ಲಾಕ್ಡೌನ್ ಭೀತಿ: ಮಹಾರಾಷ್ಟ್ರದಿಂದ ಉತ್ತರ ಕನ್ನಡದತ್ತ ಬರುತ್ತಿರೋ ಜನ
ಕಾರವಾರ, ಏಪ್ರಿಲ್ 16: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದ್ದು, ನೆರೆಯ ಮಹಾರಾಷ್ಟ್ರದಲ್ಲಂತೂ ಪರಿಸ್ಥಿತಿ ಕೈ ಮೀರಿದೆ. ಹೀಗಾಗಿ ಅಲ್ಲಿನ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗುವ ಸಾಧ್ಯತೆ ದಟ್ಟವಾಗಿದೆ.
ಲಾಕ್ಡೌನ್ ಮಾಡುವ ಸಾಧ್ಯತೆಯೂ ಇರುವ ಕಾರಣ ಅಲ್ಲಿಂದ ನೂರಾರು ಜನ ಉತ್ತರ ಕನ್ನಡ ಜಿಲ್ಲೆಯತ್ತ ಆಗಮಿಸುತ್ತಿದ್ದಾರೆ. ಉತ್ತರ ಕನ್ನಡದ ಸಾಕಷ್ಟು ಜನರು ಉದ್ಯೋಗ ಹುಡುಕಿಕೊಂಡು ಮಹಾರಾಷ್ಟ್ರಕ್ಕೆ ತೆರಳಿ ಅಲ್ಲೇ ಬಹು ವರ್ಷಗಳಿಂದ ನೆಲೆಸಿದ್ದಾರೆ.
ವರ್ಷಕ್ಕೊಮ್ಮೆ ಅಥವಾ ಹಬ್ಬದ ಸಂದರ್ಭದಲ್ಲಿ ಊರಿಗೆ ಬಂದು ಹೋಗುತ್ತಿದ್ದವರಿಗೆ ಕಳೆದ ಬಾರಿಯ ಕೊರೊನಾ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ಒಂದೆಡೆ ಸಂಬಂಧಿಗಳ ಜೊತೆಗೆ ಸೇರಲಾಗದೆ, ಊಟ-ತಿಂಡಿಗೂ ಸಮಸ್ಯೆ ಉಂಟಾಗಿ ಜಿಲ್ಲೆಯ ಮೂಲದವರು ಮಹಾರಾಷ್ಟ್ರದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದರು. ಕೆಲವು ಅನುಕೂಲಸ್ಥರು ಕಳೆದ ಬಾರಿ ಹೇಗೋ ಜಿಲ್ಲೆಯತ್ತ ನುಸುಳಿದ್ದ ಕಾರಣ ಅಂದು ಸೋಂಕಿತರ ಸಂಖ್ಯೆ ಸಹ ಉತ್ತರ ಕನ್ನಡದಲ್ಲಿ ಹೆಚ್ಚಾಗಲು ಕಾರಣವಾಗಿತ್ತು.

ಶೀಘ್ರದಲ್ಲೇ ಲಾಕ್ಡೌನ್ ಮಾಡುವ ಸಾಧ್ಯತೆ
ಈ ಹಿಂದೆ ಸರ್ಕಾರ ಅಂತರರಾಜ್ಯ ಪ್ರಯಾಣ ಬಂದ್ ಮಾಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿ, ಹೇಗಾದರೂ ಮಾಡಿ ತಮ್ಮ ಮನೆಗೆ ವಾಪಸ್ ಬರಬೇಕು ಎಂದು ಅನೇಕರು ಹರಸಾಹಸ ಪಟ್ಟಿದ್ದರು. ಸೇವಾಸಿಂಧು ಮೂಲಕ ಅರ್ಜಿ ಹಾಕಿಕೊಂಡು ಅನುಮತಿ ಪಡೆದು ಅಂತಿಮವಾಗಿ ಊರುಗಳತ್ತ ಆಗಮಿಸಿದ್ದರು. ಇನ್ನು ಜಿಲ್ಲೆಗೆ ಬಂದರೂ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಾದ ಪರಿಸ್ಥಿತಿ ಉದ್ಭವಿಸಿತ್ತು.
ಪ್ರಸ್ತುತ ಕೊರೊನಾ ಎರಡನೇ ಅಲೆ ಹೆಚ್ಚಾಗಿದ್ದು, ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇನ್ನು ಸರ್ಕಾರ ಅನಿವಾರ್ಯವಾಗಿ ಶೀಘ್ರದಲ್ಲೇ ಲಾಕ್ಡೌನ್ ಮಾಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದ್ದು, ಈ ನಿಟ್ಟಿನಲ್ಲಿ ಅಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದವರು ಜಿಲ್ಲೆಯತ್ತ ಪ್ರಯಾಣ ಬೆಳೆಸಿದ್ದಾರೆ.

