ಹೊನ್ನಾವರ; ಚಿನ್ನದ ಸರ ದೋಚಿದವ 24 ಗಂಟೆಯಲ್ಲಿ ಬಂಧನ!
ಹೊನ್ನಾವರ, ಜುಲೈ 02; 'ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ' ಎನ್ನುವ ಮಾತಿದೆ. ಚಿನ್ನದ ಮೇಲಿನ ವ್ಯಾಮೋಹದಿಂದ ಅನ್ನ ಹಾಕಿದ ಮನೆಗೆ ಕನ್ನ ಹಾಕಿ 10 ಸಾವಿರ ನಗದು ಹಾಗೂ ಚಿನ್ನದ ನೆಕ್ಲೆಸ್ ದೋಚಿದ್ದ ಆರೋಪಿಯನ್ನು, ಕದ್ದ ಮಾಲು ಸಮೇತ 24 ಗಂಟೆಯಲ್ಲಿ ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಚಿನ್ ವಿರೂಪಾಕ್ಷಪ್ಪ ರಾಮಾಪುರ (21) ಎಂದು ಗುರುತಿಸಲಾಗಿದೆ. ಈತ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿಯ ಕೃಷ್ಣ ಜಟ್ಟಿ ಪಟಗಾರ ಎಂಬುವವರ ಮನೆಯ ಗಾರೆ ಕೆಲಸಕ್ಕಾಗಿ ಏಪ್ರಿಲ್ ತಿಂಗಳಲ್ಲಿ ಬಂದಿದ್ದ.
ಗಾರೆ ಕೆಲಸ ಮಾಡುತ್ತಿದ್ದ ಸಮಯದಲ್ಲಿಯೇ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾದ ಕಾರಣ ಊರಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಕೃಷ್ಣ ಪಟಗಾರ ಕುಟುಂಬದವರು ಮಾನವೀಯತೆ ದೃಷ್ಟಿಯಿಂದ ಆತನಿಗೆ ತಮ್ಮ ಮನೆಯಲ್ಲಿಯೇ ಆಶ್ರಯ ಕೊಟ್ಟು, ಊಟ, ತಿಂಡಿ ನೀಡಿದ್ದರು. ಆದರೆ ಮೇ ತಿಂಗಳ ಮೊದಲ ವಾರದಲ್ಲಿ ಈತ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ.

ಅನುಮಾನಗೊಂಡು ಮನೆಯನ್ನು ತಡಕಾಡಿದಾಗ 10 ಸಾವಿರ ನಗದು ಹಾಗೂ 18 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಕಳುವಾಗಿರುವುದು ಕಂಡುಬಂದಿದೆ. ಆದರೂ ಕೆಲಸಕ್ಕೆ ಬಂದವನ ಬಗ್ಗೆ ಅಷ್ಟಾಗಿ ಅನುಮಾನವಿಲ್ಲದ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹಿಂದೇಟು ಹಾಕಿದ್ದರು.
ಒಂದು ತಿಂಗಳಾದರೂ ಕಳುವಾದ ಸೊತ್ತು ಸಿಗದ ಹಿನ್ನಲೆಯಲ್ಲಿ 29-06-2021ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿ.ಪಿ.ಐ ಶ್ರೀಧರ ಎಸ್. ಆರ್. ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿಕೊಂಡು ಅಖಾಡಕ್ಕಿಳಿದು ಒಂದೇ ದಿನದಲ್ಲಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೆರೂರಿನ ತನ್ನ ಸ್ವಂತ ಮನೆಯಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ ಸಾವಿತ್ರಿ ನಾಯಕ, ಪಿ.ಎಸ್.ಐ ಶಶಿಕುಮಾರ್ ಸಿ. ಆರ್. (ಕಾ.ಸು), ಪಿ. ಎಸ್. ಐ. 2 ಮಹಾಂತೇಶ ನಾಯಕ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications