ವಿಷ ಆಹಾರ ಸೇವನೆಯಿಂದ 50 ಕ್ಕೂ ಅಧಿಕ ಜಾನುವಾರುಗಳ ಸಾವು..!?
ಕಾರವಾರ, ಮೇ 2 : ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಟಗಾರಕೊಪ್ಪ ಹಾಗೂ ಶಿರಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದಕ್ಕಿದ್ದಂತೆ 50 ಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟಿದ್ದು, ಸುತ್ತಲಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಕಟಗಾರಕೊಪ್ಪ ಹಾಗೂ ಶಿರಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಭಾಗದಲ್ಲಿ ಹಂದಿಸಾಕಣೆ ಕೇಂದ್ರವಿದೆ. ಹಂದಿ ಸಾಕಣೆ ಕೇಂದ್ರದ ಸುತ್ತಲೂ ಸುಮಾರು 40 ರಿಂದ 50 ಹಸುಗಳು ಸತ್ತುಬಿದ್ದಿದ್ದು, ಸುತ್ತಲಿನ ಗ್ರಾಮದ ರೈತರ ಆತಂಕಕ್ಕೆ ಕಾರಣವಾಗಿದೆ.

ಗ್ರಾಮಸ್ಥರು ಏನ್ ಹೇಳ್ತಾರೆ?
ಇಲ್ಲಿ ಹಂದಿಗಳಿಗಾಗಿ ಆಹಾರ ಹಾಕಿಡಲಾಗುತ್ತದೆ. ಈ ಆಹಾರದಲ್ಲೇ ಬೇರೆ ವಿಷ ಆಹಾರವನ್ನೂ ಸೇರಿಸಿಡಲಾಗಿತ್ತು. ಅದನ್ನು ತಿಂದು ಜಾನುವಾರುಗಳು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇಲ್ಲಿನ ಸುತ್ತಮುತ್ತ ಆಗಾಗ್ಗೆ ಕೆಲವು ಹಸುಗಳು ಸಾಯುತ್ತಿದ್ದು ಕಾರಣ ತಿಳಿಯದ ಗ್ರಾಮಸ್ಥರು ಯಾವುದೋ ಕಾಯಿಲೆಯಿಂದ ಸತ್ತಿರಬೇಕೆಂದು ತಿಳಿದು ಸುಮ್ಮನಿದ್ದರು.
ಆದರೆ ಈಗ ಎರಡು ದಿನಗಳಿಂದ 40 ರಿಂದ 50 ಹಸುಗಳು ಸತ್ತುಬಿದ್ದಿದ್ದು ನೋಡುಗರ ಮನ ಕಲಕುವಂತಿದೆ. ಈ ವಿಚಾರವಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕೇಸ್ ದಾಖಲಿಸಿದ್ದು, ಕೂಡಲೇ ಕೇಂದ್ರವನ್ನು ಮುಚ್ಚುವಂತೆ ಮೂರು ದಿನಗಳ ಗಡುವು ನೀಡಲಾಗಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ..

ಮರಣೋತ್ತರ ವರದಿ ಬರಬೇಕು..
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಾಲೂಕು ಪಶು ವೈದ್ಯಾಧಿಕಾರಿ ಡಾ.ಪ್ರದೀಪ್, ಮೇಲ್ನೋಟಕ್ಕೆ ಜಾನುವಾರಗಳ ಸಾವು ವಿಷ ಆಹಾರ ಸೇವನೆಯಿಂದ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಮರಣೋತ್ತರ ವರದಿಯ ನಂತರವಷ್ಟೆ ನಿಖರ ಕಾರಣ ತಿಳಿದುಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಹೈನುಗಾರರಿಗೆ ತುಂಬಲಾರದ ನಷ್ಟ
ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಒಂದೆರೆಡು ಜಾನುವಾರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿದ್ದವು. ಆದರೆ, ಈಗ ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಮೃತಪಟ್ಟಿರುವುದು ಈ ಭಾಗದ ಹೈನುಗಾರರಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ.

ಅವೈಜ್ಞಾನಿಕ ನಿರ್ವಹಣೆ
vಹಿಂದಿನ ಕಾಲದಿಂದಲೂ ಈ ಭಾಗ ಹುಲ್ಲುಗಾವಲು ಪ್ರದೇಶವಾಗಿದ್ದು, ಸುತ್ತಲಿನ ಎಲ್ಲಾ ಊರುಗಳಿಂದ ಸಾವಿರಾರು ಗೋವುಗಳು ಮೇವಿಗಾಗಿ ಇಲ್ಲಿಯೇ ಬರುತ್ತವೆ.
ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ನಿರ್ಮಾಣವಾದ ಹಂದಿ ಸಾಕಣೆ ಕೇಂದ್ರದ ಅವೈಜ್ಞಾನಿಕ ನಿರ್ವಹಣೆಯಿಂದ ವಿಷಯುಕ್ತ ಕೊಳಚೆ ನೀರು ಹುಲ್ಲುಗಾವಲಿಗೆ ಬಿಡುತ್ತಿರುವುದರಿಂದ ಸುತ್ತಲಿನ ಪರಿಸರ ಮಾಲಿನ್ಯಗೊಳ್ಳುತ್ತಿದೆ.












Click it and Unblock the Notifications