ಕಾರವಾರ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ, ತಾಲೂಕುವಾರು ಅಂಕಿ ಅಂಶಗಳ ವಿವರ
ಕಾರವಾರ, ಜುಲೈ, 17: ಮುಂಗಾರು ವಿಳಂಭವಾದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿತ್ತನೆ ಕಾರ್ಯ ಕೂಡ ತಡವಾಗಿದೆ. ಅದರಲ್ಲಿಯೂ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಭತ್ತದ ಭಿತ್ತನೆಗೆ ತೀವ್ರ ಹಿನ್ನೆಡೆಯಾಗಿರುವುದು ಎರಡು ಮೂರು ಬೆಳೆ ತೆಗೆಯುವ ರೈತರಿಗೆ ಇದೀಗ ಪೈರು ತಡವಾಗುವ ಆತಂಕ ಶುರುವಾಗಿದೆ. ಹಾಗಾದರೆ ಜಿಲ್ಲೆಯಲ್ಲಿ ಇಲ್ಲಿವರೆಗೂ ಬಿತ್ತನೆಯಾಗಿರುವ ವಿವರ ಇಲ್ಲಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕರಾವಳಿಯಾದ್ಯಂತ ತಡವಾಗಿಯಾದರೂ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಅದೇ ರೀತಿ ಅರೆ ಮಲೆನಾಡು ಭಾಗಗಳಾದ ಮುಂಡಗೋಡ, ಹಳಿಯಾಳ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಕೂಡ ಇದೇ ಮಳೆಯಿಂದಲೇ ಬಹುತೇಕ ಕಡೆ ಬಿತ್ತನೆ ಕಾರ್ಯ ಆರಂಭಾವಾಗಿದೆ.

ಜಿಲ್ಲೆಯಲ್ಲಿ ಒಟ್ಟು 66,316 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ. ಸದ್ಯ 39,969 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆ ಬಿತ್ತನೆ ಮಾಡಿ ಶೇಕಡಾ 60.27 ಸಾಧನೆ ಮಾಡಲಾಗಿದೆ. ಆದರೆ ಘಟ್ಟದ ಮೇಲ್ಭಾಗದ ಶಿರಸಿ, ಸಿದ್ದಾಪುರ ಭಾಗದಲ್ಲಿ ಬಿತ್ತನೆ ತಡವಾಗುವುದರಿಂದ ಮತ್ತು ಕರಾವಳಿಯಲ್ಲಿ ಎದುರಾದ ಮಳೆ ಕೊರತೆಯಿಂದಾಗಿ ಶೇಕಡಾ 39.73ರಷ್ಟು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಬಾಕಿ ಇದೆ.
ಇನ್ನು ಮುಂಗಾರು ಕೈಕೊಟ್ಟ ಕಾರಣ ಈ ಬಾರಿ ಪೈರು ಕೂಡ ತಡವಾಗಿ ಬರುವ ಆತಂಕ ರೈತರಿಗೆ ಶುರುವಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಕೆಲ ರೈತರು ಬೇಗ ಬಿತ್ತನೆ ನಡೆಸಿ, ಮಳೆಗಾಲ ಮುಗಿಯುವ ವೇಳೆ ಬರುವ ಪೈರು ಕೊಯ್ದು ಮತ್ತೆ ನಾಟಿ ಮಾಡುತ್ತಿದ್ದರು. ಬಳಿಕ ನೀರಾವರಿ ಪ್ರದೇಶದಲ್ಲಿ ಕಾರು ಬೆಳೆ ಮಾಡಲಾಗುತಿತ್ತು. ಹೀಗೆ ಎರಡು ಇಲ್ಲವೇ ಮೂರು ಬೆಳೆ ತೆಗೆಯಲಾಗುತಿತ್ತು. ಆದರೆ ಈ ಬಾರಿ ಮಳೆ ತಡವಾಗಿ ಶುರುವಾದ ಕಾರಣ ಒಂದು ಇಲ್ಲವೇ ಎರಡು ಬೆಳೆ ಮಾತ್ರ ಬೆಳೆಯಲಾಗುತ್ತದೆ ಎಂದು ಹೇಳುತ್ತಿದ್ದಾರೆ ಇಲ್ಲಿನ ರೈತರು.
ಜಿಲ್ಲೆಯಲ್ಲಿ ಈ ಭಾರಿ 25 ದಿನಗಳ ತಡವಾಗಿ ಮುಂಗಾರು ಪ್ರಾರಂಭವಾಗಿದೆ. ವಾಡಿಕೆಯಂತೆ 1068 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 782 ಮಿ.ಮೀ ಮಾತ್ರ ಮಳೆಯಾಗಿದ್ದು, ಶೇಕಡಾ 27ರಷ್ಟು ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದಾಗಿ ಈ ಭಾರಿ ಕರಾವಳಿಯಲ್ಲಿ ಬಿತ್ತನೆ ಕಾರ್ಯ ಕೂಡ ತಡವಾಗಿದೆ.
ಕಳೆದ ವರ್ಷಕ್ಕೆ ಹೊಲಿಕೆ ಮಾಡಿದಲ್ಲಿ ಶೇಕಡಾ 10ರಷ್ಟು ಬಿತ್ತನೆ ಕಡಿಮೆ ಇದೆ. ಇದೀಗ ನಾಟಿ ಕಾರ್ಯ ಶುರುವಾಗಬೇಕಿದೆ. ಘಟ್ಟದ ಮೇಲ್ಭಾಗದಲ್ಲಿ ಮಳೆ ಸ್ವಲ್ಪ ತಡವಾಗಿ ಪ್ರಾರಂಭ ಆಗಿದ್ದರಿಂದ ಇದೀಗ ಬಿತ್ತನೆಗೆ ಸಜ್ಜಾಗಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಜಿ. ಗೌಡ ಮಾಹಿತಿ ನೀಡಿದರು.
ಉತ್ತರಕನ್ನಡ ಜಿಲ್ಲೆಯಲ್ಲಿ ಬಿತ್ತನೆ (ಹೆಕ್ಟೇರ್ಗಳಲ್ಲಿ)
1. ಕಾರವಾರ- 910 ಹೆಕ್ಟೇರ್ (1.98%)
2. ಅಂಕೋಲಾ - 3850 ಹೆಕ್ಟೇರ್ (34.29%)
3. ಕುಮಟಾ - 2639 ಹೆಕ್ಟೇರ್ (64.04%)
4. ಹೊನ್ನಾವರ - 1985 ಹೆಕ್ಟೇರ್ (57.68%)
5. ಭಟ್ಕಳ - 2426 (64.34%)
6. ಶಿರಸಿ - 7955 (17.54%)
7. ಸಿದ್ದಾಪುರ - 5772 (0.99%)
8. ಯಲ್ಲಾಪುರ - 2931 (29.3%)
9. ಮುಂಡಗೋಡ - 12358 (92.25%)
10. ಹಳಿಯಾಳ - 20900 (95.10%)
11. ಜೋಯಿಡಾ - 3890 (0.26%)
12. ದಾಂಡೇಲಿ - 700 (91.14%) ಸೇರಿದಂತೆ ಕಾರವಾರ ಜಿಲ್ಲೆಯಲ್ಲಿ ಒಟ್ಟು 66316.0 (60.27%) ಬಿತ್ತನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications