ಯಲ್ಲಾಪುರ ಕ್ಷೇತ್ರದಲ್ಲಿ ಪ್ರಶಾಂತ್ ದೇಶಪಾಂಡೆ ಪರೇಡ್!
ಉತ್ತರ ಕನ್ನಡ, ಜನವರಿ 11: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂದಿನ ಚುನಾವಣೆ ಸ್ಪರ್ಧಿಸಲು ಪ್ರಶಾಂತ್ ದೇಶಪಾಂಡೆ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಈಗಲೇ ತಾಲೀಮನ್ನು ಪ್ರಾರಂಭಿಸಿದ್ದಾರೆ.
ಯಲ್ಲಾಪುರ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಸಚಿವ ಶಿವರಾಮ ಹೆಬ್ಬಾರ್ ಬಿಜೆಪಿ ಸೇರ್ಪಡೆಯಾದ ನಂತರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಕಣಕ್ಕೆ ಇಳಿದಿದ್ದರು. ಚುನಾವಣೆಯ ಸೋಲಿನ ನಂತರ ಭೀಮಣ್ಣ ತನ್ನ ಮೂಲ ಕ್ಷೇತ್ರ ಶಿರಸಿಯತ್ತ ಮುಖ ಮಾಡಿದ್ದರು.
ಮಾಜಿ ಸಚಿವ ಆರ್. ವಿ. ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಕಣಕ್ಕೆ ಇಳಿಯುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅಂತಿಮ ಹಂತದಲ್ಲಿ ಅವರು ಒಪ್ಪಿರಲಿಲ್ಲ. ಸದ್ಯ, ಕ್ಷೇತ್ರದಲ್ಲಿ ಯಾರನ್ನೂ ಈವರೆಗೆ ಕಾಂಗ್ರೆಸ್ ಭವಿಷ್ಯದ ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ.
ಈ ಹಿನ್ನಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಲು ಪ್ರಶಾಂತ್ ಚಿಂತನೆ ನಡೆಸಿದ್ದಾರೆ. ಇದೇ ಕಾರಣಕ್ಕೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮಾಡಿ ಪಕ್ಷ ಬಲವರ್ಧನೆಗೆ ಮುಂದಾಗಿದ್ದರು. ಇದಾದ ನಂತರ ಮುಂಡಗೋಡಿನಲ್ಲಿ ಪಕ್ಷದ ಬೆಂಬಲದಿಂದ ಆಯ್ಕೆಯಾದ ಪಂಚಾಯತಿ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.

ಪ್ರಶಾಂತ್ ದೇಶಪಾಂಡೆ ಚಿಂತನೆ
ಕ್ಷೇತ್ರದಲ್ಲಿ ಓಡಾಟ ನಡೆಸಿ ಚುನಾವಣೆ ವೇಳೆಗೆ ಜನರ ಅಭಿಪ್ರಾಯ ಪಡೆದು ಉತ್ತಮ ಬೆಂಬಲ ಸಿಕ್ಕರೆ ಅಭ್ಯರ್ಥಿಯಾಗಲು ಪ್ರಶಾಂತ್ ಚಿಂತನೆ ನಡೆಸಿದ್ದಾರೆ. ಇನ್ನು ಕ್ಷೇತ್ರದ ಮೇಲೆ ಪ್ರಶಾಂತ್ ತಂದೆ ಆರ್. ವಿ. ದೇಶಪಾಂಡೆಗೆ ತನ್ನದೇ ಆದ ಹಿಡಿತವಿದೆ. ಈ ಹಿಂದೆ ಕ್ಷೇತ್ರದ ಅರ್ಧ ಭಾಗದಷ್ಟು ತನ್ನ ಹಳಿಯಾಳ ಕ್ಷೇತ್ರಕ್ಕೆ ಬರುತ್ತಿದ್ದು, ಆರು ಬಾರಿ ಇದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿನ್ನಲೆಯಲ್ಲಿ ತನ್ನ ಹಳೆಯ ಪರಿಚಯ ಬಳಸಿಕೊಂಡು ಚುನಾವಣೆಯಲ್ಲಿ ಮಗನನ್ನ ನಿಲ್ಲಿಸಿ, ಗೆಲ್ಲಿಸಿಕೊಂಡು ಬರುವ ಮೂಲಕ ರಾಜಕೀಯ ನೆಲೆಯೊಂದನ್ನು ಕೊಡಿಸುವ ಚಿಂತನೆ ದೇಶಪಾಂಡೆಯವರದ್ದು.

