ಮುಂದುವರಿದ ಮಳೆ ಆರ್ಭಟ: ಮನೆಗಳಿಗೆ ನುಗ್ಗಿದ ನೀರು, ಉತ್ತರ ಕನ್ನಡದಲ್ಲಿ ಮೊದಲ ಸಾವು,
ಕಾರವಾರ, ಜುಲೈ 06: ಉತ್ತರ ಕನ್ನಡದ ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಗುರುವಾರವೂ ಮುಂದುವರಿದಿದೆ. ಪರಿಣಾಮ ಕರಾವಳಿಯ ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಲಾರಂಭಿಸಿದ್ದು, ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ಜಿಲ್ಲಾಡಳಿತ ಗುರುವಾರ ರಜೆ ಘೋಷಣೆ ಮಾಡಿದೆ.
ಕರಾವಳಿಯಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕಾರವಾರ, ಭಟ್ಕಳ, ಹೊನ್ನಾವರ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಕೆಲ ಭಾಗಗಳಲ್ಲಿ ನೀರು ಹರಿಯದೆ ರಸ್ತೆಗಳು ಜಲಾವೃತವಾಗಿದೆ.

ಭಟ್ಕಳದ ಶಂಸುದ್ದೀನ್ ಸರ್ಕಲ್, ರಂಗೀಕಟ್ಟೆ ಹೆದ್ದಾರಿ, ಕಾರವಾರ- ಇಳಕಲ್ ಹೆದ್ದಾರಿ, ಹಬ್ಬುವಾಡ, ಹೈಚರ್ಚ್ ಸೇರಿದಂತೆ ಅನೇಕ ರಸ್ತೆಗಳಲ್ಲಿ ನೀರು ನಿಂತಿದೆ. ಕಾರವಾರದ ಬಸ್ ಡಿಪೋಗೆ ಗುರುವಾರವೂ ಮತ್ತೆ ನೀರು ನುಗ್ಗಿದ್ದು ಬಸ್ಗಳ ಓಡಾಟಕ್ಕೆ ಅಡಚಣೆಯಾಗಿದೆ.
ವೃದ್ಧೆ ಮನೆಯಂಗಳದಲ್ಲಿ ಸಾವು
ಇನ್ನು ಮಳೆಗೆ ಉತ್ತರ ಕನ್ನಡದಲ್ಲಿ ಮೊದಲ ಸಾವಾಗಿದೆ. ಅರಗಾದಲ್ಲಿ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆ ತಾರಾಮತಿ (60) ಎಂಬುವವರು ಮೃತಪಟ್ಟಿದ್ದಾರೆ. ಮನೆಯಲ್ಲಿ ಒಂಟಿಯಾಗಿಯೇ ಇದ್ದ ಈಕೆ ರಾತ್ರಿ ಆರೋಗ್ಯವಾಗಿ ಪಕ್ಕದ ಮನೆಯವರೊಂದಿಗೆ ಮಾತನಾಡಿ ಮಲಗಿದ್ದರು. ಆದರೆ ಬೆಳಿಗ್ಗೆ ಮನೆಯ ಅಂಗಳದಲ್ಲಿ ನೀರು ತುಂಬಿಕೊಂಡ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಕಾಲು ಜಾರಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಡ್ಡ ಕುಸಿಯುವ ಭೀತಿಯಲ್ಲಿ ಪೋಸ್ಟ್ ಚೇಂಡಿಯಾ ಗ್ರಾಮಸ್ಥರು
ಇನ್ನು ಚೆಂಡೀಯಾ, ಅರಗಾ, ಈಡೂರು ಬಳಿ ನೌಕಾನೆಲೆ ಕಾಮಗಾರಿಯಿಂದಾಗಿ ಮಳೆ ನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನುಗ್ಗುವಂತಾಯಿತು. ಅಲ್ಲದೆ ಪೊಸ್ಟ್ ಚೇಂಡಿಯಾ ಬಳಿ ನೌಕಾನೆಲೆಯವರು ನಡೆಸಿ ರಸ್ತೆ ಕಾಮಗಾರಿ ಬಳಿ ಗುಡ್ಡ ಕುಸಿತವಾಗಿದೆ. ಬಳಿಕ ನೌಕಾನೆಲೆಯವರು ತೆರವುಗೊಳಿಸಿದ್ದು ಗುಡ್ಡದ ಕೇಳಭಾಗದಲ್ಲಿರುವ ಸುಮಾರು 7 ಮನೆಯವರಿಗೆ ಇದೀಗ ಮತ್ತೆ ಗುಡ್ಡ ಕುಸಿತದ ಭೀತಿ ಎದುರಾಗಿದೆ.
