ಸೌಹಾರ್ದತೆಗೆ ಸಾಕ್ಷಿಯಾದ ಕಾರವಾರ: ಮುಸ್ಲಿಂ ಯುವಕರಿಂದ ಕೃಷ್ಣನ ಪೂಜೆ
ಕಾರವಾರ ನವೆಂಬರ್10 : ದೇಶದಾದ್ಯಂತ ಹಿಂದೂ ಮುಸ್ಲಿಂ ನಡುವೆ ವಿಷ ಬಿಜ ಬಿತ್ತಿ ಸೌಹಾರ್ದ ಬದುಕಿಗೆ ಧಕ್ಕೆ ತರುವ ಕೃತ್ಯಗಳು ನಡೆಯುತ್ತಲೇ ಇದೆ. ಅದರಲ್ಲಿಯೂ ರಾಜ್ಯದಲ್ಲಿ ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾರವಾರದಲ್ಲಿ ನಡೆಯುತ್ತಿರುವ ಕೃಷ್ಣನ ಪೂಜೆ ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಕಾರವಾರ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಇದೇ ಪ್ರಥಮ ಬಾರಿಗೆ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದಸರಾ ಮುಗಿದ ನಂತರ ಸಾಮಾನ್ಯವಾಗಿ ಕಾರವಾರ ಹಾಗೂ ಅಂಕೋಲಾ ತಾಲೂಕಿನ ಹಲವೆಡೆ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಬಾರಿ ಕೆ.ಎಚ್.ಬಿ ಕಾಲೋನಿಯಲ್ಲಿ ಮಾಡಿರುವ ಕೃಷ್ಣನ ಪ್ರತಿಷ್ಠಾಪನೆ ಮಾತ್ರ ಕೋಮು ಸಾಮರಸ್ಯವನ್ನು ಮೂಡಿಸಿದೆ.
ಕೆ.ಎಚ್.ಬಿ ಕಾಲೋನಿಯ ಕೆಲ ಹಿಂದೂ ಯುವಕರ ಜೊತೆ, ಮಹಮ್ಮದ್ ಷಾ, ಶಾರುಕ್, ಸಿದ್ದಿಕ್ ಷಾ ಎನ್ನುವವರು ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಕಾರ್ಯಕ್ಕೆ ಕಮಿಟಿಯೊಂದನ್ನು ರಚಿಸಲಾಗಿದ್ದು, ಕಮಿಟಿ ಅಧ್ಯಕ್ಷ ಸಹ ಮುಸ್ಲಿಂ ಯುವಕನೇ ಆಗಿದ್ದಾರೆ.

ಸಾಮರಸ್ಯ ಮೆರೆದ ಕೆ.ಎಚ್.ಬಿ ಕಾಲೋನಿ ಯುವಕರು
ದಸರಾ ಮುಗಿದ ನಂತರ ಸಾಮಾನ್ಯವಾಗಿ ಕಾರವಾರ ಹಾಗೂ ಅಂಕೋಲಾ ತಾಲೂಕಿನ ಹಲವೆಡೆ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆ.ಎಚ್.ಬಿ ಕಾಲೋನಿಯಲ್ಲಿಯೂ ಮೊದಲ ಬಾರಿಗೆ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿಯವರೆಗೂ ಮುಸ್ಲಿಂ ಹಾಗೂ ಹಿಂದೂ ಯುವಕರು ದೇವರನ್ನು ಕಾಯುವುದರ ಜೊತೆಗೆ ಪೂಜೆಯನ್ನು ಸಹ ತಾವೇ ಮಾಡುತ್ತಾರೆ. ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪಿಸಿರುವುದರಿಂದ ಕೆಲ ಸಾರ್ವಜನಿಕರು ಬಂದು ಒಂದೊಂದು ದಿನ ಪೂಜೆ ಮಾಡುತ್ತಾರೆ. ಉಳಿದ ದಿನ ಕೃಷ್ಣನಿಗೆ ಮುಸ್ಲಿಂ ಯುವಕರ ಪೂಜೆಯೇ ನಡೆಯುತ್ತದೆ.

ಧರ್ಮ ಜಾತಿ ಮೀರಿ ಕಾರವಾರದಲ್ಲಿ ಕೃಷ್ಣನ ಜಪ
ಕಳೆದ ಅಕ್ಟೋಬರ್ 26ಕ್ಕೆ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಒಂದು ತಿಂಗಳ ಕಾಲ ಮೂರ್ತಿಯನ್ನು ಇಟ್ಟು ಪೂಜೆ ಮಾಡಲಾಗುತ್ತಿದೆ. ಇನ್ನು ಪ್ರತಿನಿತ್ಯ ಪೂಜೆ ಯಾರು ಮಾಡಲಾಗುವುದು ಎನ್ನುವ ಬೋರ್ಡ್ ಸಹ ಸ್ಥಳದಲ್ಲಿ ಹಾಕಲಾಗಿದೆ. ಹಿಂದೂ, ಮುಸ್ಲಿಂ ಧರ್ಮ ಎಂದು ಕಿತ್ತಾಟ ಮಾಡುವ ಕಾಲದಲ್ಲಿ, ಧರ್ಮ, ಜಾತಿ ಎನ್ನುವ ಯಾವುದೇ ಬೇದ ಭಾವ ಇಲ್ಲದೆ ಎರಡು ಧರ್ಮದ ಯುವಕರು ಒಂದಾಗಿ ದೇವರ ಪೂಜೆ ಮಾಡುತ್ತಿದ್ದಾರೆ. ಕೃಷ್ಣ ಮೂರ್ತಿ ಪ್ರತಿಷ್ಠಾಪನೆ ಕಮಿಟಿಯಲ್ಲಿರುವ ಬಹುತೇಕ ಎಲ್ಲಾ ಯುವಕರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಾರೆ. ಹಿಂದಿನಿಂದಲೂ ಎರಡು ಧರ್ಮದ ಸ್ನೇಹಿತರು ಗುಂಪೊಂದನ್ನು ಮಾಡಿಕೊಂಡಿದ್ದರು.

