ಕಾರವಾರ ಮೂಲದ ಬಾಣಸಿಗನನ್ನು ಹತ್ಯೆಗೈದ ಕಾಬೂಲ್ ನ ಪ್ರತ್ಯೇಕತಾವಾದಿಗಳು
ಕಾರವಾರ, ಆಗಸ್ಟ್.03: ಅಫ್ಘಾನಿಸ್ತಾನದ ಕಾಬೂಲ್ ನ ಪ್ರತ್ಯೇಕತಾವಾದಿಗಳು ಕಾರವಾರದ ಕಡವಾಡ ಮೂಲದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದಾರೆ.
ಒಟ್ಟು ಮೂವರು ವಿದೇಶಿಗರನ್ನು ಅಪಹರಣ ಮಾಡಿದ್ದ ಪ್ರತ್ಯೇಕವಾದಿಗಳು, ಮಲೇಷ್ಯಾ, ಮ್ಯಾಸಿಡೋನಿಯಾದ ವ್ಯಕ್ತಿಗಳ ಜತೆಗೆ ಕಡವಾಡದ ಪ್ಯಾಟ್ಸನ್ (34) ಅವರನ್ನೂ ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.
ಕಾಬೂಲ್ ನಲ್ಲಿರುವ ಸಾಡೆಕ್ಸೋ ಎಂಬ ವಿಶ್ವದ 2ನೇ ಅತಿದೊಡ್ಡ ಅಂತಾರಾಷ್ಟ್ರೀಯ ಫುಡ್ ಮತ್ತು ಕ್ಯಾಟರಿಂಗ್ ಸರ್ವಿಸ್ ಕಂಪನಿಯಲ್ಲಿ ಬಾಣಸಿಗರಾಗಿ ಈ ಮೂವರು ಕೆಲಸ ನಿರ್ವಹಿಸುತ್ತಿದ್ದು, ಪ್ಯಾಟ್ಸನ್ ಸುಮಾರು ಹತ್ತು ವರ್ಷದಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಕಚೇರಿಗಳು, ಮಿಲಿಟರಿ, ಶಾಲೆಗಳು, ಆಸ್ಪತ್ರೆ ಮುಂತಾದ ಕಡೆಗೆ ಸಾಡೆಕ್ಸೋ ಕಂಪನಿ ಆಹಾರವನ್ನು ಸರಬರಾಜು ಮಾಡುತ್ತದೆ. ಇದು ವಿಶ್ವದಲ್ಲೇ 2ನೇ ಅತ್ಯಂತ ದೊಡ್ಡ ಆಹಾರ ಕಂಪನಿಯಾಗಿದೆ.
ತಮ್ಮ ಕೆಲಸದ ನಿಮಿತ್ತ ವಾಹನದಲ್ಲಿ ಹೋಗುತ್ತಿದ್ದಾಗ ಉಗ್ರರು ಅವರನ್ನು ಅಪಹರಿಸಿದ್ದರು. ಕಾರಿನಲ್ಲಿ ಹೋಗುತ್ತಿದ್ದಾಗ ಅಪಹರಣಕ್ಕೊಳಗಾದ ಈ ಮೂವರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ಅವರ ದೇಹಗಳು ಕಾರಿನೊಳಗೆ ಪತ್ತೆಯಾಗಿವೆ.
ಘಟನೆ ನಡೆದ ಸ್ಥಳದಲ್ಲಿ ಸಿಕ್ಕಿರುವ ಗುರುತಿನ ಚೀಟಿಯಿಂದಾಗಿ ಈ ಮೂವರನ್ನು ಗುರುತಿಸಲಾಗಿದೆ ಎಂದು ಅಫ್ಘಾನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಖಂಡನೆ
ಭಾರತೀಯನನ್ನು ಸೇರಿ ಮೂವರು ವಿದೇಶಿಗರನ್ನು ಅಪಹರಿಸಿ ಪ್ರತ್ಯೇಕವಾದಿಗಳು ಕೊಂದಿರುವುದನ್ನು ಭಾರತ ಬಲವಾಗಿ ಖಂಡಿಸಿದೆ.
ಕಾಬೂಲಿನಲ್ಲಿ ಅಪಹರಣಕ್ಕೆ ಗುರಿಯಾಗಿ ಹತನಾಗಿರುವ ಭಾರತೀಯ ವ್ಯಕ್ತಿಯ ಕಳೇಬರವನ್ನು ಭಾರತಕ್ಕೆ ಮರಳಿಸುವ ನಿಟ್ಟಿನಲ್ಲಿ ಅಫ್ಘಾನ್ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಕೇಂದ್ರ ಸರಕಾರ, ಕಾಬೂಲ್ ನಲ್ಲಿರುವ ಭಾರತೀಯ ದೂತಾವಾಸಕ್ಕೆ ನಿರ್ದೇಶ ನೀಡಿದೆ.
ಅದರಂತೆ ಇನ್ನೆರಡು ದಿನದಲ್ಲಿ ಪ್ಯಾಟ್ಸನ್ ನ ಮೃತದೇಹ ಭಾರತಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications