ಕರಾವಳಿಯಲ್ಲಿ ಪ್ರಯೋಜನಕ್ಕೆ ಬಾರದ ಲಾಂಗ್ ಲೈನರ್ ಬೋಟ್ಗಳು, ಆಕ್ರೋಶಗೊಂಡ ಮೀನುಗಾರರು
ಕರವಾಳಿ ಭಾಗದ ಮೀನುಗಾರರಿಗಾಗಿ ಸರ್ಕಾರ ಲಾಂಗ್ ಲೈನರ್ ಬೋಟ್ಗಳನ್ನು ನೀಡಿದ್ದು, ಇವು ಉಪಯೋಗಕ್ಕೆ ಬರದಂತಾಗಿವೆ ಎನ್ನುವ ಆರೋಪಗಳು ಜೋರಾಗಿಯೇ ಕೇಳಿಬರುತ್ತಿವೆ.
ಕಾರವಾರ, ಫೆಬ್ರವರಿ, 03: ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಮತ್ಸ್ಯೋದ್ಯಮವನ್ನ ಆಧುನೀಕರಣಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅದರಂತೆಯೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ಸ್ಯಸಂಪದ ಯೋಜನೆಯಡಿ ಆಳ ಸಮುದ್ರ ಮೀನುಗಾರಿಕಾ ಬೋಟ್ಗಳನ್ನು ನೀಡಲು ಮುಂದಾಗಿದೆ. ಆದರೆ ಸರ್ಕಾರದಿಂದ ನೀಡುತ್ತಿರುವ ಬೋಟ್ಗಳು ರಾಜ್ಯ ಕರಾವಳಿಯಲ್ಲಿ ಬಳಕೆಗೆ ಬರುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದೇ ಕಾರಣದಿಂದಲೇ ಭಾರಿ ಪ್ರಮಾಣದಲ್ಲಿ ಸಬ್ಸಿಡಿಯೊಂದಿಗೆ ನೀಡುತ್ತಿದ್ದರೂ ಸಹ ಬೋಟ್ಗಳನ್ನು ಪಡೆಯಲು ಯಾರೊಬ್ಬರು ಮುಂದೆ ಬರುತ್ತಿಲ್ಲ.
ಹೌದು ಕೇಂದ್ರ ಸರ್ಕಾರ ಕಳೆದ ಬಜೆಟ್ನಲ್ಲಿ ಮತ್ಸ್ಯಸಂಪದ ಯೋಜನೆಯಡಿ ರಾಜ್ಯ ಸರ್ಕಾರದ ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡಲು ಲಾಂಗ್ ಲೈನರ್ ಬೋಟ್ಗಳನ್ನು ಮೀನುಗಾರರಿಗೆ ನೀಡಲು ಮುಂದಾಗಿದೆ. ದೊಡ್ಡ ಬೋಟ್ ಇರುವ ಹಿನ್ನೆಲೆಯಲ್ಲಿ ನೂರಾರು ಮೈಲು ದೂರ ತೆರಳಿ ಆಳಸಮುದ್ರ ಮೀನುಗಾರಿಕೆ ನಡೆಸುವುದರಿಂದ ಬೃಹತ್ ಗಾತ್ರದ ಮೀನುಗಳನ್ನು ಹಿಡಿಯಲು ಸಾಧ್ಯವಿದ್ದು, ಇದರಿಂದ ಮೀನುಗಾರರು ಹೆಚ್ಚಿನ ಲಾಭ ಗಳಿಸಬಹುದು ಎನ್ನುವ ನಿರೀಕ್ಷೆ ಈ ಯೋಜನೆಯದ್ದಾಗಿದೆ.
ಮುರುಡೇಶ್ವರ: ರಕ್ಷಣೆ ಮಾಡಿದ ಲೈಫ್ ಗಾರ್ಡ್ ಮೇಲೆ ಹಲ್ಲೆ; ಮದ್ಯದ ಅಮಲಿನಲ್ಲಿ ಪ್ರವಾಸಿಗರ ರಂಪಾಟ
ಇನ್ನು ಯೋಜನೆಗೆ ಕೇಂದ್ರ ಸರ್ಕಾರ 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಬೋಟ್ ಖರೀದಿಗೆ ಸರ್ಕಾರ ಹಣವನ್ನು ನೀಡಲು ಮುಂದಾಗಿದೆ. ಮೀನುಗಾರಿಕೆಗೆ ಉಪಯೋಗ ಆಗಲಿ ಎನ್ನುವ ದೃಷ್ಟಿಯಿಂದ ಸಬ್ಸಿಡಿ ದರದಲ್ಲಿ ಬೋಟ್ಗಳ ಖರೀದಿಗೆ ಸರ್ಕಾರ ಆದ್ಯತೆ ನೀಡಿದೆ.
ಉ.ಕನ್ನಡ ಜಿಲ್ಲೆಯ ಮೀನುಗಾರರ ನಿಲುವೇನು?
