ಅಂಕೋಲ; ಲಸಿಕೆ ಪಡೆದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
ಕಾರವಾರ, ಜೂನ್ 17; ಕೋವಿಡ್ ಲಸಿಕೆ ಪಡೆದು ಒಂದು ಗಂಟೆಯ ಬಳಿಕ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಅಂಕೋಲ ತಾಲೂಕು ಆಸ್ಪತ್ರೆಯಲ್ಲಿ ಗುರುವಾರ ನಡೆದಿದೆ.
ಮೃತಪಟ್ಟವರನ್ನು ಅಂಕೋಲ ಪಟ್ಟಣದ ಮಾದವ ನಗರ ಕಂತ್ರಿ ನಿವಾಸಿ ಮಾದೇವ ಪುಟ್ಟು ನಾಯ್ಕ (67) ಎಂದು ಗುರುತಿಸಲಾಗಿದೆ. ಪಟ್ಟಣದ ಸತ್ಯಾಗ್ರಹ ಸ್ಮಾರಕ ಭನವದಲ್ಲಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡು ಅಲ್ಲಿ ಅರ್ಧಗಂಟೆ ವಿಶ್ರಾಂತಿ ಪಡೆದಿದ್ದರು.
ಬಳಿಕ ತಾಲೂಕು ಆಸ್ಪತ್ರೆಗೆ ಮಾತ್ರೆ ಪಡೆಯಲು ಬಂದಾಗ ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಲು ಮುಂದಾದರು. ಆದರೆ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ. ವ್ಯಕ್ತಿಯ ಜೊತೆಯಲ್ಲಿ ಪತ್ನಿಯೂ ಆಗಮಿಸಿದ್ದು ಅವರು ಸಹ ಲಸಿಕೆ ಪಡೆದಿದ್ದಾರೆ.

ಮಾದೇವ ಪುಟ್ಟು ನಾಯ್ಕ ಜೊತೆ ಇನ್ನು 9 ಜನಕ್ಕೆ ಲಸಿಕೆ ನೀಡಲಾಗಿದೆ. ಇನ್ನುಳಿದವರಿಗೆ ಯಾವುದೇ ತೊಂದರೆ ಆಗಲಿಲ್ಲ. ಮಾದೇವ ಪುಟ್ಟು ನಾಯ್ಕ ಮೃತಪಟ್ಟ ಸುದ್ದಿ ತಿಳಿಯುತ್ತಲೇ ಆತನ ಕುಟುಂಬಸ್ಥರು ತಾಲೂಕು ಆಸ್ಪತ್ರೆಯತ್ತ ದೌಡಾಯಿಸಿದರು. ಯಾವುದೇ ಪ್ರಕರಣ ದಾಖಲಿಸದೆ ಮೃತದೇಹವನ್ನು ಪಡೆದು ಅಂತ್ಯಕ್ರಿಯೆಯನ್ನು ನಡೆಸಿದ್ದಾರೆ.
ಸಿಪಿಐ ಕೃಷ್ಣಾನಂದ ನಾಯಕ ಸ್ಥಳಕ್ಕಾಗಮಿಸಿ ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿದಾಗ ಹೃದಯಾಘಾತದಿಂದ ವ್ಯಕ್ತಿ ಮೃಪಟ್ಟಿದ್ದಾರೆಂದು ಆಸ್ಪತ್ರೆ ವೈದ್ಯಾಧಿಕಾರಿ ನೀತಿ ಹೊಸ್ಮೀಲಕರ ಮೃತನ ಸಂಬಂಧಿಕರಿಗೆ ತಿಳಿಸಿದ್ದಾರೆ.
ಸಂಬಂಧಿಗಳು ಆಸ್ಪತ್ರೆಯಲ್ಲಿ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೇ ಮೃತ ದೇಹವನ್ನು ಪಡೆದು ಅಂತ್ಯ ಸಂಸ್ಕಾರ ಮಾಡಿದರು.












Click it and Unblock the Notifications