ಕಂಪನಿಗಳಿಂದ ವಂಚನೆ: ಹಣ ಹೂಡಿಕೆ ಮಾಡಿದ ಜನ ಅತಂತ್ರ, ಸಂಕಷ್ಟದಲ್ಲಿ ಏಜೆಂಟ್ಗಳು
ಕಾರವಾರ, ಆಗಸ್ಟ್ 25: ಸರ್ಕಾರದ ನಿಯಮಾನುಸಾರ ನೋಂದಾಯಿಸಿಕೊಂಡ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ತಮ್ಮವರಿಂದಲೂ ಹಣ ಹೂಡಿಸಿದವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಂಪನಿಗಳು ನಿಯಮ ಪಾಲನೆ ಮಾಡದ ಕಾರಣಕ್ಕೆ ಕೇಂದ್ರ ಸರ್ಕಾರ ಕಂಪನಿಗಳನ್ನು ಬಂದ್ ಮಾಡಿಸಿ ಮಾಲಿಕರನ್ನು ಬಂಧಿಸಿದೆ. ಆದರೆ ಹೂಡಿಕೆದಾರರಿಗೆ ಬರಬೇಕಿರುವ ಹಣದ ಬಗ್ಗೆ ಈವರೆಗೂ ಯಾವುದೇ ಕ್ರಮವಹಿಸದೆ ಇರುವುದು ಇದೀಗ ಏಜೆಂಟರು ಹಾಗೂ ಹೂಡಿಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

ಪಲ್ಸ್ ಇಂಡಿಯಾ, ಸಮೃದ್ಧಿ ಜೀವನ್, ಅಗ್ರಿಗೋಲ್ಡ್, ಗರೀಮಾ ಸೇರಿದಂತೆ ಹತ್ತು ಹಲವು ಕಂಪನಿಗಳು ಜನರಿಗೆ ಹೆಚ್ಚಿನ ಹಣ ನೀಡುವ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ಹಣವನ್ನು ಕಟ್ಟಿಸಿಕೊಂಡಿದ್ದರು. ಸಾಕಷ್ಟು ವರ್ಷ ಇದೇ ರೀತಿ ಮುಂದುವರೆದ ಕಂಪನಿಗಳ ವಂಚನೆ ಗಮನಕ್ಕೆ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಹಂತ ಹಂತವಾಗಿ ಇಂತಹ ಕಂಪೆನಿಗಳಿಗೆ ಬೀಗ ಜಡಿದು ಮಾಲೀಕರನ್ನು ಬಂಧಿಸಿತ್ತು.
ಆದರೆ ಕಂಪೆನಿಗಳನ್ನು ನಂಬಿ ಹಣ ಹೂಡಿಕೆ ಮಾಡಿದ್ದ ಜನರು ಇಷ್ಟು ವರ್ಷಗಳ ಕಾಲ ಹಣ ವಾಪಸ್ ಸಿಗುವ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದು, ಎಷ್ಟೋ ಮಂದಿ ಏಜೆಂಟರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಇಷ್ಟಾದರೂ ಹೂಡಿಕೆದಾರರಿಗೆ ಮರಳಿ ಅವರ ಹಣ ಮಾತ್ರ ಸಿಗದಂತಾಗಿದೆ.
ಸದ್ಯ ಸಾರ್ವಜನಿಕ ಹೂಡಿಕೆಯ ವಿವಿಧ ಕಂಪನಿಗಳನ್ನು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಬಂದ್ ಮಾಡಿದ್ದರಿಂದ ಕೊಟ್ಯಂತರ ಗ್ರಾಹಕರು ಹಣ ಕಳೆದುಕೊಂಡಿದ್ದಾರೆ. ಟ್ರೇಡಿಂಗ್ ಸಂಬಂಧಿಸಿದ ವಿವಿಧ ಕಂಪನಿಗಳ ಏಜೆಂಟ ಆಗಿ ಗ್ರಾಹಕರ ಹಣವನ್ನು ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದೇವೆ. ಸುಮಾರು 10 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಅಂಥಹ ಕಂಪನಿಗಳನ್ನು ಬಂದ್ ಮಾಡಿದೆ. ಆದರೆ, ಆ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ಹಣ ಕೊಡಿಸಿಲ್ಲ ಎಂದು ವಂಚನೆ ಸಂತ್ರಸ್ತ ಠೇವಣಿದಾರರ ಪರಿವಾರ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ನೋವು ತೋಡಿಕೊಂಡರು.

