"ಅವ್ನು ಸತ್ರೇನು, ಬದುಕಿದ್ರೇನು, ನನಗ್ಯಾಕೆ ಬೇಕು?": ಸಂಸದ ಹೆಗಡೆ ಕುರಿತು ನಾಲಿಗೆ ಹರಿಬಿಟ್ಟ ಮಾಜಿ ಸಚಿವ
ಕಾರವಾರ, ಏಪ್ರಿಲ್ 5: ಅವ್ನು ಸತ್ರೇನು, ಬದುಕಿದ್ರೇನು... ಏನೂ ಲೆಕ್ಕಕ್ಕಿಲ್ಲ. ಹೇಗೋ ಅವ್ನು ಐದು ವರ್ಷ ನಮ್ಮ ದೃಷ್ಟಿಯಲ್ಲೇ ಇರಲ್ಲ. ಹೀಗಾಗಿ ಅವ್ನ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆಯವರ ಕುರಿತು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನಾಲಿಗೆ ಹರಿಬಿಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಕಾರವಾರದಲ್ಲಿ ಮಾತನಾಡಿರುವ ಅವರು, ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರಿ. ಆದರೆ ಅಂದು ಹಿಂದುತ್ವದ ಅಲೆ ಇದ್ದಿದ್ದರಿಂದ ಕಷ್ಟವಾಯಿತು. ಇದೀಗ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಇತ್ತೀಚೆಗೆ ಆರೋಗ್ಯ ಸರಿ ಇರಲಿಲ್ಲ. ಶಸ್ತ್ರಚಿಕಿತ್ಸೆ ಆಗಿದೆ, ಗಂಭೀರ ಇದ್ದಾರೆ.
ಮುಂದಿನ ರಾಜಕೀಯ ಜೀವನ ಕಷ್ಟ ಇದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಗೆ ಪ್ರಯತ್ನಿಸಿ ಎಂದು ಕೆಲವರು ನನಗೆ ಸಲಹೆ ನೀಡಿದ್ದರು. ಆದರೆ ಇತ್ತೀಚೆಗೆ ಅವರು ಜಾತ್ರೆಗೆ ಹೋಗಿದ್ದಾರೆ, ಗಟ್ಟಿಯೇ ಇದ್ದಾರೆ. ಹಾಗಾಗಿ ಈ ಸಲಹೆ ಕಷ್ಟ ಎಂದು ವ್ಯಂಗ್ಯ ಮಾಡಿದರು.
ಹೇಗೋ ಆತ ಐದು ವರ್ಷ ಜನರಿಗೆ ಮುಖ ಕಾಣಿಸಲ್ಲ. ಬೋನ್ ಕ್ಯಾನ್ಸರ್ ಆಗಿದೆ ಎಂದು ಕೆಲವರು ಹೇಳುತ್ತಿದ್ದರು. ಎಲ್ಲಾದರೂ ಹಿಂದೂ- ಮುಸ್ಲಿಂ ಗಲಾಟೆ ಆಗಬೇಕು, ಯಾರಾದರೂ ಹಿಂದೂ ಸಾಯ್ಬೇಕು, ಯಾರಾದರೂ ಮೀನುಗಾರ ಯುವಕ ಸಾಯ್ಬೇಕು, ಅಂಥ ಪ್ರಸಂಗದಲ್ಲಿ ಮಾತ್ರ ಅವನನ್ನು ಕಾಣಬಹುದು. ಹಾಗಾಗಿ ಅವ್ನು ಸತ್ರೇನು, ಬದುಕಿದ್ರೇನು. ಅವನ ಆರೋಗ್ಯ ಹೇಗಿದ್ಯೋ ಏನೋ, ನನಗ್ಯಾಕೆ ಬೇಕು? ಜನ ಹೇಳಿದ್ದನ್ನು ಹೇಳಿದ್ದೀನಿ ಎಂದು ಏಕವಚನದಲ್ಲೇ ಹೀಗೆಳೆದರು.
ಅವರ ರಾಜಕೀಯ ನಿವೃತ್ತಿ ಹೇಳಿಕೆ ಸಿಂಪತಿ ಗಿಟ್ಟಿಸಿಕೊಳ್ಳುವುದು. ಅವರ ನಿವೃತ್ತಿ ಸಾಧ್ಯವೇ ಇಲ್ಲ. ಮುಂದೆಯೂ ಅವರೇ ಚುನಾವಣೆಗೆ ಸ್ಪರ್ಧಿಸುತ್ತಾರೆ. ಜನರ ಬೆಂಬಲ ಇದ್ದರೆ ಪುನಃ ಗೆಲ್ಲುತ್ತಾರೆ ಎಂದು ಆನಂದ್ ಅಸ್ನೋಟಿಕರ್ ಹೇಳಿದರು.
ಅವರು ಚುನಾವಣೆಗೆ ನಿಲ್ಲುವ ಮೊದಲು ಅಂಥದ್ದೇನಾದರೂ ಗೆಲ್ಲುವ ಸನ್ನಿವೇಶ ಬರುತ್ತದೆ. ಮೋದಿ ಅಥವಾ ಇನ್ಯಾವುದಾದರೂ ಅನುಕಂಪದ ಅಲೆ ಇರುತ್ತದೆ. ಮೊದಲ ಚುನಾವಣೆಗೆ ಸ್ಪರ್ಧಿಸಿದಾಗಲೂ ಚಿತ್ತರಂಜನ್ ಅವರ ಹತ್ಯೆ ಆಯಿತು. ಅದರ ನಂತರ ಇನ್ನೊಂದು, ಮತ್ತೊಂದು ಅಲೆ ಬಂತು. ಯಾವತ್ತೂ ಒಳ್ಳೆ ಸನ್ನಿವೇಶನೇ ಕ್ರಿಯೆಟ್ ಆಗುತ್ತದೆ ಎಂದು ಅವರು ಹೇಳಿದರು.
Recommended Video
ಕರಾವಳಿಯಲ್ಲಿ ಹಿಂದುತ್ವ ನಡೆಯುತ್ತದೆ. ಹಿಂದುತ್ವದ ಶಕ್ತಿ ಬಹಳ ದೊಡ್ಡದಿದೆ. ಇದನ್ನು ನಾನೂ ಒಪ್ಪಿದ್ದೇನೆ. ಇಂದು ಕೋಮಿನಲ್ಲೇ ರಾಜಕೀಯ ನಡೆಯುವುದು. ಇಲ್ಲಿ ಬಾಕಿ ಅಭಿವೃದ್ಧಿಗಳ ಬಗ್ಗೆ ಮಾತೇ ಇಲ್ಲ ಎಂದರು.