ಇದೇ ಆತಂಕದ ಕಾರಣಕ್ಕೆ ಸ್ಥಳೀಯ ಪಂಚಾಯಿತಿ ಪಿಡಿಓ ಕೂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಗ್ರಾಮಸ್ಥರಿಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದಾರೆ. ಇದಲ್ಲದೆ ರಾಷ್ಟ್ರೀಯ ಹೆದ್ದಾರಿ66ರ ಸುರಂಗ ಮಾರ್ಗದ ಬಳಿ ಸಣ್ಣ ಪ್ರಮಾಣದ ಗುಡ್ಡಕುಸಿತವಾಗಿದ್ದು ಪ್ರಯಾಣಿಕರು ನಿತ್ಯ ಆತಂಕದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಶಾಲೆಗಳಿಗೆ ರಜೆ ಘೋಷಣೆ
ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ಬೆನ್ನಲ್ಲೆ ಉತ್ತರ ಕನ್ನಡದಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗುರವಾರವೂ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಕರಾವಳಿ ತಾಲೂಕುಗಳಲ್ಲಿ ಭಾರೀ ಮಳೆಯಾಗುತ್ತಿರುವ ಈ ಅವಧಿಯಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರಕ್ಕೆ ಸೀಮಿತಗೊಳಿಸಿ ದ್ವಿತೀಯ ಪಿಯುವರೆಗಿನ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.
ಭಟ್ಕಳದಲ್ಲಿ ಅತಿ ಹೆಚ್ಚು ಮಳೆ
ಇನ್ನು ಜಿಲ್ಲೆ ಪೈಕಿ ಅತಿ ಹೆಚ್ಚು ಭಟ್ಕಳದ ಮುಂಡಳ್ಳಿಯಲ್ಲಿ 193 ಮಿ.ಮೀ, ಬೆಳಕೆ 187.5, ಕಾರವಾರದ ಶಿರವಾಡ 188 ಮಿ.ಮೀ, ಮಾವಿನಕುರ್ವಾ, ಮುಠ್ಠಳ್ಳಿಯಲ್ಲಿ ತಲಾ 180 ಮಿ.ಮೀ, ಹೊನ್ನಾವರ ಸಾಲ್ಕೋಡ್ 181.5 ಮಿ.ಮೀ. ಮಳೆಯಾಗಿದೆ. ಇನ್ನು ಹವಮಾನ ಇಲಾಖೆ ಮುಂಜಾನೆ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟೂ 907.1 ಮಿ.ಮೀ ಮಳೆಯಾಗಿದೆ. ಈ ಪೈಕಿ ಅಂಕೋಲಾ 71.1ಮಿ.ಮೀ, ಭಟ್ಕಳ 184 ಮಿ.ಮೀ, ಹೊನ್ನಾವರ 177.1ಮಿ.ಮೀ, ಕಾರವಾರ 177.6ಮಿ.ಮೀ, ಕುಮಟಾ 116.9ಮಿ.ಮೀ, ಮುಂಡಗೋಡ 18.2ಮಿ.ಮೀ, ಸಿದ್ದಾಪುರ 55.4 ಮಿಮೀ, ಶಿರಸಿ 23ಮೀ.ಮೀ, ಯಲ್ಲಾಪುರ 25.6 ಮಿ.ಮೀ, ಜೋಯಿಡಾ 19.4 ಮಿ.ಮೀ, ಹಳಿಯಾಳ 15.8ಮಿ.ಮೀ, ದಾಂಡೇಲಿ 21 ಮಿ.ಮೀ ಮಳೆಯಾಗಿದೆ.
ಜುಲೈ 8ರವರೆಗೂ ಭಾರೀ ಮಳೆ ಸಾಧ್ಯತೆ
ರಾಜ್ಯ ಕರಾವಳಿಯಲ್ಲಿ ಗುರುವಾರ ಎಲ್ಲೋ ಅಲರ್ಟ್, ಶುಕ್ರವಾರ ಆರೆಂಜ್ ಅಲರ್ಟ್ ಇರುವುದಾಗಿ ಹವಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಗಾಳಿಯು ಗಂಟೆಗೆ ೪೫ರಿಂದ 55ಕಿ.ಮೀ. ವೇಗದಲ್ಲಿ ಬೀಸಲಿದೆ. ಮಂಗಳೂರಿನಿಂದ ಕಾರವಾರದವರೆಗಿನ ಕಡಲಿನಲ್ಲಿ 3.5ಮೀ. ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಹೀಗಾಗಿ ಜುಲೈ ೮ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ.












Click it and Unblock the Notifications