ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಸಹಿತ ಭಾರೀ ಮಳೆ; ಆ.8ರವರೆಗೂ ರೆಡ್ ಅಲರ್ಟ್
ಕಾರವಾರ, ಆಗಸ್ಟ್ 05: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಕೂಡ ಮಳೆ ಮುಂದುವರಿದಿದೆ. ಮಳೆಯೊಂದಿಗೆ ಭಾರೀ ಗಾಳಿಯೂ ಬೀಸುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಕಾರವಾರದಲ್ಲಿ ಬೆಳಿಗ್ಗೆ ಬೀಸಿದ ಭಾರೀ ಗಾಳಿಗೆ ಹಲವೆಡೆ ವಿದ್ಯುತ್ ಕಂಬಗಳು ಹಾಗೂ ಮರಗಳು ಮುರಿದು ಬಿದ್ದಿವೆ.
ಆ.8ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಕೂಡ ಘೋಷಣೆ ಮಾಡಿದೆ. ಭಾರೀ ಅಲೆಗಳ ಅಬ್ಬರದಿಂದ ಕಡಲತೀರಗಳಲ್ಲಿ ಕೊರೆತ ಉಂಟಾಗಿದ್ದು, ದಡಗಳಲ್ಲಿ ಹಾಗೂ ಬಂದರುಗಳಲ್ಲಿ ನಿಲ್ಲಿಸಿದ್ದ ಬೋಟುಗಳು ಅಲೆಗಳ ಹೊಡೆತಕ್ಕೆ ಹಾನಿಯಾಗಿವೆ. ಸದ್ಯ ಮೀನುಗಾರಿಕೆಗೆ ತೆರಳದಂತೆ ಮೀನುಗಾರಿಕೆ ಇಲಾಖೆ ಸೂಚನೆ ನೀಡಿದೆ.
ಕೊಡಗಿನಲ್ಲಿ ಆಶ್ಲೇಷ ಅತಿರೇಕ: ಉಕ್ಕಿ ಹರಿಯುತ್ತಿರುವ ನದಿಗಳು
ಎಡೆಬಿಡದೆ ಸುರಿಯುತ್ತಿರುವ ಮಳೆ
ಬುಧವಾರ ರಾತ್ರಿ 11.30ರ ನಡುವೆ ಸಮುದ್ರ ತೀರದಲ್ಲಿ 3 ರಿಂದ 3.6 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದ್ದು ಸಮುದ್ರದ ಹತ್ತಿರ ವಾಸಿಸುವ ಜನರಿಗೆ ಜಾಗರೂಕರಾಗಿರಲು ತಿಳಿಸಲಾಗಿದೆ. ಎಡೆಬಿಡದೆ ಗಾಳಿ ಸಹಿತ ಮಳೆ ಮುಂದುವರಿದ ಕಾರಣ ಬಹುತೇಕ ನದಿಗಳು ತುಂಬಿ ಹರಿಯತೊಡಗಿವೆ. ಕದ್ರಾ ಜಲಾಶಯದಲ್ಲಿ ಕೂಡ 32 ಮೀಟರ್ ನೀರು ಭರ್ತಿಯಾಗಿದ್ದು ಗರಿಷ್ಠ ಮಟ್ಟ ತಲುಪಲು ಇನ್ನು 2.35 ಮೀಟರ್ ಬಾಕಿ ಉಳಿದಿದೆ.
ಕಳೆದ ವರ್ಷದಂತೆ ಈ ಬಾರಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತಿದ್ದು, ಕೆಲ ದಿನಗಳ ಕಾಲ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ನದಿ ಪಾತ್ರದ ಜನರ ಆತಂಕಕ್ಕೆ ಕಾರಣವಾಗಿದೆ.
ಗಂಜಿಕೇಂದ್ರ ತೆರೆಯಲು ಸೂಚನೆ
ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಕುಮಟಾ ತಾಲೂಕಿನಲ್ಲಿ ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ಹೆಗಡೆ, ಮಿರ್ಜಾನ್ ಹಾಗೂ ಐಗಳಕುರ್ವೆ ಗ್ರಾಮಗಳಲ್ಲಿ ಮನೆಗಳ ಸಮೀಪಕ್ಕೆ ನೀರು ಬರಲು ಆರಂಭಿಸಿದ್ದು, ಜನರು ಆತಂಕಗೊಂಡಿದ್ದಾರೆ. ಪ್ರಮುಖ ರಸ್ತೆಗಳ ಸಂಚಾರ ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಗಾಳಿ ಮಳೆಗೆ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಕೆಲವೆಡ ವಿದ್ಯುತ್ ಕಂಬಗಳು ಮುರಿದ್ದು ಬಿದ್ದ ಪರಿಣಾಮ ವಿದ್ಯುತ್ ಕಡಿತಕೊಂಡಿದೆ.
