ಸ್ವಾತಂತ್ರ ಬಂದು 7 ದಶಕ ಕಳೆದರೂ ರಸ್ತೆ ಭಾಗ್ಯ ಕಾಣದ ಕುಮಟಾದ ಈ ಗ್ರಾಮ!
ಕಾರವಾರ, ಜೂನ್ 5: ಅದು ಮೂಲಭೂತ ಸೌಕರ್ಯ ವಂಚಿತ ಕುಗ್ರಾಮ. ಕನಿಷ್ಠ ಸೌಲಭ್ಯಕ್ಕಾಗಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ಇಬ್ಬರು ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ತೆರಳಿ ಸ್ಥಳೀಯರ ಸಮಸ್ಯೆ ಆಲಿಸಿದ್ದರು. ಇಷ್ಟಾದರೂ ಕೂಡ ಗ್ರಾಮದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮಸ್ಥರು ಅಲೆದಾಡಬೇಕಾಗಿದೆ.
ಹೌದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಕನಿಷ್ಠ ಮೂಲಭೂತ ಸೌಲಭ್ಯವನ್ನೂ ಪಡೆಯುವಲ್ಲಿ ವಿಫಲವಾಗಿದೆ. ಕುಮಟಾ-ಸಿದ್ದಾಪುರ ಮುಖ್ಯ ರಸ್ಥೆಯಿಂದ ಕೇವಲ 8 ಕಿ. ಮೀ. ದೂರದಲ್ಲಿದ್ದರೂ ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲ. ಅನಾರೋಗ್ಯಕ್ಕೆ ಒಳಗಾದವರನ್ನು ಹೊತ್ತು ಸಾಗಬೇಕು. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತಲೆಯ ಮೇಲೆಯೇ ಹೊತ್ತು ಓಡಾಡಬೇಕಾದ ಸ್ಥಿತಿ ಇದೆ.
ಮಂಡ್ಯ ವಿಶೇಷ ಚೇತನ ಯುವಕನ ಸಮಸ್ಯೆ 2 ದಿನದಲ್ಲಿ ಪರಿಹರಿಸಿದ ಮೋದಿ
ಗ್ರಾಮದಲ್ಲಿ ಸುಮಾರು 56 ಮನೆಗಳಿದ್ದು ಬಹುತೇಕರು ರೈತಾಗಿದ್ದಾರೆ. ದುಡಿದು ತಿನ್ನುವ ಇವರಿಗೆ ಮಳೆಗಾಲದಲ್ಲಿ ಸಣ್ಣ ವಸ್ತುವಿಗೂ ನಡದೆ ಸಾಗಬೇಕಾಗಿದೆ. ಅದೇಷ್ಟೋ ಮನೆಗಳಲ್ಲಿ ಮದುವೆಗೆ ಬಂದ ಮಕ್ಕಳು ಮನೆಯಲ್ಲಿದ್ದರೂ ರಸ್ತೆ ಇಲ್ಲ ಎಂಬ ಕಾರಣಕ್ಕೆ ಸಂಬಂಧ ಬೆಳೆಸಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಮಕ್ಕಳ ಮದುವೆ ಮಾಡಲಾಗದ ಸ್ಥಿತಿ ಇಲ್ಲಿ ತಂದೆತಾಯಿಗಳದ್ದಾಗಿದೆ.
ಕಾಡಾನೆಗಳ ಹಾವಳಿಯಿಂದ ಹೈರಾಣಾಗಿರುವ ಅನ್ನದಾತರು
ಶಿಕ್ಷಣ ಮೊಟಕುಗೊಳಿಸುತ್ತಿರುವ ಮಕ್ಕಳು
ಇನ್ನು ಗ್ರಾಮದಲ್ಲಿ ಐದನೇ ತರಗತಿವರೆಗೆ ಮಾತ್ರ ಶಾಲೆ ಇದೆ. ಮುಂದೆ ಓದಬೇಕಾದರೇ ಗ್ರಾಮದಿಂದ ನಿತ್ಯ 8 ಕಿ. ಮೀ. ದಟ್ಟ ಅರಣ್ಯದಲ್ಲಿ ನಡೆದು ಸಾಗಿ ಬಸ್ ಮೂಲಕ ತೆರಳಬೇಕಿದೆ. ಇಲ್ಲವೇ ಯಾವುದಾದರೂ ಸಂಬಂಧಿಕರ ಮನೆಯಲ್ಲೋ ಅಥವಾ ಹಾಸ್ಟೆಲ್ಗಳಲ್ಲೋ ಮಕ್ಕಳನ್ನು ಬಿಟ್ಟು ಓದಿಸಬೇಕಾಗಿದೆ. ಕೆಲವು ಮಕ್ಕಳಿಗೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ.
