Get Updates
Get notified of breaking news, exclusive insights, and must-see stories!

ಅಂಕೋಲಾ: ಗುಡ್ಡ ಕುಸಿತ, ರಕ್ಷಣಾ ಕಾರ್ಯಕ್ಕೆ ಸೇನಾಪಡೆ ಆಗಮನ

ಕಾರವಾರ, ಜುಲೈ 21: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ಸಿಲುಕಿರುವ ಲಾರಿ ಚಾಲಕ ಅರ್ಜುನನಿಗಾಗಿ ಹುಡುಕಾಟ ಮುಂದುವರೆದಿದೆ. ಭಾರತೀಯ ಸೇನೆ ರಕ್ಷಣಾ ಕಾರ್ಯಾಚರಣೆಗೆ ಭಾನುವಾರ ಕೈ ಜೋಡಿಸಿದೆ.

ಉತ್ತರ ಕನ್ನಡ ಎಸ್ಪಿ ಟ್ವೀಟ್ ಮೂಲಕ, ಅಂಕೋಲಾ ತಾಲೂಕಿನ ಶಿರೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತದ ಘಟನೆಯಲ್ಲಿ ಸಿಲುಕಿರುವ ಕೇರಳ ಮೂಲದ ಅರ್ಜುನ ಪತ್ತೆಯ ಕಾರ್ಯಾಚರಣೆ ಮುಂದುವರೆದಿರುತ್ತದೆ ಎಂದು ಹೇಳಿದ್ದಾರೆ.

Shiroor Landslide Indian Army Joined Rescue Operation

ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆಯನ್ನು ನಡೆಸುತ್ತಿವೆ.

ಶಿರೂರು ಗುಡ್ಡ ಕುಸಿತದ ಭೀಕರತೆಯ ಬಗ್ಗೆ ತಿಳಿದ ಪ್ರಧಾನ ಮಂತ್ರಿಗಳ ಕಾರ್ಯಾಲಯವು, ಈ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಸೇನಾ ಪಡೆಯನ್ನು ಕಳುಹಿಸಿದೆ. ಈ ಪಡೆಯು ಭಾನುವಾರ ಮಧ್ಯಾಹ್ನ ಶಿರೂರಿಗೆ ತಲುಪಲಿದೆ. ಈ ಕುರಿತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿಗಳ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಅಂಕೋಲಾ ತಾಲೂಕಿನ ಶಿರೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, "ಕೇರಳದ ಲಾರಿ ಚಾಲಕ ಅರ್ಜುನ ಹುಡುಕಾಟದಲ್ಲಿ ಯಾವುದೇ ವಿಳಂಬವಾಗಿಲ್ಲ. ಕಾರ್ಯಾಚರಣೆಗೆ ಭಾರೀ ಮಳೆ ಸವಾಲಾಗಿದೆ. ಕೇರಳ ಸರ್ಕಾರ ನಮ್ಮ ಸಂಪರ್ಕದಲ್ಲಿದೆ" ಎಂದು ಹೇಳಿದರು.

"ಈ ದುರ್ಘಟನೆಯಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ್ದು, ರಕ್ಷಣಾ ಕಾರ್ಯಾಚರಣೆ ಬಳಿಕ ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಭರವಸೆ ನೀಡಿದರು.

ಈ ನಡುವೆ ಕೇರಳ ಮೂಲದ ಲಾರಿ ಚಾಲಕ ಅರ್ಜುನನ ಹುಡುಕಾಟ ತೀವ್ರಗೊಳಿಸಲು ಕೇಂದ್ರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಲಾಗಿದೆ. ಕೇರಳ‌ ಮೂಲದ ವಕೀಲ ಕೆ. ಆರ್. ಸುಭಾಷ್ ಚಂದ್ರನ್ ಪಿಐಎಲ್ ಸಲ್ಲಿಸಿದ್ದು, ಹಿರಿಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಮುಂದೆ ಅರ್ಜಿ ಮಂಡಿಸಲು ಸುಪ್ರೀಂಕೋರ್ಟ್ ರಿಜಿಸ್ಟ್ರಿ ಅನುಮತಿಯನ್ನು ನೀಡಿದೆ.

ಕೇರಳ ಮೂಲದ ಅರ್ಜುನ ಜುಲೈ 22ರಂದು ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಅರ್ಜುನ (34), ಕೃಷ್ಣಪ್ರಿಯಾ (24) ಪ್ರೀತಿಸಿ ವಿವಾಹವಾಗಿದ್ದರು. ಅರ್ಜುನ ಪತ್ನಿ ಕೃಷ್ಣಪ್ರಿಯಾ 6 ತಿಂಗಳ ಮಗುವಿನ ಜೊತೆ ಪತಿಯ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.

ಜೋಯಿಡಾದಿಂದ ಕೇರಳಕ್ಕೆ ಹೊರಟಿದ್ದ ಅರ್ಜುನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಉಂಟಾದ ಬಳಿಕ ನಾಪತ್ತೆಯಾಗಿದ್ದಾರೆ. ಚೆನ್ನಾಗಿ ದುಡಿದು ಸಹೋದರಿ ವಿವಾಹ ಮಾಡಬೇಕು, ಹೊಸದಾದ ಮನೆ ಕಟ್ಟಿ ಆನಂದದಿಂದ ಜೀವನ ಸಾಗಿಸಬೇಕು ಎಂದು ಕನಸು ಕಂಡಿದ್ದ ಅರ್ಜುನ ಪರಿಸ್ಥಿತಿ ಹೇಗಿದೆ? ಎಂಬ ಮಾಹಿತಿ ಸದ್ಯಕ್ಕೆ ಇಲ್ಲ.

ಅರ್ಜುನ ಚಾಲನೆ ಮಾಡುತ್ತಿದ್ದ ಲಾರಿಯ ಮೇಲೆ ಸುಮಾರು 60 ಟನ್ ಮಣ್ಣು ಬಿದ್ದಿದೆ. ಆದರೆ ಅವರ ಮೊಬೈಲ್ ರಿಂಗ್ ಆಗುತ್ತಿದೆ. ಬೇಗ ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಸಿದರೆ ಅರ್ಜುನ ಬದುಕುತ್ತಾರೆ ಎಂದು ಅವರ ಕುಟುಂಬದವರು ಒತ್ತಾಯಿಸಿದ್ದಾರೆ.

ಕರ್ನಾಟಕ ಸರ್ಕಾರದ ವಿರುದ್ಧ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಡ್ಡಕುಸಿದು ಇಷ್ಟು ದಿನ ಆದರೂ ಲಾರಿಯನ್ನು ತೆಗೆದಿಲ್ಲ. ಲಾರಿ ಚಾಲಕರು ಎಂದರೆ ರಾಜ್ಯ ಸರ್ಕಾರಕ್ಕೆ ಕಡೆಗಣನೆ. ಸರ್ಕಾರ ಕೂಡಲೇ ಲಾರಿ ಚಾಲಕನ ರಕ್ಷಣೆ ಮಾಡಬೇಕು. ಸೋಮವಾರ ಮಧ್ಯಾಹ್ನ 12 ಗಂಟೆಯೊಳಗೆ ಲಾರಿಯನ್ನು ಆಚೆ ತೆಗೆಯಬೇಕು. ಇಲ್ಲದಿದ್ದರೆ ಘಟನಾ ಸ್ಥಳದಲ್ಲೇ ಎಲ್ಲ ಲಾರಿಗಳನ್ನು ಅಡ್ಡವಾಗಿ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+