ರಸ್ತೆ ಸಮಸ್ಯೆ: ಆರೋಗ್ಯ, ಶಿಕ್ಷಣ ಮಾತ್ರವಲ್ಲದೆ ಮದುವೆಯಿಂದಲೂ ವಂಚಿತರಾದ ಗ್ರಾಮಸ್ಥರು
ಕಾರವಾರ, ಡಿಸೆಂಬರ್28: ಕುಮಟಾ ತಾಲೂಕಿನ ಗ್ರಾಮವೊಂದು ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮವಾಗಿದೆ. ಕೇವಲ 3 ಕಿ.ಮೀ ರಸ್ತೆ ನಿರ್ಮಾಣ ಮಾಡಿದರೂ, ಗ್ರಾಮಸ್ಥರ ಬಹುತೇಕ ಸಮಸ್ಯೆಗಳು ಬಗೆಹರಿಯುವಂತಿದೆ. ಆದರೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಜನರು ಆರೋಗ್ಯ, ಶಿಕ್ಷಣ ಮಾತ್ರವಲ್ಲದೆ ಮದುವೆಯಿಂದಲೂ ವಂಚಿತರಾಗುವ ದಯನೀಯ ಸ್ಥಿತಿ ಇಲ್ಲಿದೆ.
ಕುಮಟಾ ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇದಿನಿ ಗ್ರಾಮದಲ್ಲಿ ಇಂತಹದೊಂದು ಸ್ಥಿತಿ ಇದೆ. ಊರಿಗೆ ಸರಿಯಾದ ರಸ್ತೆ ಇಲ್ಲದ ಕಾರಣಕ್ಕೆ ಸಂಬಂಧ ಬೆಳೆಸಲು ಜನರು ಹಿಂದೇಟು ಹಾಕುವ ಕಾರಣ ಅದೆಷ್ಟು ಯುವಕ ಯುವತಿಯರು ಮದುವೆಯಿಂದ ವಂಚಿತರಾಗುತ್ತಿದ್ದಾರೆ.
ಮದುವೆ ವಯಸ್ಸಿಗೆ ಬಂದ ಮಕ್ಕಳಿಗೆ ಸಂಬಂಧ ಹುಡುಕಲು ಪೋಷಕರು ಪರದಾಡುತ್ತಿದ್ದಾರೆ. ರಸ್ತೆ ಇಲ್ಲದ ಕಾರಣ ಈ ಗ್ರಾಮದಲ್ಲಿನ ಯುವಕ ಯವತಿಯರ ಮದುವೆಗೆ ತೊಂದರೆಯಾಗಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ದುಶ್ಚಟಗಳಿಗೆ ಬಲಿಯಾಗುತ್ತಿರುವ ಮಕ್ಕಳು
ಸೊಪ್ಪಿನ ಹೊಸಳ್ಳಿಯ ಮೇದಿನಿ ಊರಿನಲ್ಲಿ ಕೇವಲ ಐದನೇ ತರಗತಿವರೆಗೆ ಮಾತ್ರ ಶಾಲೆ ಇದ್ದು, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಅಕ್ಕಪಕ್ಕದ ಊರಿನ ಶಾಲೆಯ ಮೊರೆ ಹೋಗಬೇಕಿದೆ. ಜೊತೆಗೆ ವಾಸ್ತವ್ಯಕ್ಕಾಗಿ ಸಂಬಂಧಿಕರ ಮನೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಹುತೇಕ ಮಕ್ಕಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿ ಮನೆಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇನ್ನೂ ಕೆಲ ಮಕ್ಕಳು ವಿದ್ಯಾಭ್ಯಾಸ ಅರ್ಧಕ್ಕೆ ಮುಗಿಸಿ ಬೀದಿ ಬೀದಿ ಸುತ್ತಾಡುತ್ತಾ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.

ರೋಗಿಗಳನ್ನು ಜೋಳಿಗೆ ಕಟ್ಟಿ ಸಾಗಿಸುವ ಗ್ರಾಮಸ್ಥರು
ಮೇದಿನಿ ಗ್ರಾಮದಲ್ಲಿ ಸುಮಾರು 55 ಮನೆಗಳಿದ್ದು 350 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಮುಖ್ಯ ರಸ್ತೆಯಿಂದ 9ಕಿ.ಮೀ ದೂರ ಇರುವ ಗ್ರಾಮವು ಗುಡ್ಡದ ಮೇಲಿದೆ. ಈಗಾಗಲೇ ಗ್ರಾಮಕ್ಕೆ ಸಣ್ಣ ರಸ್ತೆ ಇದೆಯಾದರೂ ಬೈಕ್ ಸಣ್ಣ ವಾಹನಗಳು ಓಡಾಡಲು ಅನುಕೂಲವಾಗುವಂತೆ ಪ್ರತಿ ವರ್ಷ ಗ್ರಾಮಸ್ಥರೇ ದುರಸ್ಥಿ ಮಾಡಿಕೊಂಡಿಕೊಳ್ಳುತ್ತಿದ್ದಾರೆ.