ಪ್ರಚಾರವನ್ನು ನಡೆಸಿದ್ದರು
ಯಲ್ಲಾಪುರದಲ್ಲಿ ಕಳೆದ ಉಪ ಚುನಾವಣೆಯಲ್ಲಿ ಹೆಬ್ಬಾರ್ ವಿರುದ್ಧ ಸ್ಪರ್ಧಿಸಿದ್ದ ಭೀಮಣ್ಣ ಪರ ದೇಶಪಾಂಡೆ ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರ ನಡೆಸಿದ್ದರು. ಚುನಾವಣೆ ವೇಳೆಗೆ ತಾವು ಅಥವಾ ತಮ್ಮ ಮಗನನ್ನು ಅಭ್ಯರ್ಥಿಯಾಗಿ ಮಾಡಿದರೆ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಹಲವು ಮುಖಂಡರು ತಿಳಿಸಿದ್ದ ಹಿನ್ನಲೆಯಲ್ಲಿ ಪ್ರಶಾಂತ್ ಯಲ್ಲಾಪುರ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಕುರಿತು ಚಿಂತನೆ ನಡೆಸಿದ್ದಾರೆ.

ಕಾರ್ಯಕರ್ತರಲ್ಲಿ ಹುರುಪು
ಯಲ್ಲಾಪುರ ಕ್ಷೇತ್ರದಲ್ಲಿ ಕಳೆದ ಉಪ ಚುನಾವಣೆಯಾದ ನಂತರ ನಾಯಕರಿಲ್ಲ ಎನ್ನುವ ಬೇಸರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರದ್ದಾಗಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಪಕ್ಷವನ್ನು ಮುನ್ನಡೆಸುವ ನಾಯಕರೇ ಇಲ್ಲದಂತಾಗಿರುವುದು ದುರಾದೃಷ್ಟಕರ ಎಂದು ಹಲವು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು.
ಇದೀಗ ಕ್ಷೇತ್ರದ ಮೇಲೆ ಪ್ರಶಾಂತ್ ದೇಶಪಾಂಡೆ ಗಮನಹರಿಸಿರುವುದು ಕಾರ್ಯಕರ್ತರಲ್ಲಿ ಹುರುಪು ತಂದಿದೆ. ಕಾಂಗ್ರೆಸ್ ಬಲಿಷ್ಠವಾಗಿರುವ ಕ್ಷೇತ್ರದ ಮುಂಡಗೋಡ ಹಾಗೂ ಬನವಾಸಿಯಲ್ಲಿ ಜೊತೆ ಯಲ್ಲಾಪುರ ತಾಲೂಕಿನ ಕಿರುವತ್ತಿ ಭಾಗದಲ್ಲಿ ಪಕ್ಷವನ್ನ ಇನ್ನಷ್ಟು ಗಟ್ಟಿ ಮಾಡಿ, ಚುನಾವಣೆಗೆ ತಯಾರಾಗಲು ಕಾಂಗ್ರೆಸ್ ಸಹ ಸಿದ್ಧತೆ ಮಾಡಿಕೊಂಡಿದೆ.

ಆರ್. ವಿ. ದೇಶಪಾಂಡೆ
"ಕ್ಷೇತ್ರದಲ್ಲಿ ದೊಡ್ಡ ನಾಯಕರೆಲ್ಲ ಪಕ್ಷವನ್ನು ಬಿಟ್ಟು ಹೋದ ನಂತರ ಕಾರ್ಯಕರ್ತರು ನನ್ನನ್ನು ಹಾಗೂ ನನ್ನ ತಂದೆಯನ್ನು ಕ್ಷೇತ್ರಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದರು. 2008ರವರೆಗೆ ತಂದೆ ಈ ಕ್ಷೇತ್ರದ ಶಾಸಕರಾಗಿದ್ದರಿಂದ ಜನರಿಗೆ ನಮ್ಮ ಮೇಲೆ ಈಗಲೂ ಪ್ರೀತಿ ಇದೆ. ಹೀಗಾಗಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಹೊಣೆ ನನ್ನ ಹಾಗೂ ತಂದೆಯ ಮೇಲಿದೆ. ಚುನಾವಣಾ ಸಂದರ್ಭದಲ್ಲಿ ಯಾರು ಅಭ್ಯರ್ಥಿಯಾಗಲಿದ್ದಾರೆನ್ನುವುದನ್ನು ಪಕ್ಷವೇ ತೀರ್ಮಾನಿಸಲಿದೆ" ಎಂದು ಪ್ರಶಾಂತ್ ದೇಶಪಾಂಡೆ ಹೇಳಿದ್ದಾರೆ.












Click it and Unblock the Notifications