ಕೃಷ್ಣನ ಪೂಜೆ ಮಾಡುವುದು ನಮಗೆ ಖುಷಿ
ಸಣ್ಣ ಸಣ್ಣ ವಿಚಾರಗಳೂ ಕೋಮು ಭಾವನೆಗೆ ದಕ್ಕೆ ಬರುವಂತಹ ಕಾಲದಲ್ಲಿ ಮುಸ್ಲಿಂ ಯುವಕರು ಹಿಂದೂ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿಶೇಷ ಎಂದರೆ ಈ ಯುವಕರು ತಾವು ಮುಸ್ಲಿಂ ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಹಾಗೇ ಅವರ ಹಿಂದೂ ಸ್ನೇಹಿತರು ಸಹ. ನಾವೆಲ್ಲ ಒಂದೇ, ನಮ್ಮಲ್ಲಿ ಇರುವುದು ಒಂದೇ ರಕ್ತ ಎನ್ನುವುದು ಈ ಯುವಕರ ಗುಂಪಿನವರ ಅಭಿಪ್ರಾಯ. ಇವರ ಈ ಸ್ನೇಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಮ್ಮದ್ ಷಾ, "ನಮ್ಮಲ್ಲಿ ಹಿಂದೂ-ಮುಸ್ಲಿಂ ಎನ್ನುವ ಭೇದ-ಭಾವವಿಲ್ಲ. ನಾನು ಚಿಕ್ಕ ವಯಸ್ಸಿನಿಂದಲೂ ಹಿಂದೂ ಸ್ನೇಹಿತರ ಜೊತೆಯಲ್ಲಿಯೇ ಬೆಳೆದಿದ್ದೇನೆ. ನಮ್ಮ ರಂಜಾನ್ ಹಬ್ಬಕ್ಕೆ ಹಿಂದೂ ಸ್ನೇಹಿತರು ನಮ್ಮ ಮನೆಗೆ ಬಂದು ಆಚರಿಸುತ್ತಾರೆ. ಹಾಗೆಯೇ ಹಿಂದೂಗಳ ಹಬ್ಬಕ್ಕೆ ನಾವೆಲ್ಲಾ ಹೋಗಿ ಆಚರಿಸುತ್ತೇವೆ. ಒಮ್ಮೆಯೂ ನಾವು ಬೇರೆ ಧರ್ಮ ಎಂದು ನೋಡಿಲ್ಲ ಇದೀಗ ಕೃಷ್ಣನ ಮೂರ್ತಿ ಇಟ್ಟು ಪೂಜೆ ಮಾಡುವುದು ನಮಗೆ ಖುಷಿ ಕೊಡುತ್ತಿದೆ," ಎಂದು ಸಂತಸ ಹಂಚಿಕೊಂಡರು.

ಹಿಂದೂ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇವೆ
ಈ ಕಮಿಟಿಯಲ್ಲಿರುವ ಮತ್ತೋರ್ವ ಮುಸ್ಲಿಂ ಯುವಕ ಶಾರುಕ್ ಮಾತನಾಡಿ, "ಹಿಂದೂ, ಮುಸ್ಲಿಂ ಎಲ್ಲರೂ ಒಂದೇ. ಮೊದಲಿನಿಂದಲೂ ನಾನು ಹಿಂದೂ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇನೆ. ಈಗಲೂ ಕೃಷ್ಣನ ಮೂರ್ತಿ ಇಟ್ಟು ಪೂಜೆ ಮಾಡುತ್ತಿದ್ದೇನೆ. ಅಲ್ಲದೇ ಗಣಪತಿ ಹಬ್ಬವನ್ನೂ ಸಹ ಸಂಭ್ರಮದಿಂದ ಮಾಡುತ್ತೇವೆ. ಧರ್ಮ-ಜಾತಿ ಎನ್ನುವ ಭೇದ ಭಾವ ನಮಗೆ ಇಲ್ಲ. ನನ್ನ ಸ್ನೇಹಿತರು ನಮ್ಮ ಹಬ್ಬದ ಸಂದರ್ಭದಲ್ಲಿ ನಮ್ಮ ಮನೆಗೆ ಬರುತ್ತಾರೆ. ನಾವೆಲ್ಲರೂ ಜೊತೆಯಲ್ಲಿ ಖುಷಿಯಾಗಿದ್ದೇವೆ" ಎಂದು ಹೇಳಿದ್ದಾರೆ. ಕಾರವಾರದ ಕೆ.ಎಚ್.ಬಿ ಕಾಲೋನಿ ಯುವಕರ ಈ ಸ್ನೇಹ ಸೌಹಾರ್ದತೆ ಎಲ್ಲರ ಮೆಚ್ಚುಗೆ ಪಡೆದಿದೆ.












Click it and Unblock the Notifications