ವರುಣನ ಅಬ್ಬರಕ್ಕೆ ಕಡಲ ಕೊರೆತಕ್ಕೊಳಗಾದ ಠಾಗೋರ್ ತೀರ
ಕಾರವಾರ, ಆಗಸ್ಟ್ 05: ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ವರುಣನ ಅಬ್ಬರ ಜೋರಾದ ಪರಿಣಾಮ ನಗರದ ರವೀಂದ್ರನಾಥ ಕಡಲತೀರ ಅಲೆಗಳ ಹೊಡೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋಗುತ್ತಿದೆ.
Recommended Video
ಇಷ್ಟು ದಿನ ಕೊರೊನಾ ಸಂಕಷ್ಟದ ದಿನಗಳನ್ನು ಎದುರಿಸಿದ ಕರಾವಳಿ ಜನತೆಗೆ ಇದೀಗ ಮಳೆ ಮತ್ತೊಂದು ಆತಂಕ ತಂದೊಡ್ಡಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಮುದ್ರ ಮಟ್ಟ ಹೆಚ್ಚಾಗಿದ್ದು, ಆಳೆತ್ತರಕ್ಕೆ ಏಳುತ್ತಿರುವ ಅಲೆಗಳು ದಡಕ್ಕೆ ಅಪ್ಪಳಿಸಿ ಕಡಲಕೊರೆತ ಉಂಟುಮಾಡುತ್ತಿವೆ. ಠಾಗೋರ್ ಬೀಚ್ನ ಹನುಮಾನ ಪುತ್ಥಳಿ ಹಿಂಬದಿಯ ಕಡಲತೀರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲಕೊರೆತ ಉಂಟಾಗಿದ್ದು ತೀರಕ್ಕೆ ಹೊಂದಿಕೊಂಡೇ ಇದ್ದ ಕೆಲ ಮರಗಳು ಈಗಾಗಲೇ ಬುಡಮೇಲಾಗಿ ನೆಲಕ್ಕುರುಳಿವೆ.
ಎರಡೇ ದಿನದ ಮಳೆಗೆ ಈ ಪರಿಸ್ಥಿತಿ ಉಂಟಾಗಿದೆ. ಮುಂದೆ ಇನ್ನೂ ನಾಲ್ಕೈದು ದಿನಗಳ ಕಾಲ ಭಾರೀ ಮಳೆ ಸುರಿಯುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿರುವುದು ತೀರ ಪ್ರದೇಶದ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ನಿನ್ನೆಯಿಂದ ಮಳೆ ಸುರಿಯುತ್ತಿದ್ದು, ನದಿ, ಹಳ್ಳಗಳ ಮೂಲಕ ಸಮುದ್ರಕ್ಕೆ ನೀರು ಸೇರುತ್ತಿದೆ. ಆಳಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬೀಸುತ್ತಿರುವ ಜೋರಾದ ಗಾಳಿಯಿಂದಾಗಿ ರಕ್ಕಸ ಅಲೆಗಳು ಕಡಲಿಗೆ ಅಪ್ಪಳಿಸುತ್ತಿವೆ. ಕಡಲತೀರದಲ್ಲಿದ್ದ ಮೀನುಗಾರರು ಬೋಟು, ಬಲೆ ಮತ್ತಿತರ ವಸ್ತುಗಳು ಕಡಲಕೊರೆತದಿಂದಾಗಿ ಕೊಚ್ಚಿಕೊಂಡು ಹೋಗಿವೆ.

ಈ ಬಾರಿ ಮಳೆಗಾಲದ ಪ್ರಾರಂಭದಲ್ಲೇ ಕೊರೊನಾ ವಕ್ಕರಿಸಿದ ಪರಿಣಾಮ ಸಾಂಪ್ರದಾಯಿಕ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಸಾಧ್ಯವಾಗಿಲ್ಲ. ತೀರ ಪ್ರದೇಶದಲ್ಲಿ ಏಂಡಿ ಮೀನುಗಾರಿಕೆ ನಡೆಸಲು ಸಹ ಈ ಬಾರಿ ಅನನುಕೂಲತೆ ಉಂಟಾಗಿದ್ದು, ಇದೀಗ ಕಡಲಕೊರೆತ ಪ್ರಾರಂಭವಾಗಿದೆ. ಯಾಂತ್ರಿಕ ಮೀನುಗಾರಿಕೆ ಸಹ ಪ್ರಾರಂಭವಾಗಿದ್ದು ಇದರಿಂದ ಸಾಂಪ್ರದಾಯಿಕ ಮೀನುಗಾರರು ಈ ಬಾರಿ ನಷ್ಟವನ್ನೇ ಅನುಭವಿಸುವಂತಾಗಿದೆ.












Click it and Unblock the Notifications