ಕೆಟ್ಟ ಭಾಷೆ ಬಳಸಿದರೆ ಜನ ಬೆಳೆಸಲ್ಲ: ಬಿಜೆಪಿಗರಿಗೆ ಸಿಎಂ ಟಾಂಗ್
ಕಾರವಾರ, ಡಿಸೆಂಬರ್ 7: "ರಾಜಕಾರಣಿಗಳು ಬಳಸುವ ಭಾಷೆಯ ಮೇಲೆ ಹಿಡಿತ ಇರಬೇಕು. ಕೆಟ್ಟ ಭಾಷೆ ಬಳಸಿದರೆ ಜನರು ಅವರನ್ನು ಬೆಳೆಸುವುದಿಲ್ಲ," ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪರಿವರ್ತನಾ ಯಾತ್ರೆಯಲ್ಲಿ ತಮ್ಮನ್ನು ಜರಿಯುತ್ತಿರುವ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ಶಿರಸಿಯಲ್ಲಿ ಸಿದ್ದರಾಮಯ್ಯನವರಿಗೆ ಮಹಿಳೆಯರಿಂದ ಅಪ್ಪುಗೆಯ ಸ್ವಾಗತ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವಿಕಾಸ ಆಶ್ರಮದಲ್ಲಿ ಗುರುವಾರ 13 ವಿವಿಧ ಸರ್ಕಾರಿ ಇಲಾಖೆಗಳ 148 ಕೋಟಿ ರೂ.ಗಳಷ್ಟು ಅನುದಾನದ 55 ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ಪಕ್ಷ ತಾರತಮ್ಯ ಮಾಡದೇ ಅನುದಾನವನ್ನು ನೀಡಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ ಧರ್ಮವನ್ನೇ ರಾಜಕೀಯ ಮಾಡಿಕೊಳ್ಳಬಾರದು. ಧರ್ಮದ ಹೆಸರಲ್ಲಿ ಯಾವಾಗಲೂ ರಾಜಕೀಯ ಮಾಡಬಾರದು. ಎಲ್ಲಾ ಧರ್ಮದವರನ್ನು ಕೂಡಿಕೊಂಡು ಬಾಳ್ವೆ ಮಾಡಬೇಕು ಎಂದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂದು ನೋಡದೇ ಅನುದಾನ ಬಿಡುಗಡೆ ಮಾಡಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಜನರು ಆಶೀರ್ವಾದ ನೀಡಿರುವುದು ಮಜಾ ಮಾಡಲು ಅಲ್ಲ. ಬದಲಾಗಿ ಕೆಲಸ ಮಾಡಲು. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ. ಚುನಾವಣೆಗೆ ಮೊದಲು 165 ಆಶ್ವಾಸನೆ ನೀಡಿದ್ದೆ. ಅದಕ್ಕೂ ಹೆಚ್ಚು ಬೇಡಿಕೆ ಈಡೇರಿಸಿದ್ದೇನೆ. ನಮ್ಮದು ಬಡವರ ಹಾಗೂ ಅಭಿವೃದ್ದಿ ಪರ ಸರಕಾರ ಎಂದರು.
ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡಿ ಧರ್ಮ ಸಂಸತ್ ಹೇಳಿಕೆಗಳು ಸಂವಿಧಾನಕ್ಕೆ ಅಪಾಯ ತರುವಂತಹದ್ದಾಗಿದೆ. ನಮ್ಮ ಸರ್ಕಾರ ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವ ಸರ್ಕಾರವಾಗಿದೆ. ಸಂವಿಧಾನಕ್ಕಿಂತ ದೊಡ್ಡ ಗ್ರಂಥ ಇನ್ನೊಂದಿಲ್ಲ. ಸಂವಿಧಾನಕ್ಕೆ ಧಕ್ಕೆ ತರುವಂತಹ ಮಾತುಗಳನ್ನು ಹೇಳಬಾರದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಸತೀಶ ಸೈಲ್ ಮುಂತಾದವರು ಇದ್ದರು.