ರಕ್ಷಣಾ ಚಟುವಟಿಕೆಗಳು ಈಗಾಗಲೇ ನಡೆದಿದ್ದು, ತಾಲ್ಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗಂಜಿ ಕೇಂದ್ರ ತೆರೆಯಲು ಸೂಚನೆ ನೀಡಲಾಗಿದೆ. ಅವಶ್ಯಕತೆ ಇದ್ದಲ್ಲಿ ಜನರನ್ನು ಸ್ಥಳಾಂತರಿಸಲಾಗುವುದು ಎಂದು ತಹಶಿಲ್ದಾರ ಮೇಘರಾಜ್ ನಾಯ್ಕ ತಿಳಿಸಿದ್ದಾರೆ.
ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ 4 ದಿನ ಗಾಳಿ ಸಹಿತ ಭಾರಿ ಮಳೆ
ಮನೆಯ ಮೇಲೆ ಬಿದ್ದ ಮರ
ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಅಂಕೋಲಾ ತಾಲೂಕಿನ ವಿವಿಧೆಡೆ ಗಿಡ ಮರಗಳು ಧರೆಗುರುಳಿವೆ. ಬೆಳ್ಳಂಬೆಳಗ್ಗೆ ತಾಲೂಕಿನ ಬೊಬ್ರುವಾಡ ಗ್ರಾಮದಲ್ಲಿ ಪಾರ್ವತಿ ನಾಯ್ಕ ಎನ್ನುವವರ ಮನೆಯ ಮೇಲೆ ಮರ ಬಿದ್ದು ಸಾಕಷ್ಟು ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಪಿಡಿಒ ರವೀಂದ್ರಬಾಬು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಇನ್ನು ಕೆಲವು ಕಡೆ ಮರಗಳ ರೆಂಬೆಗಳು ರಸ್ತೆಯ ಮೇಲೆ ಅಡ್ಡಲಾಗಿ ಬಿದ್ದಿದ್ದು, ಅಧಿಕಾರಿಗಳೊಂದಿಗೆ ಸ್ಥಳೀಯರು ಸೇರಿ ಮರಗಳನ್ನು ತೆರವು ಮಾಡಲು ಸಹಾಯಮಾಡಿದರು.
ಅಂಕೋಲಾದ ಸುಂಕಸಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಈಗಾಗಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ರಸ್ತೆ ಸಂಚಾರ ಅಸ್ತವ್ಯಸ್ತ
ಭಾರೀ ಗಾಳಿ ಮಳೆಗೆ ಶಿರಸಿ- ಬನವಾಸಿ ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಗಣೇಶ ನಗರದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು, ಮನೆಯೊಳಗಿನ ಪಾತ್ರೆ- ಪಗಡೆ, ಎಲೆಕ್ಟ್ರಾನಿಕ್ ಸಾಮಗ್ರಿಗಳು ಜಖಂಗೊಂಡಿವೆ.
ಹೊನ್ನಾವರ ತಾಲೂಕಿನಲ್ಲಿ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ಮಳೆ ಬುಧವಾರ ಬೆಳಿಗ್ಗೆ 10 ಗಂಟೆಯ ಬಳಿಕ ಕೊಂಚ ಇಳಿಮುಖವಾಗಿದೆ. ಬುಧವಾರ ಬೆಳಗಿನ ಜಾವದವರೆಗೆ ಸುರಿದ ಭಾರೀ ಮಳೆಯಿಂದಾಗಿ ನೆರೆಯ ಭೀತಿ ಎದುರಾಗಿತ್ತು. ಗುಂಡಬಾಳ, ಸಾಲ್ಕೋಡ್ ಭಾಗದಲ್ಲಿ ತೋಟಕ್ಕೆ ಹಾಗೂ ಕೆಲ ಮನೆಗಳಿಗೆ ನೀರು ನುಗ್ಗಿದೆ.
ಯಲ್ಲಾಪುರ ತಾಲೂಕಿನ ಬೇಡ್ತಿ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಮನೆ ಹಾಗೂ ಜಮೀನುಗಳಿಗೆ ನೀರು ನುಗ್ಗಿದೆ.