ಟ್ರೇಡಿಂಗ್ ಸಂಬಂಧಿಸಿದ ಕಂಪನಿಗಳಿಗೆ ಜಿಲ್ಲೆಯಲ್ಲಿಯೇ ಸುಮಾರು ನಾಲ್ಕು ಲಕ್ಷ ಗ್ರಾಹಕರಿದ್ದಾರೆ. ಆರಂಭದಲ್ಲಿ ಉತ್ತಮವಾಗಿ ನಡೆಯುತ್ತಿದ್ದ ಕಾರಣಕ್ಕೆ ಕಂಪನಿಗಳ ಏಜೆಂಟರಾಗಿ ಗ್ರಾಹಕರಿಂದ ಹೂಡಿಕೆ ಮಾಡಿಸಿದ್ದೇವೆ. ಒಬ್ಬೋಬ್ಬ ಏಜೆಂಟರು 5, 10 ಲಕ್ಷ ರೂ. ವರೆಗೆ ಹೂಡಿಕೆ ಮಾಡಿಸಿದ್ದಾರೆ. ಆ ಕಂಪನಿಗಳು ಬಂದ್ ಆದ್ದರಿಂದ ಹಣ ಕೊಡಿಸುವಂತೆ ಗ್ರಾಹಕರು ದುಂಬಾಲು ಬೀಳುತ್ತಿದ್ದಾರೆ. ಇದರಿಂದ ಅನೇಕ ಏಜೆಂಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮನೆಯಲ್ಲಿ ಬಿಡುವಿನ ಸಮಯದಲ್ಲಿ ಕಂಪನಿಗಳ ಏಜೆಂಟರಾಗಿ ಕೆಲಸ ಮಾಡಿದ್ದೆವು. ಆರ್ಡಿ ರೂಪದಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಿ ಕಂಪನಿಗೆ ಕೊಟ್ಟಿದೆವು. ಈಗ ಜನ ಹಣ ಕೇಳುತ್ತಿದ್ದಾರೆ. ಲಕ್ಷಾಂತರ ಜನರು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಭಾರತದಾದ್ಯಂತ ಸುಮಾರು 60 ಕೋಟಿ ಗ್ರಾಹಕರಿದ್ದರು. ಅವರೆಲ್ಲ ಹಣ ಅತಂತ್ರವಾಗಿದೆ. ಸರ್ಕಾರ ಕೂಡಲೇ ಹಣ ಕೊಡಿಸಬೇಕು. ವಂಚನೆ ಮಾಡಿರುವ ಕಂಪನಿಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಆಸ್ತಿ ಇದೆ. ಆದರೂ, ಗ್ರಾಹಕರಿಗೆ ಹಣ ಕೊಡಿಸುವ ಕ್ರಮ ಆಗಿಲ್ಲ. ರಾಜ್ಯ ಸರಕಾರ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಎಂದು ಸಂತ್ರಸ್ತ ಏಜೆಂಟರು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ' ಈ ಬಗ್ಗೆ ರಾಜ್ಯ ಸರಕಾರಕ್ಕೆ ಈ ಮನವಿ ಕಳಿಸಲಾಗುವುದು. ಸರ್ಕಾರ ಸೂಚಿಸಿದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಇನ್ನು ಮುಂದೆ ಇಂಥ ಆನ್ಲೈನ್ ಕಂಪನಿಗಳ ವ್ಯವಹಾರದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ' ಸೂಚಿಸಿದರು.
ಒಟ್ಟಾರೆ ಹಣ ಉಳಿತಾಯದ ಹೆಸರಿನಲ್ಲಿ ವಂಚನೆ ಮಾಡಿದ ಕಂಪೆನಿಗಳೇನೋ ಬಂದ್ ಆಗಿವೆ. ಆದರೆ ವಂಚನೆಗೊಳಗಾದ ಜನರಿಗೆ ಇದುವರೆಗೂ ಹಣ ಸಿಕ್ಕಿಲ್ಲವಾಗಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕು.












Click it and Unblock the Notifications