೊಮ್ಮೆ ಕಡತವನ್ನು ಆರ್ಥಿಕ ಇಲಾಖೆಯ ಸಹಮತಿಗೆ ಕಳುಹಿಸಲಾಗುತ್ತಿದೆ. ಅಲ್ಲಿಂದ ಸಹಮತಿ ಬಂದ ನಂತರದಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಕಾರವಾರಕ್ಕೆ ಹೊಸದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ವಿವರ ನೀಡಿದ್ದಾರೆ.