ಮಹಾರಾಷ್ಟ್ರದಿಂದ ಬಂದವರ ಮೇಲೆ ಹದ್ದಿನ ಕಣ್ಣು
ಮತ್ತೆ ಲಾಕ್ಡೌನ್ ಮಾಡಿದರೆ ಈ ಹಿಂದೆ ಅನುಭವಿಸಿದ ಸಮಸ್ಯೆಗಳು ಮತ್ತೆ ಅನುಭವಿಸುವ ಪರಿಸ್ಥಿತಿ ಎದುರಾದೀತು ಎಂದು ಊರುಗಳತ್ತ ಮುಖ ಮಾಡಿದ್ದಾರೆ. ಈಗಾಗಲೇ ಗೋವಾ ಗಡಿಯ ಮಾಜಾಳಿ ಹಾಗೂ ಅನಮೋಡ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಜನರು ಉತ್ತರ ಕನ್ನಡಕ್ಕೆ ಆಗಮಿಸುತ್ತಿದ್ದಾರೆ.
ಕೊರೊನಾ ಸಂಖ್ಯೆ ಹೆಚ್ಚಳವಾಗಬಹುದೆನ್ನುವ ಆತಂಕ ಜಿಲ್ಲೆಯ ಜನರಲ್ಲೂ ಕಾಡತೊಡಗಿದ್ದು, ಕೊರೊನಾ ಕಡಿವಾಣಕ್ಕೆ ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಬಂದವರ ಮೇಲೆ ಹದ್ದಿನ ಕಣ್ಣಿಡಬೇಕಾಗಿದೆ.

ಗಡಿಯಲ್ಲಿ ಪರದಾಟ
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರಲು ಜನರು ಗೋವಾ ಮಾರ್ಗವಾಗಿ ಆಗಮಿಸುತ್ತಿದ್ದು, ಗೋವಾದಲ್ಲಿ ಟಫ್ ರೂಲ್ಸ್ ಇಲ್ಲದ ಕಾರಣ ಮಹಾರಾಷ್ಟ್ರದಿಂದ ಬಂದವರನ್ನು ಯಾವುದೇ ತಪಾಸಣೆ ಮಾಡದೆ ಒಳಗೆ ಬಿಟ್ಟುಕೊಳ್ಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಬಂದವರು ಕಡ್ಡಾಯವಾಗಿ ನೆಗೆಟಿವ್ ವರದಿಯನ್ನು ತರಬೇಕು ಎನ್ನುವ ಆದೇಶ ಮಾಡಿರುವ ಹಿನ್ನಲೆಯಲ್ಲಿ ಗೋವಾದಿಂದ ಜಿಲ್ಲೆಯ ಗಡಿಯವರೆಗೆ ಬಂದು ಗಡಿಯಲ್ಲಿ ಕಾಯುತ್ತಾ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಪಾಸ್ ಮಹಾರಾಷ್ಟ್ರದ ಕಡೆಗೆ
ಹಲವರು ನೆಗೆಟಿವ್ ವರದಿ ಇಲ್ಲದ ಹಿನ್ನೆಲೆಯಲ್ಲಿ ವಾಪಾಸ್ ಮಹಾರಾಷ್ಟ್ರದ ಕಡೆಗೆ ತೆರಳಿದ್ದು, ಇನ್ನು ಕೆಲವರು ಗೋವಾದ ಖಾಸಗಿ ಆಸ್ಪತ್ರೆಗಳಲ್ಲಿ ಆರ್.ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ವರದಿ ಹಿಡಿದು ಜಿಲ್ಲೆಯತ್ತ ಬರುತ್ತಿದ್ದಾರೆ.
ಗಡಿಯಲ್ಲಿ ಕೇವಲ ಪೊಲೀಸರನ್ನು ನೇಮಿಸಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಸಹ ನೇಮಿಸಿ ಗಡಿಯಲ್ಲಿಯೇ ರ್ಯಾಪಿಡ್ ಟೆಸ್ಟ್ ಮೂಲಕ ತಪಾಸಣೆ ಮಾಡಿ ನೆಗೆಟಿವ್ ಬಂದರೆ ಒಳಗೆ ಬಿಡುವ ವ್ಯವಸ್ಥೆ ಮಾಡಲಿ ಎನ್ನುವ ಆಗ್ರಹವನ್ನು ಸಹ ಕೆಲವರು ಮಾಡಿದ್ದಾರೆ.












Click it and Unblock the Notifications