ಪ್ರತಿ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಓಡಾಡುವುದಕ್ಕೂ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಯಾರಾದರು ಅನಾರೋಗ್ಯಕ್ಕೊಳಗಾದರೆ. ಜೋಳಿಗೆ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ಜನ ಕೃಷಿಯನ್ನೇ ಅವಲಂಬಿಸಿಕೊಂಡಿದ್ದು, ಗ್ರಾಮದ ರಸ್ತೆಗಾಗಿ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಮೂರು ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ಗ್ರಾಮಸ್ಥರ ಆಗ್ರಹ
ಇನ್ನು ಗ್ರಾಮಕ್ಕೆ ಎರಡೆರಡು ಜಿಲ್ಲಾಧಿಕಾರಿಗಳು ತೆರಳಿ ಗ್ರಾಮ ವಾಸ್ತವ್ಯ ಮಾಡಿ ಸಮಸ್ಯೆ ಆಲಿಸಿದರೂ, ಯಾವುದೇ ಪ್ರಯೋಜನ ಆಗಿಲ್ಲ. ರಸ್ತೆಗಾಗಿ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ದೊಡ್ಡ ಮಟ್ಟದ ಅನುದಾನ ಬೇಕಾಗುತ್ತದೆ ಎಂದು ಭರವಸೆಯ ಮಾತುಗಳನ್ನಾಡಿ ಕೈಬಿಡುತ್ತಿರುವುದು ಊರಿನವರ ಸಮಸ್ಯೆ, ಸಮಸ್ಯೆಯಾಗಿಯೇ ಉಳಿದುಕೊಂಡಿದೆ.
ಇತ್ತೀಚೆಗೆ ಜಿಲ್ಲಾ ಪಂಚಾಯಿತಿಯಿಂದ ಸರ್ವೆ ನಡೆಸಿ ಆರ್ ಡಿಪಿಆರ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟು 9 ಕಿ.ಮೀ ರಸ್ತೆ ಸುಮಾರು 12.5 ಕೋಟಿ ಬೇಕಾಗಬಹುದು ಅಂದಾಜಿಸಲಾಗಿದೆ. ಆದರೆ ತುರ್ತಾಗಿ ಅವಶ್ಯವಿರುವ 3 ಕಿ.ಮೀ ರಸ್ತೆಗೆ 3 ಕೋಟಿ ಅನುದಾನ ಬೇಕಾಗಿದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೂರು ಕಿ.ಮೀ ರಸ್ತೆ ನಿರ್ಮಾಣವಾದಲ್ಲಿ ಗ್ರಾಮಸ್ಥರ ಬಹುತೇಕ ಸಮಸ್ಯೆಗಳು ಪರಿಹಾರ ಕಾಣಲಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಸರ್ಕಾರ ಗಮನ ಹರಿಸುವಂತೆ ಗ್ರಾಮಸ್ಥರ ಒತ್ತಾಯ
ಗ್ರಾಮದಲ್ಲಿ ಅನಾರೋಗ್ಯಕ್ಕೆ ಒಳಗಾದವರನ್ನು ಜೋಳಿಗೆ ಕಟ್ಟಿ ಹೊತ್ತು ಆಸ್ಪತ್ರೆಗೆ ಸೇರಿಸಬೇಕು. ಈ ಹಿಂದೆ ಬಾಣಂತಿಯೊಬ್ಬರನ್ನು ಮಧ್ಯರಾತ್ರಿ ಕೊಂಡೊಯ್ಯುವಾಗ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದರು. ತಾಯಿ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಮುಖ್ಯ ರಸ್ತೆಯಿಂದ 9 ಕಿ.ಮೀ ದೂರ ಇದ್ದರೂ, ನಮಗೆ ಕೇವಲ 3 ಕಿ.ಮೀ ರಸ್ತೆ ಮಾಡಿಕೊಟ್ಟಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಗ್ರಾಮಸ್ಥರಾದ ಗಣಪ ಗೌಡ ಆಗ್ರಹಿಸಿದ್ದಾರೆ.












Click it and Unblock the Notifications