ಅಬ್ಬರಿಸುತ್ತಿರುವ ಸಮುದ್ರದ ನಡುವೆ ದೋಣಿ ಎಂಜಿನ್ ಬಂದ್; ಸಿಲುಕಿಕೊಂಡ ಮೀನುಗಾರರು
ಕಾರವಾರ, ಅಕ್ಟೋಬರ್ 26: ಎಂಜಿನ್ ಸ್ಥಗಿತಗೊಂಡು ಗೋವಾ ರಾಜ್ಯದ ಲೋಲೆಮ್ ಬಳಿಯ ಆಳ ಸಮುದ್ರದಲ್ಲಿ ಕರ್ನಾಟಕದ ಮೀನುಗಾರರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಅಸ್ಸಾಂನಲ್ಲಿ 80 ಪ್ರಯಾಣಿಕರಿದ್ದ ನಾಡ ದೋಣಿ ಮುಳುಗಿ ಹಲವರು ನಾಪತ್ತೆ
ಉಡುಪಿ ಮೂಲದ ರಾಜ್ ಕಿರಣ್ ಎನ್ನುವ ದೋಣಿ ಇದಾಗಿದ್ದು, ಉಡುಪಿಯಿಂದ ಮೀನುಗಾರಿಕೆಗೆ ಗೋವಾಕ್ಕೆ ತೆರಳುವಾಗ ಎಂಜಿನ್ ಬಂದ್ ಆಗಿದೆ. ಹೀಗಾಗಿ ಅದರಲ್ಲಿದ್ದ ಮೀನುಗಾರರು ಸಮುದ್ರದ ನಡುವೆ ಸಿಲುಕಿಕೊಂಡಿದ್ದಾರೆ. ಶುಕ್ರವಾರ ಸಂಜೆ ಈ ದೋಣಿ ಸಿಲುಕಿಕೊಂಡಿದ್ದು, ಅದರಲ್ಲಿ ಎಂಟು ಜನ ಮೀನುಗಾರರು ಇದ್ದುದಾಗಿ ತಿಳಿದುಬಂದಿದೆ.
ಅಲೆಗಳ ಅಬ್ಬರ ಮತ್ತು ರಭಸದಿಂದ ಬೀಸುತ್ತಿದ್ದ ಗಾಳಿ ನಡುವೆ ಅವರ ರಕ್ಷಣಾ ಕಾರ್ಯಾಚರಣೆ ತಕ್ಷಣವೇ ಸಾಧ್ಯವಾಗಿರಲಿಲ್ಲ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಇರುವ ಹಿನ್ನಲೆಯಲ್ಲಿ ಮೀನುಗಾರರು ಆತಂಕಗೊಂಡಿದ್ದಾರೆ. ಶನಿವಾರ ಕರಾವಳಿ ಕಾವಲು ಪಡೆ ಅಧಿಕಾರಿಗಳು ಹಾಗೂ ನೌಕಾಪಡೆ ಸಿಬ್ಬಂದಿ ದೋಣಿಯನ್ನು ದಡಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ. ರಾಜ್ಯದ ಅಧಿಕಾರಿಗಳು ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಮೀನುಗಾರರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನದಲ್ಲಿದ್ದಾರೆ.