ಉತ್ತರ ಕನ್ನಡಕ್ಕೂ ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ನಂಟು?
ಕಾರವಾರ, ಜುಲೈ 13: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಇದೀಗ ಉತ್ತರ ಜಿಲ್ಲೆಯವರೆಗೂ ತಲುಪಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇರೂರು ನಿವಾಸಿ ಗಣಪತಿ ಬಿ. ಭಟ್ರನ್ನು ಸಿಐಡಿ ಪೊಲೀಸರು ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ಗಂಭೀರತೆಯನ್ನು ಅರಿತು ಸಿಐಡಿಗೆ ತನಿಖೆಗೆ ಆದೇಶ ನೀಡಿತ್ತು. ಆದರೆ ತನಿಖೆಗೆ ನೀಡಿದ ನಂತರ ಹಲವರು ಪ್ರಕರಣದ ಹಿಂದೆ ಇರುವುದು ಬೆಳಕಿಗೆ ಬಂದಿತ್ತು.
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಬಂಧಿಸಲಾಗಿತ್ತು. ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಉತ್ತರ ಕನ್ನಡ ಜಿಲ್ಲೆಯವರೆಗೆ ಬಂದಿದೆ. ಸಿದ್ದಾಪುರ ತಾಲೂಕಿನ ನೆಲೆಮಾಂವ ಸೇವಾ ಸಹಕಾರ ಸಂಸ್ಥೆಯ ಅಧ್ಯಕ್ಷರಾಗಿರುವ ಗಣಪತಿ ಭಟ್ ವಿಚಾರಣೆ ನಡೆಸಲಾಗಿದೆ.

ಹಣ ನೀಡುತ್ತಿದ್ದ ಆರೋಪ; ಇತ್ತೀಚೆಗೆ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಈ ಇಬ್ಬರು ಅಭ್ಯರ್ಥಿಗಳು ಗಣಪತಿ ಭಟ್ ಹೆಸರನ್ನು ಹೇಳಿದ್ದರು. ಈ ಕುರಿತು ವಿಚಾರಣೆ ನಡೆಸಲು ಗಣಪತಿ ಭಟ್ ವಶಕ್ಕೆ ಪಡೆಯಲಾಗಿದೆ.
ಗಣಪತಿ ಭಟ್ ರಾಜಕಾರಣದಲ್ಲಿ ದೊಡ್ಡ ಮಟ್ಟದ ಹೆಸರನ್ನೇನು ಮಾಡಿಲ್ಲ. ಆದರೆ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದು ಇದನ್ನೇ ಲಾಭವನ್ನಾಗಿ ಮಾಡಿಕೊಳ್ಳಲು ಅಕ್ರಮ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಪಿಎಸ್ಐ ಅಭ್ಯರ್ಥಿಗಳಿಗೆ ಮಧ್ಯವರ್ತಿಯಾಗಿ ಪೊಲೀಸ್ ಅಧಿಕಾರಿಗಳಿಗೆ ಹಣ ನೀಡುತ್ತಿದ್ದರು ಎನ್ನುವುದು ಆರೋಪ.
ಅಮೃತ್ ಪೌಲ್ ಜೊತೆ ಉತ್ತಮ ಸಂಬಂಧ; ಅಧಿಕಾರಿಗಳ ಜೊತೆಗಿನ ಸಂಬಂಧದ ಮೂಲಕವೇ ಭಟ್ ಇಲಾಖೆಯ ಹಲವು ಅಧಿಕಾರಿಗಳ ವರ್ಗಾವಣೆಯನ್ನು ಸಹ ಮಾಡಿಸುವ ಕಾರ್ಯವನ್ನು ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಶಿರಸಿ, ಸಿದ್ದಾಪುರದ ಠಾಣೆಗಳಿಗೆ ಬರುವ ಬಹುತೇಕ ಪೊಲೀಸ್ ಅಧಿಕಾರಿಗಳು ಈತನ ಲಿಂಕ್ ಮೇಲೆಯೇ ವರ್ಗಾವಣೆಗೊಂಡು ಬಂದಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಅಲ್ಲದೇ ಈಗಾಗಲೇ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪೌಲ್ ಜೊತೆ ಸಹ ಗಣಪತಿ ಭಟ್ ಉತ್ತಮ ಸಂಬಂಧವನ್ನು ಹೊಂದಿದ್ದರು. ಸೋಮವಾರ ಬೆಂಗಳೂರಿನಿಂದ ಸಿದ್ದಾಪುರದ ಹೇರೂರಿಗೆ ಬಂದ ಸಿಐಡಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿಯಿಲ್ಲ. ಅಗತ್ಯವಿದ್ದರೆ ವಿಚಾರಣೆಗೆ ಮತ್ತೆ ಕರೆಯುವುದಾಗಿಯೂ ತಿಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು ಈ ಗಣಪತಿ ಭಟ್ ಗೃಹಸಚಿವ ಆರಗ ಜ್ಞಾನೇಂದ್ರ ಆಪ್ತ ಕಾರ್ಯದರ್ಶಿ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಅಲ್ಲದೇ ಅವರೊಂದಿಗಿನ ಕೆಲ ಪೋಟೋಗಳು ಕೂಡ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡತೊಡಗಿತ್ತು.

ಆದರೆ ಈ ಬಗ್ಗೆ ಸ್ವತಃ ಆರಗ ಜ್ಞಾನೇಂದ್ರ ಅವರೇ ನನ್ನ ಕಚೇರಿಯ ಸಿಬ್ಬಂದಿಯಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೊಲೀಸರ ವಶದಲ್ಲಿರುವ ವ್ಯಕ್ತಿ ಸಿದ್ದಾಪುರದವರು. ಆ ವ್ಯಕ್ತಿ ದಲ್ಲಾಳಿ ಕೆಲಸ ಮಾಡಿಕೊಂಡಿದ್ದರು. ಗಣಪತಿ ಹೆಗಡೆ ಎಂಬುವವರು ನನ್ನ ಆಪ್ತ ಕಾರ್ಯದರ್ಶಿಯಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.












Click it and Unblock the Notifications