ಸ್ಕೂಬಾ ಡೈವ್ ವೇಳೆ ಪತ್ತೆಯಾದ ಬೃಹತ್ ಹಂಪ್ ಬ್ಯಾಕ್ ತಿಮಿಂಗಲ
ಕಾರವಾರ, ಮಾರ್ಚ್ 08: ವಿಶ್ವದಲ್ಲೇ ಅಪರೂಪ ಹಾಗೂ ಅಳವಿನಂಚಿನಲ್ಲಿರುವ ಅರಬ್ಬಿ ಸಮುದ್ರದ ಹಂಪ್ ಬ್ಯಾಕ್ ತಿಮಿಂಗಿಲ ಮುರುಡೇಶ್ವರದ ನೇತ್ರಾಣಿ ನಡುಗಡ್ಡೆಯ ಬಳಿ ಪತ್ತೆಯಾಗಿದೆ.
ನೇತ್ರಾಣಿ ನಡುಗಡ್ಡೆಯ ಸಮುದ್ರದಾಳದಲ್ಲಿ ಸ್ಕೂಬಾ ಡೈವ್ ಮಾಡುತ್ತಿದ್ದವರಿಗೆ ಈ ಬೃಹತ್ ತಿಮಿಂಗಿಲ ಕಾಣಿಸಿದ್ದು, ಇದರ ವಿಡಿಯೋ ತುಣುಕುಗಳು ಕೂಡ ದೊರೆತಿವೆ. ಸುಮಾರು 100 ಮೀಟರ್ ಆಳದಲ್ಲಿ ಹಂಪ್ ಬ್ಯಾಕ್ ಗಂಡು ತಿಮಿಂಗಿಲ ಪತ್ತೆಯಾಗಿದ್ದು, ಈ ವೇಳೆ ಈ ತಿಮಿಂಗಿಲದ ಬಾಲಕ್ಕೆ ಪೆಟ್ಟು ಬಿದ್ದಿರುವುದು ಗೋಚರಿಸಿದೆ. ಹೀಗಾಗಿ ವಿಶಾಂತ್ರಿ ಸ್ಥಿತಿಯಲ್ಲಿ ತಿಮಿಂಗಿಲವಿತ್ತು ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೋಳಿಗೆ ರಂಗೇರಿದೆ ಸುಗ್ಗಿ ಕುಣಿತ
ಆಳ ಸಮುದ್ರದಲ್ಲಿ ಹೆಚ್ಚು ಓಡಾಡುವ ಈ ತಿಮಿಂಗಿಲಗಳು ಮುರುಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡ ದಾಖಲೆ ಇದಾಗಿದ್ದು, ಈ ಹಿಂದೆ 2017 ರಲ್ಲಿ ಕೇರಳದಲ್ಲಿ ಕಾಣಿಸಿಕೊಂಡಿತ್ತು. ಹೆಚ್ಚಾಗಿ ಕಾಣಿಸಿಕೊಳ್ಳದ ಇವು ಸಮುದ್ರದಾಳದಲ್ಲೇ ತನ್ನ ಜೀವಿತ ಅವಧಿಯನ್ನು ಕಳೆಯುವ ಜೊತೆಗೆ, ಅರಬ್ಬಿ ಸಮುದ್ರದುದ್ದಕ್ಕೂ ವಲಸೆ ಹೋಗುತ್ತವೆ.
ಏನಿದರ ವಿಶೇಷತೆ?
ಹಲವು ಬಾರಿ ತನ್ನ ವಲಸೆ ಪ್ರವೃತ್ತಿಯಿಂದ ದೊಡ್ಡ ದೊಡ್ಡ ಹಡಗುಗಳಿಗೆ ಸಿಲುಕಿ ಗಾಯಗೊಂಡು ಸಾವನ್ನುಪ್ಪುತ್ತವೆ. ಇನ್ನು ಕೆಲವು ತಿಮಿಂಗಿಲಗಳು ಮನುಷ್ಯನ ಮಾಂಸದ ದಾಹಕ್ಕೆ ತುತ್ತಾಗಿ ಬೇಟೆಗೆ ಸಿಲುಕುತ್ತಿವೆ. ಹೀಗಾಗಿ ಇವುಗಳ ಸಂತತಿ ಕ್ಷೀಣವಾಗಲು ಕಾರಣವಾಗಿದೆ.
ವಿಶ್ವದಲ್ಲೇ ಅಪರೂಪವಾದ ಈ ತಿಮಿಂಗಿಲವು ಅರಬ್ಬಿ ಸಮುದ್ರದಲ್ಲಿ ವಾಸಿಸುವ ಅತೀ ಅಪರೂಪದ ಸಮುದ್ರ ಸಸ್ತನಿ. ಇಡೀ ವಿಶ್ವದಲ್ಲಿ ಇದರ ಸಂಖ್ಯೆ ನೂರು ಮಾತ್ರ. ಓಮಾನ್ ದೇಶದಿಂದ ಭಾರತದವರೆಗೆ, ಶ್ರೀಲಂಕಾದಿಂದ ಓಮಾನ್ವರೆಗೆ ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತವೆ. ಜಗತ್ತಿನ ಅತೀ ದೊಡ್ಡ ತಿಮಿಂಗಿಲಗಳಲ್ಲಿ ಇದು ನಾಲ್ಕನೇ ಸ್ಥಾನ ಪಡೆದಿದೆ.
ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತದೆ
ಈ ತಿಮಿಂಗಿಲಗಳಲ್ಲಿ ಗಂಡು ತಿಮಿಂಗಿಲ 15 ರಿಂದ 20 ನಿಮಿಷ ತನ್ನ ವಿಶಿಷ್ಟ ಧ್ವನಿಯಲ್ಲಿ ಮನುಷ್ಯರಂತೆ ಹಾಡು ಹೇಳುತ್ತದೆ. ಹೀಗಾಗಿಯೇ ಈ ತಿಮಿಂಗಿಲಗಳನ್ನು ಅದರ ಧ್ವನಿಯ ಮೂಲಕವೇ ಸಂಶೋಧಕರು ಪ್ರತ್ಯೇಕವಾಗಿ ಗುರುತಿಸುತ್ತಾರೆ.
ಕಾರವಾರದ ಕಪ್ಪು ಮರಳಿನ ಕಡಲತೀರಕ್ಕೆ ಸೇತುವೆ ಭಾಗ್ಯ ಯಾವಾಗ?
ಇದು ಉಸಿರಾಟ ಮಾಡುವಾಗ ಅದರ ಮೂಗಿನಿಂದ ಮೂರು ಮೀಟರ್ ಎತ್ತರ ನೀರು ಚಿಮ್ಮುತ್ತವೆ. ಸುಮಾರು 15 ಮೀಟರ್ನಿಂದ 18 ಮೀಟರ್ ಉದ್ದಕ್ಕೆ ಹೆಣ್ಣು ತಿಮಿಂಗಿಲ ಬೆಳೆದರೆ, 13 ರಿಂದ 14 ಮೀಟರ್ನಷ್ಟು ಗಂಡು ತಿಮಿಂಗಿಲ ಉದ್ದವಿರುತ್ತದೆ. ಸುಮಾರು 30 ಮೆಟ್ರಿಕ್ ಟನ್ನಷ್ಟು ಭಾರ ಇರಲಿದ್ದು, ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತವೆ.
ತಿಮಿಂಗಲ ಸಂಶೋಧನೆಗೆ ಸಿದ್ಧತೆ
ನೇತ್ರಾಣಿ ನಡುಗಡ್ಡೆಯಲ್ಲಿ ಈ ತಿಮಿಂಗಿಲಗಳು ಪತ್ತೆಯಾಗಿರುವ ಬಗ್ಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಮಾಹಿತಿ ರವಾನೆ ಮಾಡಲಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದ್ದು, ಇವುಗಳ ಸಂಶೋಧನೆಗಾಗಿ ನುರಿತ ತಜ್ಞರ ನೇಮಕ ಮಾಡಿದೆ. ಹೆಚ್ಚಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ 60:40 ಸಹಭಾಗಿತ್ವದಲ್ಲಿ 42 ಲಕ್ಷ ಹಣ ಮಂಜೂರು ಮಾಡಲಾಗಿದೆ. ಈವರೆಗೂ ಈ ತಿಮಿಂಗಿಲಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆದಿಲ್ಲ. ಮುರುಡೇಶ್ವರ ಭಾಗದಲ್ಲಿ ಇವು ಕಾಣಿಸಿದ್ದು, ಹೆಚ್ಚಿನ ಸಂಶೋಧನೆಗೆ ಸಹಕಾರಿಯಾಗಲಿದೆ ಎಂದು ತಜ್ಞರು ಈ ಭಾಗದಲ್ಲಿ ಸದ್ಯದಲ್ಲೇ ಸಂಶೋಧನೆಗಾಗಿ ಬೀಡು ಬಿಡಲಿದ್ದಾರೆ.
ಮುರುಡೇಶ್ವರದಿಂದ 20 ಕಿ.ಮೀ ದೂರದಲ್ಲಿ ನೇತ್ರಾಣಿ ದ್ವೀಪ
ಮುರುಡೇಶ್ವರದಿಂದ ಅರಬ್ಬಿ ಸಮುದ್ರದಲ್ಲಿ 20 ಕಿಲೋ ಮೀಟರ್ ಕ್ರಮಿಸಿದರೆ ನೇತ್ರಾಣಿ ನಡುಗಡ್ಡೆ ದ್ವೀಪ ಬರುತ್ತದೆ. ಈ ದ್ವೀಪದ ಸುತ್ತಮುತ್ತಲೂ ಮೂವತ್ತಕ್ಕೂ ಹೆಚ್ಚು ಪ್ರಭೇದದ ಮೀನುಗಳು, ಹವಳದ ದಿಬ್ಬಗಳು, ಸಮುದ್ರದ ಆಮೆಗಳ ಆವಾಸ ಸ್ಥಾನವಾಗಿದ್ದು, ಭಾರತೀಯ ನೌಕಾದಳವು ಈ ದ್ವೀಪದಲ್ಲಿ ಸಮರಾಭ್ಯಾಸ ನಡೆಸುತ್ತದೆ. ಕಳೆದ ಮೂರು ವರ್ಷದ ಹಿಂದೆ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಈ ಪ್ರದೇಶದಲ್ಲಿ ಪ್ರವಾಸಿಗರಿಗೆ ಸ್ಕೂಬಾ ಡೈವ್ ಮಾಡಲು ಅವಕಾಶ ಮಾಡಿಕೊಟ್ಟಿದೆ.