3 ಕಿ.ಮೀ ರಸ್ತೆಯಾದ್ರೆ ಸಮಸ್ಯೆಗೆ ಮುಕ್ತಿ
ಗ್ರಾಮವೂ ಮುಖ್ಯ ರಸ್ತೆಯಿಂದ 7 ಕಿ. ಮೀ. ದೂರ ಇದೆ. ಆದರೆ ಘಟ್ಟದ ಆರಂಭದಲ್ಲಿ ತುರ್ತಾಗಿ ಕೇವಲ 3 ಕಿ. ಮೀ. ರಸ್ತೆ ನಿರ್ಮಾಣ ಮಾಡಿದಲ್ಲಿ ಗ್ರಾಮಸ್ಥರು ಸುಲಭವಾಗಿ ಸಂಚಾರ ಮಾಡಲು ಸಾಧ್ಯವಿದೆ. ಇಷ್ಟಾದರೂ ಜನಪ್ರತಿನಿಧಿಗಳು ಅನುದಾನ ಮಂಜೂರಿಸಲು ಮುಂದಾಗುತ್ತಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.
ಎರಡೆರಡು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
ಇನ್ನು ಈ ಎಲ್ಲ ಸಮಸ್ಯೆಗಳಿಂದ ಬೇಸತ್ತು ಗ್ರಾಮಸ್ಥರು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ 2019 ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಗ್ರಾಮ ವಾಸ್ತವ್ಯ ನಡಿಸಿ ಸ್ಥಳೀಯರ ಸಮಸ್ಯೆ ಆಲಿಸಿದ್ದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪಿಂಚಣಿ, ಶಾಲೆಗೆ ಸುಣ್ಣ ಬಣ್ಣ ಹೀಗೆ ಸಣ್ಣಪುಟ್ಟ ಸಮಸ್ಯೆಗಳು ಮಾತ್ರ ಬಗೆಹರಿಯುವಂತಾಗಿತ್ತು. ಆದರೆ ಈ ಬಾರಿ ಮತ್ತೆ ಕಂದಾಯ ಇಲಾಖೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈಗಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತೆರಳಿ ಸಮಸ್ಯೆ ಆಲಿಸಿದ್ದರು.
ಗ್ರಾಮಸ್ಥರಿಗೆ ಸಮಸ್ಯೆಗಳಿಗೆ ಸ್ಪಂದಿಸಿದ ಅವರು ಒಂದಿಷ್ಟು ಸಮಸ್ಯೆಗಳಿಗೆ ಮುಕ್ತಿ ದೊರಕಿಸಿದ್ದರು. ಅಲ್ಲದೆ ಮೂಲ ಸಮಸ್ಯೆಯಾಗಿದ್ದ ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಮಳೆಗಾಲ ಸಮೀಪಿಸಿದ್ದು ಈವರೆಗೂ ಯಾವುದೇ ಯೋಜನೆ ಜಾರಿಯಾಗಿಲ್ಲ. ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನಮಗೆ ಅತಿ ಅಗತ್ಯವಿರುವ ರಸ್ತೆ ನಿರ್ಮಿಸಿಕೊಡಬೇಕು ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಅರಣ್ಯ ಪ್ರದೇಶದಲ್ಲಿರುವುದೇ ಕಾರಣ
ಇನ್ನು ಈ ಬಗ್ಗೆ ಸ್ಥಳೀಯ ಶಾಸಕರಾದ ದಿನಕರ ಶೆಟ್ಟಿ ಬಳಿ ಕೇಳಿದರೆ ಅರಣ್ಯ ಇಲಾಖೆ ಸಮಸ್ಯೆಯ ಕಥೆ ಹೇಳುತ್ತಿದ್ದಾರೆ. ಗ್ರಾಮವೂ ಅರಣ್ಯ ಪ್ರದೇಶದಲ್ಲಿದ್ದು ಈಗಾಗಲೇ ಸ್ವಲ್ಪ ಅನುದಾನ ನೀಡಿದ್ದೇನೆ. ಮುಂದೇ ಈ ಬಗ್ಗೆ ಪ್ರಯತ್ನ ನಡೆಸುವುದಾಗಿ ತಿಳಿಸುತ್ತಾರೆ. ಒಟ್ಟಾರೆ ಗ್ರಾಮಕ್ಕೆ ಕೇವಲ 3 ಕಿ. ಮೀ. ರಸ್ತೆಯಾದರೆ ಆ ಗ್ರಾಮದ ಎಲ್ಲ ಸಮಸ್ಯೆಗಳು ಬಗೆಹರಿಯುವಂತಿದ್ದರೂ, ಜನಪ್ರತಿನಿಧಿಗಳು ಮಾತ್ರ ದಿವ್ಯ ನಿರ್ಲಕ್ಷ್ಯವಹಿಸಿದಂತಿದೆ. ಜಿಲ್ಲಾಧಿಕಾರಿಗಳು ಎರಡೆರಡು ಬಾರಿ ಗ್ರಾಮ ವಾಸ್ತವ್ಯ ಮಾಡಿದರು ಸಮಸ್ಯೆ ಬಗೆಹರಿಸಲು ಅನುದಾನದ ಕೊರತೆ ಕಥೆ ಹೇಳುತ್ತಿದ್ದು ಇನ್ನಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಕೂಡಿ ಗ್ರಾಮಕ್ಕೆ ಸೂಕ್ತ ರಸ್ತೆ ಒದಗಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.