ಉತ್ತರ ಕನ್ನಡದಲ್ಲಿ ಆಸ್ಪತ್ರೆ ಕೂಗು: ಮತ್ತೊಮ್ಮೆ ಟ್ವಿಟರ್ ಅಭಿಯಾನ!
ಕಾರವಾರ, ಜುಲೈ 24; ಆಂಬುಲೆನ್ಸ್ ಪಲ್ಟಿಯಾಗಿ ನಡೆದ ಅಪಘಾತದಲ್ಲಿ 4 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈಟೆಕ್ ಆಸ್ಪತ್ರೆ ಕೂಗು ಮತ್ತೆ ಜೋರಾಗ ತೊಡಗಿದೆ.
ಜಿಲ್ಲೆಯ ವಿವಿಧೆಡೆ ಹೋರಾಟಕ್ಕೂ ಕರೆ ನೀಡಿರುವ ಸಂಘಟನಕಾರರ ಜೊತೆಗೆ ಜಿಲ್ಲೆಯ ಯುವ ಸಮೂಹ ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡದೇ ಇದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ಟ್ವಿಟರ್ ಅಭಿಯಾನ ನಡೆಸಲು ಸಾಮಾಜಿಕ ಜಾಲತಾಣಗಳ ಮೂಲಕ ಕರೆ ನೀಡಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಬೈಂದೂರಿನ ಶಿರೂರು ಟೋಲ್ಗೇಟ್ ಬಳಿ ಸಂಭವಿಸಿದ ಆಂಬ್ಯುಲೆನ್ಸ್ ಭೀಕರ ಅಪಘಾತದಲ್ಲಿ ಹೊನ್ನಾವರದ ನಾಲ್ವರು ಸಾವನ್ನಪ್ಪಿದ್ದರು. ಹೊನ್ನಾವರದಲ್ಲಿ ಚಿಕಿತ್ಸೆ ಸಾಧ್ಯವಾಗದೇ ಉಡುಪಿಗೆ ಕರೆದುಕೊಂಡು ಹೋಗಲು ಸೂಚಿಸಿದ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ ವೇಗವಾಗಿ ತೆರಳುವಾಗ ಅಪಘಾತ ಸಂಭವಿಸಿತ್ತು.

ಆದರೆ ಇದೀಗ ಈ ಅವಘಡದ ಬೆನ್ನಲ್ಲೇ ಜಿಲ್ಲೆಯ ಜನ ಮತ್ತೊಮ್ಮೆ ಸುಸಜ್ಜಿತ ಆಸ್ಪತ್ರೆಗಾಗಿ ಜನರು ಧ್ವನಿ ಎತ್ತಿದ್ದಾರೆ. ಸಾಮಾಜಿಕ ತಾಲತಾಣಗಳಲ್ಲಿ ಈ ವಿಚಾರ ಟ್ರೆಂಡ್ ಆಗುತ್ತಿದೆ.
ಅಭಿಪ್ರಾಯ ಹಂಚಿಕೊಳ್ಳತ್ತಿರುವ ಜನ; ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ಬುಕ್, ಟ್ವಿಟರ್ ಮೂಲಕ ಸುಸಜ್ಜಿತ ಆಸ್ಪತ್ರೆಗಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವ ಜನ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಇಷ್ಟು ವರ್ಷವಾದರೂ ಒಂದು ಸುಸಜ್ಜಿತ ಆಸ್ಪತ್ರೆ ಮಂಜೂರಿಸಲು ಸಾಧ್ಯವಾಗದೇ ಇರುವುದಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ಅಲ್ಲದೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು ಈ ಬಗ್ಗೆ ಪ್ರಯತ್ನ ನಡೆಸದೇ ಇರುವುದಕ್ಕೆ ಆಕ್ರೋಶ ಹೊರಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಅಪಘಾತಗಳು ಸಂಭವಿಸಿದಾಗ ಇಲ್ಲವೆ ಇತರೆ ತುರ್ತು ಆರೋಗ್ಯ ಸಂಬಂಧಿಸಿದ ಚಿಕಿತ್ಸೆಗಳಿಗಾಗಿ ದೂರದ ಮಂಗಳೂರು, ಉಡುಪಿ, ಶಿವಮೊಗ್ಗ, ಹುಬ್ಬಳ್ಳಿ, ಗೋವಾಗೆ ತೆರಳಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇರೆ ಕಡೆ ಚಿಕಿತ್ಸೆಗೆ ತೆರಳುವ ಸಂದರ್ಭ ಅದೆಷ್ಟೋ ರೋಗಿಗಗಳು ಅರ್ಧ ರಸ್ತೆಯಲ್ಲಿಯೇ ಸಾವನ್ನಪ್ಪುತ್ತಿರುವ ಹಿನ್ನಲೆಯಲ್ಲಿ ದಶಕಗಳಿಂದಲೂ ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ನಡೆಸಲಾಗುತ್ತಿದೆ. ಆದರೆ ಅದು ಸಾಧ್ಯವಾಗದೇ ಇದ್ದಾಗ ಕಳೆದ ಎರಡು ವರ್ಷದ ಹಿಂದೆ ಹ್ಯಾಷ್ಟ್ಯಾಗ್ ಬಳಸಿ ಟ್ವಿಟ್ಟರ್ ಅಭಿಯಾನದ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿತ್ತು.

