ವರಿಷ್ಠರು, ದೇಶಪಾಂಡೆ ಎದುರೇ ಟಿಕೆಟ್ ಕೇಳಿದ ಘೋಟ್ನೇಕರ್!
ಕಾರವಾರ, ಆಗಸ್ಟ್ 01; ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ-ಜೊಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಆರ್. ವಿ. ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಘೋಟ್ನೇಕರ್ ನಡುವೆ ಗುದ್ದಾಟ ಮುಂದುವರೆದಿದೆ.
ಪಕ್ಷದ ವರಿಷ್ಠರ ಮುಂದೆಯೇ ತಾನು ಹಳಿಯಾಳ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಎಂದು ಘೋಟ್ನೇಕರ್ ಹೇಳಿರುವ ವಿಡಿಯೋ ಇದೀಗ ಕ್ಷೇತ್ರದಲ್ಲಿ ವೈರಲ್ ಆಗಿದೆ. ಮುಂಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ? ಎಂಬ ಕುತೂಹಲ ಜನರದ್ದಾಗಿದೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಕರ್ನಾಟಕ ಕಾಂಗ್ರೆಸ್ ವಿಭಾಗ ಮಟ್ಟದ ಸಭೆ ಆಯೋಜನೆ ಮಾಡಿತ್ತು. ವಿಭಾಗದ ವ್ಯಾಪ್ತಿಗೆ ಬರುವ ವಿವಿಧ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಜೊತೆಗೆ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಕುರಿತು ಸಮಾಲೋಚನೆಯನ್ನು ಸಭೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು.

ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂರೆ ನಡೆದ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಸಚಿವ ಆರ್. ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಘೋಟ್ನೇಕರ್ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರುಗಳು, ಪಕ್ಷದ ಮುಖಂಡರುಗಳು ತೆರಳಿದ್ದರು. ಸಭೆಯಲ್ಲಿ ಮಾತನಾಡಿದ ಘೋಟ್ನೇಕರ್ ಕ್ಷೇತ್ರದಲ್ಲಿ ಪಕ್ಷದಲ್ಲಿ ಆಗಿರುವ ಗೊಂದಲದ ಬಗ್ಗೆ ನಾಯಕರ ಮುಂದೆ ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?; "ನಾನು 40 ವರ್ಷದಿಂದ ದೇಶಪಾಂಡೆಯವರ ಜೊತೆ ದುಡಿಯುತ್ತಿದ್ದೇನೆ. ಅವರು ಏನು ಹೇಳುತ್ತಾರೋ ಹಾಗೇ ನಾವು ಕೆಲಸ ಮಾಡುತ್ತಿದ್ದೇವೆ. ಎಪಿಎಂಸಿ ಸೇರಿದಂತೆ ಹಲವೆಡೆ ಹಿಡಿತವನ್ನು ಸಾಧಿಸಿದ್ದೇನೆ. ಆದರೆ ಕೆಲ ದಿನದ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಕಾರ್ಯಕರ್ತರನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದು ಅಸಿಂಧು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೇಳಿರುವುದು ಸರಿಯಲ್ಲ" ಎಂದು ಹೇಳಿರುವುದು ವಿಡಿಯೋದಲ್ಲಿದೆ.
"ನನಗೂ 40 ವರ್ಷದಿಂದ ಪಕ್ಷದಲ್ಲಿ ಏನಿದೆ ಎಂದು ಗೊತ್ತಿದೆ. ಈವರೆಗೂ ಪಕ್ಷಕ್ಕೆ ಯಾರನ್ನೇ ಸೇರ್ಪಡೆ ಮಾಡಿದರೂ ಯಾರೂ ಏನನ್ನೂ ಹೇಳಿರಲಿಲ್ಲ. ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆ ನನಗೆ ಬೇಸರ ತಂದಿದೆ. ಮುಂದಿನ ಚುನಾವಣೆಯಲ್ಲಿ ನಾನು ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಿಮ್ಮ ಆಶೀರ್ವಾದ ನನಗೆ ಬೇಕು" ಎಂದು ದೇಶಪಾಂಡೆ ಮುಂದೆಯೇ ಕಾಂಗ್ರೆಸ್ ನಾಯಕರ ಬಳಿ ಘೋಟ್ನೇಕರ್ ಮನವಿ ಮಾಡಿಕೊಂಡಿದ್ದಾರೆ.
ಘೋಟ್ನೇಕರ್ ಹಾಗೂ ಆರ್. ವಿ. ದೇಶಪಾಂಡೆ ನಡುವೆ ಹಲವು ದಿನಗಳಿಂದ ಕ್ಷೇತ್ರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಘೋಟ್ನೇಕರ್ ಕೆಲವೆಡೆ ತಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ ದೇಶಪಾಂಡೆಯವರ ಮುಂದೆ ಹೇಳಿರಲಿಲ್ಲ.
ಇದೀಗ ಪಕ್ಷದ ಸಭೆಯಲ್ಲಿ ನಾಯಕರುಗಳ ಸಮ್ಮುಖದಲ್ಲಿ ದೇಶಪಾಂಡೆಯವರ ಮುಂದೆಯೇ ತಾನು ಟಿಕೆಟ್ ಆಕಾಂಕ್ಷಿ ಎಂದು ಘೋಟ್ನೇಕರ್ ಮನವಿ ಮಾಡಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಸಾಕಷ್ಟು ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದಾರೆ.
ಇಷ್ಟು ದಿನಗಳ ಕಾಲ ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದೇಶಪಾಂಡೆಯವರಿಗೆ ಯಾರು ಎದುರಾಳಿ ಇಲ್ಲದಂತಾಗಿತ್ತು. ಆದರೆ ಈ ಬಾರಿ ಅವರ ಶಿಷ್ಯರಾಗಿದ್ದ ಘೋಟ್ನೇಕರ್ ಅವರೇ ತೊಡೆತಟ್ಟಿ ನಿಂತಿರುವುದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗಲಿದೆ? ಎನ್ನುವ ಗೊಂದಲು ಹುಟ್ಟಿಕೊಂಡಿದೆ. ಇನ್ನು ಪಕ್ಷದಲ್ಲೂ ಎರಡು ಬಣ ಕ್ಷೇತ್ರದಲ್ಲಿದೆ ಎನ್ನುವುದು ಬಹಿರಂಗವಾಗಿದ್ದು, ಚುನಾವಣೆ ವೇಳೆಗೆ ಈ ಬಗ್ಗೆ ಸಾಕಷ್ಟು ಬೆಳವಣಿಗೆಳು ಆಗುವುದರಲ್ಲಿ ಅನುಮಾನವಿಲ್ಲ.
ಹೇಳಿಕೆ ನೀಡಿದ್ದ ಘೋಟ್ನೇಕರ್; ಕೆಲವು ದಿನದ ಹಿಂದೆ ಹಳಿಯಾಳ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಎಸ್. ಎಲ್. ಘೋಟ್ನೇಕರ್, "ತಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ" ಎಂದು ಹೇಳಿಕೆ ನೀಡಿದ್ದರು.
ಘೋಟ್ನೇಕರ್ ಹೇಳಿಕೆ ಬಗ್ಗೆ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ನಾಯಕರುಗಳ ಮುಂದೆಯೇ ಘೋಟ್ನೇಕರ್ ತನಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿಕೊಂಡಿದ್ದು, ದೇಶಪಾಂಡೆ ಹಾಗೂ ಘೋಟ್ನೇಕರ್ ನಡುವಿನ ಗುದ್ದಾಟ ಬಹಿರಂಗ ಆದಂತಾಗಿದೆ.












Click it and Unblock the Notifications