ಕಾರವಾರ ತೀರದಲ್ಲಿ ಡಾಲ್ಫಿನ್ಗಳ ಚೆಲ್ಲಾಟ: ಯೋಜನೆ ಜಾರಿಗೆ ಒತ್ತಾಯ
ಕಾರವಾರ, ನವೆಂಬರ್ 27: ಕರಾವಳಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿದ್ದ ಪ್ರಾಜೆಕ್ಟ್ ಡಾಲ್ಫಿನ್ ಯೋಜನೆ ಈವರೆಗೂ ಅನುಷ್ಠಾನಗೊಂಡಿಲ್ಲ. ಆದರೆ ಕಾರವಾರದ ಸಮುದ್ರ ವ್ಯಾಪ್ತಿಯಲ್ಲಿ ಡಾಲ್ಫಿನ್ಗಳ ಆಟ ನಿತ್ಯವೂ ಕಣ್ಮನ ಸೆಳೆಯುತ್ತಿದ್ದು ಯೋಜನೆ ಜಾರಿಗೆ ಸೂಕ್ತ ಪ್ರದೇಶ ಎಂಬ ಅಭಿಪ್ರಾಯಗಳು ವ್ಯಕ್ತವಾಗತೊಡಗಿದೆ.
ಕೇಂದ್ರ ಸರ್ಕಾರ 2020ರಲ್ಲಿ ಪ್ರಾಜೆಕ್ಟ್ ಡಾಲ್ಫಿನ್ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಯೋಜನೆ ಘೋಷಣೆ ಮಾಡಿದ್ದರು. ಬಳಿಕ ರಾಜ್ಯ ಅರಣ್ಯ ಸಚಿವಾಲಯವು ಪ್ರಸ್ತಾವ ಸಲ್ಲಿಸಲು ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿತ್ತು.
ಕರಾವಳಿಯ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಉಲ್ಲೇಖಿಸಿ ರಾಜ್ಯ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಈವರೆಗೂ ಯೋಜನೆ ಅನುಷ್ಠಾನಗೊಂಡಿಲ್ಲ.

ಕ್ಯಾಮಾರಾ ಕಣ್ಣಿಗೆ ಸೆರೆಯಾದ ಬೃಹತ್ ಡಾಲ್ಫಿನ್ಗಳು
ಇದೀಗ ಕಾರವಾರ ಸಮುದ್ರ ವ್ಯಾಪ್ತಿಯ ಅಲ್ಲಲ್ಲಿ ಡಾಲ್ಫಿನ್ಗಳ ಚೆಲ್ಲಾಟ ಹೆಚ್ಚಾಗಿದೆ. ಇತ್ತೀಚೆಗೆ ಕೂರ್ಮಗಡ ವ್ಯಾಪ್ತಿಯಲ್ಲಿ ಆಳೆತ್ತರಕ್ಕೆ ಹಾರಾಡುವ ಡಾಲ್ಫಿನ್ಗಳ ದೃಶ್ಯಗಳು ಕ್ಯಾಮಾರಾ ಕಣ್ಣಿಗೆ ಸೆರೆಯಾಗಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
ಇನ್ನು ರಾಜ್ಯದ ಕರಾವಳಿಯ ಗೋಕರ್ಣ, ಮುರುಡೇಶ್ವರ, ನೇತ್ರಾಣಿ, ಕಾರವಾರ, ಉಡುಪಿ, ಮಂಗಳೂರು ಭಾಗದಲ್ಲಿ ಹಂಪ್ ಬ್ಯಾಕ್ ಡಾಲ್ಫಿನ್ಗಳು ಹೆಚ್ಚಾಗಿ ವಾಸಿಸುತ್ತಿವೆ ಎನ್ನಲಾಗಿದೆ. ಇವುಗಳ ಸಂರಕ್ಷಣೆ, ಅಧ್ಯಯನ, ಸಂಶೋಧನಾ ದೃಷ್ಟಿಯಿಂದ ಪ್ರಾಜೆಕ್ಟ್ ಡಾಲ್ಫಿನ್ ಯೋಜನೆ ಹೆಚ್ಚು ಸಹಕಾರಿಯಾಗಲಿದೆ.

