ಕಾರ್ಮಿಕ ಇಲಾಖೆ ಕಾರ್ಯದರ್ಶಿ ವರ್ಗಾವಣೆ: ಸಿಎಂ ನಿರ್ಧಾರ
ಕಾರವಾರ, ಮೇ 12: ವಾರ್ತಾ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ ಪಿ.ಮಣಿವಣ್ಣನ್ ವರ್ಗಾವಣೆ ವಿಚಾರವು ಸರ್ಕಾರದ ಆಡಳಿತಾತ್ಮಕ ನಿರ್ಧಾರ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಶಿವರಾಮ್ ಹೆಬ್ಬಾರ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪಿ.ಮಣಿವಣ್ಣನ್ ಅವರನ್ನು ಯಾವ ಕಾರಣಕ್ಕೆ ವರ್ಗಾವಣೆ ಮಾಡಿದ್ದಾರೆ ಎನ್ನುವುದನ್ನು ಕೇಳಲು ನನಗೆ ಅಧಿಕಾರ ಇಲ್ಲ ಎಂದರು.
ಭಟ್ಕಳದಲ್ಲಿ ಮತ್ತೆ ಏಳು ಜನರಿಗೆ ಕೊರೊನಾ ಪಾಸಿಟಿವ್
ಪಿ.ಮಣಿವಣ್ಣನ್ ನನ್ನ ಆತ್ಮೀಯ ಸ್ನೇಹಿತ. ಆದರೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯು ನಮ್ಮ ವಿವೇಚನೆ, ಅಧಿಕಾರವನ್ನು ಮೀರಿದಾಗ ಒಮ್ಮೊಮ್ಮೆ ಅಪಾಯ ತರುತ್ತದೆ. ತಾಂತ್ರಿಕತೆಯನ್ನ ಬಳಸುವವರು ತಮ್ಮ ಮಿತಿಯನ್ನ ಅರಿತು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯದರ್ಶೀ ಅವರು ಕಾರ್ಮಿಕರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕಾರ್ಮಿಕ ಇಲಾಖೆಯು ಕಾರ್ಮಿಕರು ಹಾಗೂ ಮಾಲೀಕರ ನಡುವಿನ ಸೇತುವೆಯಂತೆ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಮಿಕರ ಪರವಾಗಿ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಇಲಾಖೆಗೆ ಸಾಕಷ್ಟು ಅವಕಾಶ ಇದೆ. ಆದರೆ ಮುಂದಿನ ಭವಿಷ್ಯದಲ್ಲಿ ಕಾರ್ಮಿಕರ ಸ್ಥಿತಿ ಏನು ಅನ್ನುವುದನ್ನು ಸಹ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಚಿವ ಹೆಬ್ಬಾರ್ ಹೇಳಿದರು.