ಆದರೆ ಈ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರರೇ ವಿರೋಧ ಮಾಡುತ್ತಿದ್ದಾರೆ. ಲಾಂಗ್ ಲೈನರ್ ಬೋಟ್ಗಳ ಗಾತ್ರ ದೊಡ್ಡದಿದ್ದು, ಅದು ಕೇರಳ, ತಮಿಳುನಾಡಿನಲ್ಲಿ ಮಾತ್ರ ಮೀನುಗಾರಿಕೆ ಮಾಡಲು ಯೋಗ್ಯವಾಗಿದೆ. ಆದರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಪರ್ಶಿಯನ್ ಅಥವಾ ಟ್ರಾಲ್ ಬೋಟ್ನಲ್ಲಿ ಮಾತ್ರ ಮೀನುಗಾರಿಕೆ ಮಾಡಲು ಸಾಧ್ಯವಿದೆ. ಇದರಿಂದ ಕೊಟ್ಯಂತರ ರೂಪಾಯಿ ಮೌಲ್ಯದ ಬೋಟ್ಗಳಿಗೆ ನಾಲ್ಕೈದು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಬೋಟ್ ಖರೀದಿಗೆ ವ್ಯಯಿಸುವ ವೆಚ್ಚ
ಸರ್ಕಾರ ಮೀನುಗಾರಿಕೆಗೆ ಉಪಯೋಗಕ್ಕೆ ಬಾರದ ಯೋಜನೆಯನ್ನು ಮೀನುಗಾರರ ಮೇಲೆ ಹೆರುವ ಬದಲು, ಮೀನುಗಾರರೊಂದಿಗೆ ಚರ್ಚಿಸಿ ಯೋಜನೆ ಜಾರಿ ಮಾಡಬೇಕು ಎಂದು ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಆಗ್ರಹಿಸಿದ್ದಾರೆ. ಇನ್ನು 1.20 ಕೋಟಿ ವೆಚ್ಚದಲ್ಲಿ ಬೋಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮಹಿಳೆಯರಿಗೆ ಶೇ. 60 ಹಾಗೂ ಪುರುಷರಿಗೆ ಶೇ. 40 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಆದರೆ ಈ ಯೋಜನೆಯಡಿ ಮೀನುಗಾರರು ಸಾಲ ಮಾಡಬೇಕಾದರೆ ಮನೆಗಳನ್ನು ಅಡ ಇಡಬೇಕಾಗಿದೆ ಎನ್ನುವ ಆಕ್ರೋಶಗಳು ಭುಗಿಲೆದ್ದಿವೆ.
ಲಾಂಗ್ ಲೈನರ್ ಬದಲಾಗಿ ಬೇರೆ ಬೋಟ್ ನೀಡಿ
ಸಿಆರ್ಜೆಡ್ ವ್ಯಾಪ್ತಿಯೊಳಗೆ ಲೋನ್ ನೀಡುವುದಿಲ್ಲ. ಅಲ್ಲದೆ ಇಷ್ಟೊಂದು ದೊಡ್ಡ ಮೊತ್ತ ಹಾಕಿ ಖರೀದಿ ಮಾಡಿದ ಬಳಿಕ ಮೀನುಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಕೇಂದ್ರದಿಂದ ಅನುಷ್ಠಾನಗೊಂಡ ಯೋಜನೆಯನ್ನು ರಾಜ್ಯದ ಕರಾವಳಿ ಜನರಿಗೆ ಅನುಕೂಲವಾಗುವಂತೆ ಮಾಡಲು ಸಂಬಂಧಪಟ್ಟ ಜನಪ್ರತಿನಿಧಿಗಳು ಪ್ರಯತ್ನಿಸಬೇಕು. ಇಲ್ಲವೇ ಲಾಂಗ್ ಲೈನರ್ ಬದಲು ಬೇರೆ ಬೋಟ್ಗಳನ್ನು ನೀಡಬೇಕು ಎನ್ನುವುದು ಮೀನುಗಾರರ ಆಗ್ರಹವಾಗಿದೆ.
ಬೋಟ್ಗಳ ಬಗ್ಗೆ ಸಚಿವರು ಹೇಳುವುದೇನು?
ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬಳಿ ಕೇಳಿದಾಗ, ಕಳೆದ ಬಜೆಟ್ನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯ ಸಂಪದ ಯೋಜನೆಯಡಿ ಕೇಂದ್ರ ಸರ್ಕಾರ 1.5 ಕೋಟಿ ರೂಪಾಯಿ ವೆಚ್ಚದ ಸುಮಾರು 50 ಬೋಟ್ಗಳನ್ನು ನೀಡಲು ಆಹ್ವಾನಿಸಿತ್ತು. ಆದರೆ ಇದರ ವಿನ್ಯಾಸ ರಾಜ್ಯ ಕರಾವಳಿಯಲ್ಲಿ ಉಪಯೋಗಕ್ಕೆ ಬಾರದಂತಾಗಿದೆ. ಆದ್ದರಿಂದ ಈ ಬೋಟ್ ಅನ್ನು ಬದಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಇದು ವಾಪಸ್ ಬರಲಿದ್ದು, ಮೀನುಗಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಸದ್ಯ ಈಗಿರುವ ಟ್ರಾಲ್ ಬೋಟ್, ಪರ್ಶಿಯನ್ ಬೋಟ್ ಖರೀದಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ ಎಂದು ಮೀನಿಗಾರರು ಕಾದು ಕುಳಿತಿದ್ದರು. ಹೀಗೆ ಕಾಯುತ್ತಿದ್ದ ಮೀನುಗಾರರಿಗೆ, ಸರ್ಕಾರದ ಲಾಂಗ್ ಲೈನರ್ ಬೋಟ್ ಖರೀದಿ ಯೋಜನೆ ಸಾಕಷ್ಟು ನಿರಾಸೆ ಮೂಡಿಸಿದೆ. ಕಡಲ ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಮತ್ತೊಮ್ಮೆ ಗಮನಹರಿಸಿ ಲಾಂಗ್ ಲೈನರ್ ಬೋಟ್ಗಳ ಬದಲು ಅವರಿಗೆ ಅಗತ್ಯವಿರುವ ಬೋಟ್ ಖರೀದಿಗೆ ಅನುದಾನವನ್ನು ಬಿಡುಗಡೆ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.