ಯಲ್ಲಾಪುರದ ಜನತೆಗೆ ಶಿವರಾಮ್ ಹೆಬ್ಬಾರ್ ಸಂದೇಶ
ಉತ್ತರ ಕನ್ನಡ, ಜುಲೈ 28 : ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ 11 ಕಾಂಗ್ರೆಸ್ ಶಾಸಕರನ್ನು ಭಾನುವಾರ ಅನರ್ಹಗೊಳಿಸಿದರು.
ಜುಲೈ 6ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಿವರಾಮ್ ಹೆಬ್ಬಾರ್ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಕಾಂಗ್ರೆಸ್ ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ ದೂರಿನ ಅನ್ವಯ ಅವರನ್ನು ಅನರ್ಹಗೊಳಿಸಲಾಗಿದೆ.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ರಮೇಶ್ ಕುಮಾರ್ 11 ಕಾಂಗ್ರೆಸ್, 3 ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸುವುದಾಗಿ ಘೋಷಣೆ ಮಾಡಿದರು. ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿವರಾಮ್ ಹೆಬ್ಬಾರ್ ಶಾಸಕ ಸ್ಥಾನದಿಂದ ಅನರ್ಹರಾದರು.

ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡುತ್ತಿದ್ದಂತೆ ಶಿವರಾಮ್ ಹೆಬ್ಬಾರ್ ಕ್ಷೇತ್ರದ ಜನರಿಗೆ ವಾಟ್ಸಪ್ ಸಂದೇಶವನ್ನು ಕಳಿಸಿದರು. ಅನರ್ಹತೆ ನಿರ್ಣಯ ಅತೀ ಶೀಘ್ರದಲ್ಲೇ ಸುಪ್ರೀಂ ಪರಿಶೀಲನೆಗೆ ಒಳಪಡಲಿದೆ ಹಾಗೂ ನ್ಯಾಯಕ್ಕೆ ಜಯವಾಗಲಿದೆ ಎಂದು ಸಂದೇಶದಲ್ಲಿ ತಿಳಿಸಿದರು.
ವಾಟ್ಸಪ್ ಸಂದೇಶ ಇಲ್ಲಿದೆ..
ಮಾನ್ಯ ನನ್ನ ಅಭಿಮಾನಿ ಕಾರ್ಯಕರ್ತ ಬಂಧುಗಳೆ, ಸುಪ್ರೀಂ ಆದೇಶವಿದ್ದಾಗಲೂ, ರಾಜೀನಾಮೆಯನ್ನು ಮೊದಲೇ ನೀಡಿದ್ದರೂ, ಕೆಲವರ ಒತ್ತಡದಿಂದ ಪಕ್ಷಪಾತಿಯಾಗಿ ತೆಗೆದುಕೊಂಡ ಇಂದಿನ ಸ್ಪೀಕರ್ ರ ಅನರ್ಹತೆ ನಿರ್ಣಯ ಅತೀ ಶೀಘ್ರದಲ್ಲೇ ಸುಪ್ರೀಂ ಪರಿಶೀಲನೆಗೆ ಒಳಪಡಲಿದೆ ಹಾಗೂ ನ್ಯಾಯಕ್ಕೆ ಜಯವಾಗಲಿದೆ.
ಯಾರೂ ದೃತಿಗೆಡಬೇಕಾಗಿಲ್ಲ, ನನ್ನ ಅಭಿಮಾನಿಗಳು ಹಾಗೂ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ, ಮತ್ತೆ ಜನತಾ ನ್ಯಾಯಾಲಯದ ಮುಂದೆ ಹೋಗಲಿದ್ದೇನೆ.
ನಿಮ್ಮೆಲ್ಲರಲ್ಲಿ ನನ್ನ ಈ ನಿರ್ದಾರಕ್ಕೆ ಕಾರಣಗಳನ್ನು ವಿಸ್ತಾರವಾಗಿ ತಿಳಿಸುತ್ತೇನೆ ಹಾಗೂ ನಿಮ್ಮೆಲ್ಲರ ಆಶಯದಂತೆ ನನ್ನ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ.
ಸ್ಪೀಕರ್ ನೀಡಿದ ನ್ಯಾಯಸಮ್ಮತವಲ್ಲದ ತೀರ್ಪಿಗೆ ಖಂಡಿತವಾಗಿಯೂ ಸುಪ್ರೀಂನಲ್ಲಿ ನ್ಯಾಯ ಸಿಗಲಿದೆ ಹಾಗೂ ನನ್ನ ರಾಜಕೀಯ ನಿರ್ಧಾರಕ್ಕೆ ನನ್ನ ಯಲ್ಲಾಪುರ-ಮುಂಡಗೋಡ್-ಬನವಾಸಿ ಕ್ಷೇತ್ರದ ಮತದಾರರು/ಅಭಿಮಾನಿ ಕಾರ್ಯಕರ್ತರು ನನ್ನಪರವಾದ ತೀರ್ಪು ನೀಡಲಿದ್ದಾರೆ ಎಂಬ ಅಚಲ ವಿಶ್ವಾಸವಿದೆ.
ನಿಮ್ಮ ವಿಶ್ವಾಸಿ
ಶಿವರಾಮ ಹೆಬ್ಬಾರ್












Click it and Unblock the Notifications