ಆದರೆ ಅಂದು ಅದು ಕೇವಲ ಹೇಳಿಕೆಗೆ ಸೀಮಿತವಾಗಿ ಆಸ್ಪತ್ರೆ ಕನಸು ಕನಸಾಗಿಯೇ ಉಳಿದಿದೆ. ಇದೀಗ ಮತ್ತೊಮ್ಮೆ ಟ್ವಿಟರ್ ಮೂಲಕ ರಾಷ್ಟ್ರಮಟ್ಟದ ಗಮನ ಸೆಳೆಯಲಾಗುತ್ತಿದೆ.
ಜುಲೈ 24ರ ಭಾನುವಾರ ಟ್ವಿಟರ್ ಅಭಿಯಾನ ನಡೆಯಲಿದ್ದು, ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣಕ್ಕೆ ಟ್ವಿಟರ್ನಲ್ಲಿ ಆಗ್ರಹಿಸುವಂತೆ ಮನವಿ ಮಾಡಲಾಗಿದೆ.
ಅತಿ ಹೆಚ್ಚು ಅಪಘಾತಗಳು; ಇನ್ನು ಜಿಲ್ಲೆಯಲ್ಲಿ 2018ರ ಮೇ ತಿಂಗಳಿನಿಂದ 2019ರ ಏಪ್ರಿಲ್ವರೆಗೆ ಜಿಲ್ಲೆಯ ವಿವಿಧೆಡೆ 1,103 ಅಪಘಾತಗಳಾಗಿವೆ. ಇವುಗಳಲ್ಲಿ ಪೈಕಿ 239 ಮಂದಿ ಮೃತಪಟ್ಟಿದ್ದಾರೆ.
522 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 1,331 ಮಂದಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇನ್ನು 2021ರಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಅಪಘಾತಗಳಲ್ಲಿ ಗಾಯಗೊಂಡಿರುವುದಾಗಿ ಪೊಲೀಸ್ ಇಲಾಖೆ ಮಾಹಿತಿಯಿಂದ ತಿಳಿದುಬರುತ್ತದೆ.
ಅಭಿಯಾನ ಹೇಗೆ?; ಜಿಲ್ಲೆಯ ಯುವ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ರೂಪಿಸುತ್ತಿರುವ ಟ್ವಿಟರ್ ಅಭಿಯಾನ ಇದಾಗಿದೆ. ಇದರಲ್ಲಿ #WeNeedEmergencyHospitalInUttaraKannada ಮತ್ತು #NoHospitalNoVote ಈ ಎರಡು ಹ್ಯಾಷ್ಟ್ಯಾಗ್ಗಳನ್ನು ಬಳಸಿ 5 ಗಂಟೆಗೆ ಟ್ವೀಟ್ ಮಾಡಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
ಅಲ್ಲದೇ ಟ್ವೀಟ್ನಲ್ಲಿ @PMOIndia @narendramodi @AmitShah @mansukhmandviya @CmofKarnataka @Mla_sudhakar ಈ ಟ್ವಿಟರ್ ಹ್ಯಾಂಡಲ್ಗಳನ್ನು ಟ್ಯಾಗ್ ಮಾಡಲು ಆಗ್ರಹಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ತುರ್ತು ಚಿಕಿತ್ಸೆ ಆಸ್ಪತ್ರೆ ಏಕೆ ಅನಿವಾರ್ಯ ಎಂಬ ಕುರಿತು ನಿಮ್ಮ ಭಾವನೆ-ಅಭಿಪ್ರಾಯ ಮತ್ತು ಆಗ್ರಹವನ್ನು ಬರೆದು ತಪ್ಪದೇ ಈ ಮೇಲಿನ ಹ್ಯಾಷ್ಟ್ಯಾಗ್ ಬಳಸಿ, ಟ್ಯಾಗ್ ಮಾಡಿ ಟ್ವೀಟ್ ಮಾಡುವಂತೆ ಕೋರಲಾಗಿದೆ.











Click it and Unblock the Notifications