ಅವೈಜ್ಞಾನಿಕ ಮೀನುಗಾರಿಕೆಯಿಂದ ಡಾಲ್ಫಿನ್ಗಳ ನಾಶ
ಇನ್ನು ಕಾರವಾರದ ಕೂರ್ಮಗಡ, ಲೈಟ್ ಹೌಸ್, ಮಾಜಾಳಿ ಸಮುದ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಡಾಲ್ಫಿನ್ಗಳು ಕಾಣ ಸಿಗುತ್ತವೆ. ಇವುಗಳ ನೋಡುವುದಕ್ಕಾಗಿಯೇ ಪ್ರತಿನಿತ್ಯ ಪ್ರವಾಸಿಗರು ದೋಣಿ ಮೂಲಕ ಪ್ರಯಾಣಿಸುತ್ತಾರೆ. ಇದರಿಂದ ಪ್ರವಾಸೋದ್ಯಮ ಕೂಡ ಬೆಳೆಯುತ್ತಿದೆ. ಅಲ್ಲದೆ ಕೆಲ ವರ್ಷಗಳಿಂದ ಈ ಭಾಗದಲ್ಲಿ ಬಂದರು ಕಾಮಗಾರಿ, ನೌಕಾನೆಲೆ, ಅವೈಜ್ಞಾನಿಕ ಮೀನುಗಾರಿಕೆ ಮುಂತಾದ ಕಾರಣಗಳಿಂದ ಡಾಲ್ಫಿನ್ ವಾಸಸ್ಥಾನಕ್ಕೆ ತೊಂದರೆಯಾಗಿದೆ. ಇದರಿಂದ ಡಾಲ್ಫಿನ ಸಾವಿಗೀಡಾಗುತ್ತಿವೆ ಎನ್ನಲಾಗುತ್ತಿದೆ. ಇದೆಲ್ಲದರ ಬಗೆಗೆ ಅಧ್ಯಯನ, ಸಂರಕ್ಷಣೆ ಕಾರಣ ಇಲ್ಲಿಯೇ ಯೋಜನೆ ಜಾರಿ ಮಾಡಬೇಕು ಎಂಬುದು ಕಡಲ ಜೀವಶಾಸ್ತ್ರಜ್ಞರ ಒತ್ತಾಯವಾಗಿದೆ.

ಡಾಲ್ಫಿನ್ಗಳನ್ನು ಉಳಿಸಲು ಪ್ರಾಜೆಕ್ಟ್ ಡಾಲ್ಫಿನ್ ಯೋಜನೆ
ಐಯುಸಿಎನ್(ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕಂರ್ವೇಷನ್ ಆಫ್ ನೇಚರ್) ವರದಿ ಪ್ರಕಾರ ಡಾಲ್ಫಿನ್ಗಳು ಅಳಿವಿನಂಚಿನಲ್ಲಿವೆ. ಕರ್ನಾಟಕದ ಕಾರವಾರದ ಕಡಲತೀರದಲ್ಲಿ ಮಾತ್ರ ಈಗಲೂ ಭಾರೀ ಸಂಖ್ಯೆಯ ಡಾಲ್ಫಿನ್ಗಳು ಆಳಸಮುದ್ರಕ್ಕೆ ತೆರಳುವ ಮೀನುಗಾರರಿಗೆ ಕಾಣಸಿಗುತ್ತವೆ. ಇಲ್ಲಿನ ದೇವಭಾಗ ಮತ್ತು ಲೈಟ್ ಹೌಸ್ ಕಡಲಲ್ಲಿ ಭಾರೀ ಸಂಖ್ಯೆಯ ಡಾಲ್ಫಿನ್ಗಳು ಈಜಾಟ ನಡೆಸುತ್ತಿದ್ದುದನ್ನು ಗಮನಿಸಿದ ಕಾರವಾರ ಕಡಲ ಜೀವವಿಜ್ಞಾನ ಸಂಸ್ಥೆ ಮತ್ತು ಅರಣ್ಯ ಇಲಾಖೆ ಡಾಲ್ಫಿನ್ಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಯೋಜನೆ ಸಿದ್ಧಪಡಿಸಿದೆ. ಜೊತೆಗೆ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.

10ಕೋಟಿ ವೆಚ್ಚದಲ್ಲಿ ಪ್ರಾಜೆಕ್ಟ್ ಡಾಲ್ಫಿನ್ ಯೋಜನೆ
ಕೂರ್ಮಗಡ ನಡುಗಡ್ಡೆ ಸಮೀಪದ ಕಡಲಲ್ಲಿ ಕೆಲ ಭಾಗಗಳಲ್ಲಿ ಬೋಟ್ ಹೋಗುವುದಕ್ಕೆ ನಿರ್ಬಂಧ ಹೇರಿ ಅಲ್ಲಿ ಸೂಕ್ಷ್ಮ ವಲಯದ ವಾತಾವರಣ ಕಲ್ಪಿಸಿ ಪ್ರವಾಸಿಗರಿಗೆ ಡಾಲ್ಫಿನ್ಗಳನ್ನು ಹತ್ತಿರದಿಂದ ತೋರಿಸುವ ಯೋಜನೆ ಇದಾಗಿದೆ. ಯೋಜನೆಗೆ ಸುಮಾರು 10ಕೋಟಿ ರೂಪಾಯಿ ವೆಚ್ಚವಾಗಲಿದ್ದು ಅದಕ್ಕೆ ಕೇಂದ್ರದ ಅನುಮತಿ ಕೊಟ್ಟಿದ್ದೇ ಆದಲ್ಲಿ ಭಾರೀ ಸಂಖ್ಯೆಯ ಪ್ರವಾಸೋದ್ಯಮ ಮಾತ್ರವಲ್ಲದೇ ಡಾಲ್ಫಿನ್ಗಳನ್ನು ಸಹ ಉಳಿಸಲು ಸಾಧ್ಯವಿದೆ ಎಂದು ಕಡಲ ಜೀವಶಾಸ್ತ್ರಜ್ಞರು ಹೇಳುತ್ತಾರೆ.












Click it and Unblock the Notifications