ರೈತ ಹೋರಾಟ ದಾರಿತಪ್ಪಿಸುತ್ತಿದ್ದಾರೆ; ರೂಪಾಲಿ ನಾಯ್ಕ
ಕಾರವಾರ, ಜನವರಿ 28; "ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ನುಸುಳಿ ಹಿಂಸಾತ್ಮಕ ಘಟನೆಗಳಿಗೆ ಕಾರಣರಾಗಿ ಪರ್ಯಾಯ ಧ್ವಜ ಹಾರಿಸಿರುವುದು ದೇಶದ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದೆ" ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ, "ರೈತರ ಹೆಸರಿನಲ್ಲಿ ನಡೆಸಿದ ದುಷ್ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ" ಹೇಳಿದ್ದಾರೆ.
ರೈತ ಸಂಘಟನೆಗಳ ಮನಸು ಕೆಡಿಸಿದ ದೆಹಲಿ ಹಿಂಸಾಚಾರ?
"ಪ್ರಜಾಪ್ರಭುತ್ವದಲ್ಲಿ ನ್ಯಾಯಕ್ಕಾಗಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹಾಗೆ ರೈತರೂ ಕೂಡ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ರೈತರ ಹೆಸರಿನಲ್ಲಿ ದುಷ್ಕರ್ಮಿಗಳು ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ" ಎಂದರು.
ರೈತ ದಂಗೆ: ದೆಹಲಿಯಲ್ಲಿ 18 ಪೊಲೀಸರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
'ಕೆಂಪುಕೋಟೆಯ ಗೋಪುರ, ಧ್ವಜಸ್ತಂಭದ ಮೇಲೆ ಪರ್ಯಾಯ ಧ್ವಜ ಹಾರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದು ತಲೆತಗ್ಗಿಸುವ ಘಟನೆಯಾಗಿದೆ. ನಿಜವಾದ ರೈತರ ಹೆಸರಿಗೆ ಮಸಿಬಳಿಯುವ ದುಷ್ಕೃತ್ಯ ಇದಾಗಿದೆ. ರೈತರೂ ಕೂಡ ಇಂತಹ ದುಷ್ಕೃತ್ಯವನ್ನು ಖಂಡಿಸಿ, ಇಂತಹ ಘಟನೆಗಳಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕಾಗಿದೆ" ಎಂದು ಹೇಳಿದ್ದಾರೆ.
ಕೆಂಪುಕೋಟೆಗೆ ನುಗ್ಗಿದ ರೈತರು; ಯಾರು, ಏನು ಹೇಳಿದರು?
"ರೈತ ಹೋರಾಟವನ್ನು ಬಳಸಿಕೊಂಡು ರಾಷ್ಟ್ರ ವಿರೋಧಿ, ಸಮಾಜಘಾತುಕ ಶಕ್ತಿಗಳು ಸ್ವಹಿತಾಸಕ್ತಿಗಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಡಲು ಸಂಚು ನಡೆಸಿರುವ ಶಂಕೆ ಕಾಡುತ್ತಿದೆ. ಇಂತಹ ಸಮಾಜವಿರೋಧಿ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ರೈತರು ಸ್ವಾಭಿಮಾನಿಗಳು. ಶಾಂತಿಪ್ರಿಯರು. ಇಂತಹ ಕಿಡಿಗೇಡಿಗಳ ಬಗ್ಗೆ ಕಾಳಜಿಯಿಂದ ಇರಬೇಕು. ಸಂಪೂರ್ಣ ರೈತ ಹೋರಾಟವನ್ನೇ ದಿಕ್ಕು ತಪ್ಪಿಸುವ ಹುನ್ನಾರ ಈ ಕೃತ್ಯದ ಹಿಂದಿದೆ" ಎಂದು ತಿಳಿಸಿದ್ದಾರೆ.
Recommended Video
"ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಇಂತಹ ಘಟನೆಗಳಿಗೆ ಯಾರೂ ಅವಕಾಶ ಮಾಡಿಕೊಡಬಾರದು. ಯಾವುದೇ ಸಮಸ್ಯೆ ಇದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ರೈತರ ಪ್ರತಿಭಟನೆಯಲ್ಲಿ ನುಸುಳಿದ ದುಷ್ಟಶಕ್ತಿಗಳು ಯಾವುದು?, ಇದರ ಹಿಂದೆ ಯಾರ ಕೈವಾಡ ಇದೆ?, ದಂಗೆ ಉಂಟುಮಾಡಲು ಪ್ರೇರಕರು ಯಾರು? ಎನ್ನುವುದನ್ನು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.