ಪರೇಶ್ ಮೇಸ್ತಾ ಸಾವು: ಸಿಬಿಐ ರಿಪೋರ್ಟ್ಗೆ ಕುಟುಂಬದಿಂದ ಆಕ್ಷೇಪಣೆ ಅರ್ಜಿ ಸಲ್ಲಿಕೆ
ಕಾರವಾರ, ನವೆಂಬರ್ 16: ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ಕುರಿತು ಪರೇಶ್ ತಂದೆ ಕಮಲಾಕರ ಮೇಸ್ತಾ ಹಾಗೂ ಅವರ ವಕೀಲ ನಾಗರಾಜ ನಾಯಕ ಕೋರ್ಟ್ಗೆ ಹಾಜರಾಗಿ ಬಿ ರಿಪೋರ್ಟ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲು ಮನವಿ ಮಾಡಿದ್ದು, ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಹೊನ್ನಾವರದ ಜೆಎಂಎಫ್ ಸಿ ನ್ಯಾಯಲಯದ ಮುಂದೆ ಹಾಜರಾದ ವಕೀಲ ನಾಗರಾಜ ನಾಯಕ ಬಿ ರಿಪೋರ್ಟ್ ಹಾಕಿದ ಹಿನ್ನೆಲೆಯಲ್ಲಿ ತಮಗೆ ತಕರಾರಿಗೆ ಅವಕಾಶ ಮಾಡಿಕೊಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ. ಅದರಂತೆ ವರದಿಗೆ ಸಮ್ಮತಿಯಿಲ್ಲದ ಹಿನ್ನಲೆಯಲ್ಲಿ ಆಕ್ಷೇಪಣೆ ಸಲ್ಲಿಕೆಗೆ ನ್ಯಾಯಾಲಯ ಕೂಡ ಸಮ್ಮತಿಸಿದ್ದು, ಡಿಸೆಂಬರ್ 21 ರಂದು ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಎಂದು ಜನ ಹೇಳುತ್ತಿದ್ದಾರೆ: ಸಿದ್ದರಾಮಯ್ಯ
2017ರ ಡಿಸೆಂಬರ್ 6 ರಂದು ನಾಪತ್ತೆಯಾಗಿದ್ದ ಯುವಕ ಪರೇಶ್ ಮೇಸ್ತಾ ಡಿಸೆಂಬರ್ 8 ರಂದು ಪಟ್ಟಣದ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಯುವಕನ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ್ದ ಹಿನ್ನಲೆ ಸಿಬಿಐಗೆ ಪ್ರಕರಣ ವಹಿಸಲಾಗಿತ್ತು. ಸುದೀರ್ಘ 4 ವರ್ಷಗಳ ತನಿಖೆ ನಡೆಸಿ ಕಳೆದ ಅಕ್ಟೋಬರ್ 6 ರಂದು ಬಿ ರಿಪೋರ್ಟ್ ಸಲ್ಲಿಸಿತ್ತು.
ಆದರೆ ಸಿಬಿಐ ಬಿ ರಿಪೋರ್ಟ್ ಬಳಿಕ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಅವರಿಗೆ ನೋಟೀಸ್ ನೀಡಿ ನ್ಯಾಯಾಲಯದ ಮುಂದೆ ಹಾಜರಾಗಿ ವರದಿ ಕುರಿತು ಅಭಿಪ್ರಾಯ ಸಲ್ಲಿಕೆಗೆ ಸೂಚಿಸಲಾಗಿತ್ತು. ಅದರಂತೆ ಸಿಬಿಐ ಸಲ್ಲಿಸಿದ ವರದಿಗೆ ಒಪ್ಪಿಗೆಯಿಲ್ಲ ಎಂದ ಪರೇಶ ಮೇಸ್ತಾ ಕುಟುಂಬ ವಕೀಲರಾದ ನಾಗರಾಜ ನಾಯಕ ಅವರ ಮೂಲಕ ಹೊನ್ನಾವರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಹಾಜರಾಗಿ ಮನವಿ ಸಲ್ಲಿಸಿದ್ದಾರೆ.
ಹಿಂದಿನ ಸರಕಾರ ಪರೇಶ್ ಪ್ರಕರಣವನ್ನು ಸಹಜ ಸಾವು ಎಂಬಂತೆ ಬಿಂಬಿಸಲು ನಾನಾ ಪ್ರಯತ್ನಗಳು ನಡೆಸಿದೆ. ಈ ಪ್ರಕರಣ ಬಿ ರಿಪೋರ್ಟ್ ಕಾಣಬೇಕೆಂದು ಸಿಬಿಐಗೆ ವಹಿಸುವ ಮೊದಲೇ ಸಾಕಷ್ಟು ಒತ್ತಾಯಿಸಲಾಗಿದೆ ಎಂದು ಪ್ರಾಥಮಿಕ ನೋಟದಿಂದ ಈ ವಿಚಾರಗಳು ಕಂಡು ಬಂದಿವೆ ಎನ್ನಲಾಗುತ್ತಿದೆ. ಹಾಗಾಗಿ ಬಿ ರಿಪೋರ್ಟ್ಗೆ ಆಕ್ಷೇಪಣೆ ಸಲ್ಲಿಸಿದ್ದು, ಪ್ರಕರಣ ಸಂಬಂಧಿಸಿದಂತೆ ನಮಗೆ ನ್ಯಾಯ ದೊರೆಯುವ ಭರವಸೆ ಇದೆ ಎಂದು ವಕೀಲ ನಾಗರಾಜ ನಾಯಕ್ ತಿಳಿಸಿದ್ದಾರೆ.