ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬಳಸಬೇಡಿ: ಅನಂತಕುಮಾರ ಹೆಗಡೆ
ಕಾರವಾರ, ಅಕ್ಟೋಬರ್ 20: 'ನವೆಂಬರ್ ನಲ್ಲಿ ರಾಜ್ಯಾದ್ಯಂತ ನಡೆಯಲಿರುವ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಹೆಸರನ್ನು ನಮೂದಿಸಬಾರದು' ಎಂದು ಕೇಂದ್ರ ಕೌಶಲ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅವರ ಆಪ್ತ ಸಹಾಯಕರಿಂದ ರಾಜ್ಯ ಮುಖ್ಯ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿಗೆ ಪತ್ರ ರವಾನೆಯಾಗಿದೆ.
ಕಟ್ಟಾ ಹಿಂದುತ್ವವಾದಿ ಎಂದು ಹೇಳಿಸಿಕೊಳ್ಳುವ ಹೆಗಡೆಯವರು, ಕೇಂದ್ರ ಸಚಿವರಾದರೂ ಕೂಡ ಅನ್ಯ ಧರ್ಮ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಇದೀಗ ಹಲವರಿಂದ ಟೀಕೆಗಳು ಬಂದಿವೆ. ಮುಂದಿನ ತಿಂಗಳು ಸರಕಾರದಿಂದ ಆಚರಿಸುವ ಟಿಪ್ಪು ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಲೇ ಬಾರದು ಎಂದು ಹೇಳುವುದು ಎಷ್ಟು ಸರಿ ಎಂದು ಈಗ ಜನ ಪ್ರಶ್ನಿಸುತ್ತಿದ್ದಾರೆ.

ಕಳೆದ ಬಾರಿ ಕೂಡ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಅನಂತ ಕುಮಾರ್ ಹೆಗಡೆ ಇದೇ ರೀತಿ ಪತ್ರ ಬರೆದಿದ್ದರು. ಕಳೆದ ಎರಡು ವರ್ಷದಿಂದ ಪ್ರತಿ ನವೆಂಬರ್ ಹತ್ತನೇ ತಾರೀಕು ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರಕಾರದಿಂದ ಆಚರಿಸಲಾಗುತ್ತಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಕೇಳಿಬಂದಿದ್ದು, ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಭಾರೀ ವಿರೋಧ ವ್ಯಕ್ತವಾಗಿದೆ.












Click it and Unblock the Notifications