ಮಂಗಳೂರು ಘಟನೆ: ಪೊಲೀಸರ ಬೆನ್ನು ತಟ್ಟಿದ ಸಚಿವ ಈಶ್ವರಪ್ಪ
ಸಿದ್ದಾಪುರ, ಜನವರಿ 21: 'ಮಂಗಳೂರಿನ ಘಟನೆ ಪೊಲೀಸ್ ವೈಫಲ್ಯವಲ್ಲ. ಇದು ದುಷ್ಕರ್ಮಿಗಳ ವೈಫಲ್ಯ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಕೋರ್ಲಕೈ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ದುಷ್ಕರ್ಮಿಗಳು ರಾಜ್ಯದಲ್ಲಿ ಗೊಂದಲ ಸೃಷ್ಟಿಸಿ ಸಾವು ನೋವು ಉಂಟು ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ, ಬಾಂಬ್ ಇಟ್ಟವನ ಸುಳಿವನ್ನು ಕಂಡುಹಿಡಿದಿದ್ದಾರೆ. ಪೊಲೀಸರ ಈ ಕೆಲಸವನ್ನು ನಾವು ಶ್ಲಾಘಿಸಬೇಕಿದೆ' ಎಂದರು.
'ದುಷ್ಕರ್ಮಿಗಳ ವಿರುದ್ಧ ಪಕ್ಷಾತೀತವಾಗಿ ಖಂಡಿಸುವ ದಿಟ್ಟ ನಿಲುವನ್ನು ಎಲ್ಲಾ ಪಕ್ಷದವರು ತೆಗೆದುಕೊಳ್ಳಬೇಕು. ಬಾಂಬ್ ಅನ್ನು ಪೊಲೀಸರೇ ಇಟ್ಟು ಇದನ್ನು ಸೃಷ್ಟಿ ಮಾಡಿದ್ದಾರೆ ಅನ್ನೋ ಹೇಳಿಕೆ ಖಂಡನೀಯ. ಇದು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸೋ ಕೆಲಸ. ಈ ರೀತಿಯ ಕೆಲಸವನ್ನು ಯಾರೂ ಮಾಡಬಾರದು' ಎಂದರು.

'ಸದ್ಯದಲ್ಲೇ ಸಚಿವ ಸಂಪುಟವನ್ನು ವಿಸ್ತರಿಸಲಾಗುವುದು. ಪೂರ್ಣ ಬಹುಮತ ಬಾರದೇ ಇದ್ದುದರಿಂದ ಈ ರೀತಿ ಆಗಿದೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಆಗದೇ ಇರುವುದರಿಂದ ಕೆಲವರು ರಾಜೀನಾಮೆ ಕೊಟ್ಟು ನಮಗೆ ಬೆಂಬಲ ನೀಡಿದರು. ಅವರಿಗೆಲ್ಲ ಸಚಿವ ಸ್ಥಾನ ಸಿಗೋದ್ರಲ್ಲಿ ಯಾವುದೇ ಅನುಮಾನ ಬೇಡ. ಮುಖ್ಯಮಂತ್ರಿಗಳು ವಿದೇಶ ಪ್ರವಾಸ ಮುಗಿಸಿ ಬಂದ ಕೂಡಲೇ ಸಂಪುಟ ವಿಸ್ತರಣೆ ಆಗಲಿದೆ. ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎನ್ನೋ ಪ್ರಭಾಕರ ಭಟ್ಟರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ' ಎಂದು ಹೇಳಿದರು.












Click it and Unblock the Notifications