'ಬಸ್' ಹತ್ತಿದ ವಿ.ಎಸ್.ಪಾಟೀಲ; ಶಿವರಾಮ ಹೆಬ್ಬಾರ್ ಹಾದಿ ಇನ್ನು ಸುಗಮ
ಕಾರವಾರ, ಅಕ್ಟೋಬರ್ 10: ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ, ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಅನರ್ಹರಾಗಿ, ಬಿಜೆಪಿಯಿಂದ ಆಯ್ಕೆ ಬಯಸಿರುವ ಶಿವರಾಮ ಹೆಬ್ಬಾರ ಅವರ ಹಾದಿ ಈಗ ಸುಗಮವಾದಂತಾಗಿದೆ.
ವಿ.ಎಸ್.ಪಾಟೀಲ ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಶಿವರಾಮ ಹೆಬ್ಬಾರ ಅವರ ಎದುರಾಳಿಯಾಗಿದ್ದರು. 2008ರಲ್ಲಿ ಶಿವರಾಮ ಹೆಬ್ಬಾರ ಅವರನ್ನು ಸೋಲಿಸಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2013 ಹಾಗೂ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಹೆಬ್ಬಾರ ವಿರುದ್ಧವೇ ಸೋಲು ಕಂಡಿದ್ದರು.
ಈಗ ಸ್ವತಃ ಶಿವರಾಮ ಹೆಬ್ಬಾರ ಬಿಜೆಪಿಗೆ ಬರಲು ಸಿದ್ಧರಾಗಿರುವುದರಿಂದ ವಿ.ಎಸ್.ಪಾಟೀಲ ಅವರ ನಡೆ ಕುತೂಹಲಕ್ಕೆ ಕಾರಣವಾಗಿತ್ತು. ಅವರು ಕಾಂಗ್ರೆಸ್ಗೆ ಹೋಗುತ್ತಾರೆಂಬ ಊಹಾಪೋಹ ಹಬ್ಬಿರುವಾಗಲೇ ಇತ್ತೀಚಿಗೆ ಹೆಬ್ಬಾರ ಅವರ ಜೊತೆ ಕಾಣಿಸಿಕೊಂಡು ಊಹಾಪೋಹಳಿಗೆ ತೆರೆ ಎಳೆದಿದ್ದರು. 'ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣೀಕರ್ತರಾದ ಶಿವರಾಮ ಹೆಬ್ಬಾರ ಅವರಿಗೆ ಬೆಂಬಲ ನೀಡುತ್ತೇನೆ' ಎಂದು ಕೂಡ ಹೇಳಿಕೆ ನೀಡಿದ್ದರು.

ವಿ.ಎಸ್.ಪಾಟೀಲ ಏನಂದ್ರು?: 'ನಾನು ಪಕ್ಷ ಬದಲಾವಣೆ ಮಾಡುತ್ತೇನೆ ಎಂಬ ಬಗ್ಗೆ ಬಹಳಷ್ಟು ವದಂತಿ ಹಬ್ಬಿತ್ತು. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಹಲವು ಬಾರಿ ಹೇಳಿದ್ದೆ. ಈಗ ಪಕ್ಷ ನನ್ನನ್ನು ಗುರುತಿಸಿ ಎನ್ ಡಬ್ಲ್ಯುಕೆಆರ್ ಟಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ' ಎಂದು ಹೇಳಿದ್ದಾರೆ.

'ಈ ಸ್ಥಾನವನ್ನು ಕೊಡದಿದ್ದರೂ ನಾನು ಪಕ್ಷದಲ್ಲಿಯೇ ಇರುತ್ತಿದ್ದೆ. 17 ಜನ ಶಾಸಕರು ರಾಜೀನಾಮೆ ನೀಡಿದ್ದರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅನರ್ಹರಿಗೆ ಸಹಕಾರ ನೀಡುವಂತೆ ಹೈಕಮಾಂಡ್ ಸೂಚಿಸಿತ್ತು. ಅದರಂತೆ ಶಿವರಾಮ ಹೆಬ್ಬಾರ ಅವರನ್ನು ನಾವು ಬೆಂಬಲಿಸಿದ್ದೆವು. ಕ್ಷೇತ್ರದಲ್ಲಿ ಅವರೇ ಅಭ್ಯರ್ಥಿಯಾದರೆ ನಮ್ಮದೇನೂ ಅಭ್ಯಂತರವಿಲ್ಲ" ಎಂದರು. ಎಲ್ಲರಿಗೂ ಅಧಿಕಾರ ಬೇಕೆಂಬುದು ಸಹಜ. ಅಧಿಕಾರಕ್ಕೆ ಆಸೆ ಪಡದೇ ಪಕ್ಷದ ಅಭಿಮಾನದಿಂದ ಒಂದೇ ಪಕ್ಷದಲ್ಲಿದ್ದರೆ ಅಧಿಕಾರ ತಾನಾಗಿಯೇ ಬರುತ್ತದೆ. ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ' ಎಂದಿದ್ದಾರೆ.












Click it and Unblock the Notifications