ಕಾರವಾರ ದೋಣಿ ದುರಂತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, ಚಾಲಕನ ಬಂಧನ
ಕಾರವಾರ, ಜನವರಿ 22: ಕಾರವಾರದ ಕಡಲಲ್ಲಿ ಸೋಮವಾರ (ಜನವರಿ 20 ) ನಡೆದ ದೋಣಿ ದುರಂತದ ವೇಳೆ ನಾಪತ್ತೆಯಾಗಿದ್ದ ಮಗುವೊಂದರ ಮೃತದೇಹ ಇಂದು ಬೆಳಗ್ಗೆ ಲೈಟ್ ಹೌಸ್ ಸಮೀಪ ಸಮುದ್ರದಲ್ಲಿ ಪತ್ತೆಯಾಗಿದೆ.
ಲೈಟ್ ಹೌಸ್ ಪ್ರದೇಶದಲ್ಲಿ ನೌಕಾಪಡೆ ಹೆಲಿಕಾಪ್ಟರ್ ಸುತ್ತಾಟ ನಡೆಸುತ್ತಿದ್ದ ವೇಳೆ ಮಗುವಿನ ದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎರಡು ದೋಣಿಗಳನ್ನು ರವಾನಿಸಿ, ಮೃತದೇಹ ತರಲಾಗಿದೆ.
ಮೃತ ದೇಹಗಳ ಪತ್ತೆ ಕಾರ್ಯಕ್ಕಾಗಿ ಪೊಲೀಸ್ ಇಲಾಖೆ, ಟ್ಯಾಗೊರ್ ಬೀಚ್ ಸಮಿತಿ ಸಿಬ್ಬಂದಿ, ಲೈಫ್ ಗಾರ್ಡ್ಸ್ನ ಐದು ತಂಡಗಳನ್ನು ರಚಿಸಲಾಗಿದೆ. ಇವು ಕಡಲುತೀರದಲ್ಲಿ ಶೋಧ ನಡೆಸುತ್ತಿವೆ. ಇಂಡಿಯನ್ ಕೋಸ್ಟ್ ಗಾರ್ಡ್ ನ c-155, c-420, c- 123 ಬೋಟುಗಳು ಶೋಧ ಕಾರ್ಯದಲ್ಲಿ ತೊಡಗಿವೆ.

ಅಲ್ಲದೆ, ICGS ನ ಅಮರ್ಥ್ಯ ನೌಕೆ, ನೌಕಾಸೇನೆಯ ತಿಲಂಚಾಂಗ್ ದೊಡ್ಡ ಬೋಟುಗಳು ರಾತ್ರಿಯಿಡೀ ಕಾರ್ಯ ನಿರ್ವಹಿಸುತ್ತಿವೆ.
ಸೋಮವಾರ (ಜನವರಿ 20 )ದಂದು ಅರಬ್ಬೀ ಸಮುದ್ರದ ನಡುಗಡ್ಡೆಯ ಕೂರ್ಮಗಡ ದ್ವೀಪಕ್ಕೆ ಜಾತ್ರೆಗೆಂದು ತೆರಳಿದ್ದ ಭಕ್ತರ ದೋಣಿ ಮುಗುಚಿ ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಆದರೆ ಇದೀಗ ಸಾವಿನ ಸಂಖ್ಯೆ 11ಕ್ಕೆ ಏರಿರುವ ಮಾಹಿತಿ ತಿಳಿದು ಬಂದಿದ್ದು, ಈ ದುರಂತದಲ್ಲಿ 18 ಜನರನ್ನು ರಕ್ಷಣೆ ಮಾಡಲಾಗಿದೆ.
ಮುಗುಚಿದ ದೋಣಿಯ ಚಾಲಕನ ಪ್ರಕಾರ, 22 ಮಂದಿ ದ್ವೀಪದಲ್ಲಿ ಪೂಜೆ ಮುಗಿಸಿ ವಾಪಾಸ್ ಆಗುತ್ತಿದ್ದರು. ಅಷ್ಟರಲ್ಲೇ ಅಲೆಗಳ ಅಬ್ಬರಕ್ಕೆ ದೋಣಿ ಸಮುದ್ರದ ನಡುಮಧ್ಯೆ ಮುಗುಚಿದೆ. ಈ ವೇಳೆ ಈಜು ಬರುತ್ತಿದ್ದ ಕೆಲವರು ದೋಣಿಯ ಮೇಲೆ ಹತ್ತಿ ಕುಳಿತಿದ್ದಾರೆ. ಆದರೆ ಇನ್ನು 6 ಮಂದಿ ಪತ್ತೆಯಾಗಿಲ್ಲ ಎನ್ನಲಾಗಿದೆ.

ಚಾಲಕನ ಬಂಧನ
ಬೋಟ್ ದೇವಭಾಗದ ದಯಾನಂದ ರಾಮ ಜಾದವ್ ಅವರಿಗೆ ಸೇರಿದ್ದಾಗಿದೆ. ಚಾಲಕನ ಬಳಿ ಬೋಟ್ಗೆ ಸಂಬಂಧಿಸಿದಂತೆ ಯಾವುದೇ ಪರವಾನಗಿ ಇರಲಿಲ್ಲ. ಅಲ್ಲದೇ, ಅಪಘಾತ ನಡೆದ ಸಂದರ್ಭದಲ್ಲಿ ಆತ ಬೋಟ್ನಿಂದ ಜಿಗಿದು ಪರಾರಿಯಾಗಿದ್ದ. ನಂತರ ಆತನನ್ನು ಸೇರಿ ಒಟ್ಟು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.












Click it and Unblock the Notifications