ಕಾರವಾರ: 2 ತಿಂಗಳು ಆಳ ಸಮುದ್ರ ಮೀನುಗಾರಿಕೆ ಸಂಪೂರ್ಣ ನಿಷೇಧ, ಊರು ಸೇರಿದ ಕಾರ್ಮಿಕರು
ಕಾರವಾರ, ಮೇ 30: ದೇಶದ ಕರಾವಳಿಯಾದ್ಯಂತ ನಾಳೆಯಿಂದ ಎರಡು ತಿಂಗಳು ಆಳ ಸಮುದ್ರ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಬೀಳಲಿದೆ. ಕೊರೊನಾ ಹಾಗೂ ಅದಕ್ಕೂ ಪೂರ್ವದಲ್ಲಿ ನಾನಾ ಕಾರಣಗಳಿಂದ ಕುಂಠಿತಗೊಂಡಿದ್ದ ಮೀನುಗಾರಿಕೆ ಕಳೆದ ಮೂರು ವರ್ಷಗಳಿಂದ ಚೇತರಿಕೆ ಹಾದಿ ತುಳಿದಿದ್ದು, ಈ ಬಾರಿಯೂ ಕಳೆದ ವರ್ಷಕ್ಕಿಂತ 13,773 ಮೆಟ್ರಿಕ್ ಟನ್ ಹೆಚ್ಚು ಮೀನು ಉತ್ಪಾದನೆಯಾಗಿದೆ.
ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಮೇ. 31 ರಿಂದ ಜುಲೈ 31ರವರೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ಕಳೆದೆರಡು ತಿಂಗಳಿಂದ ಸರಿಯಾಗಿ ಮೀನುಗಾರಿಕೆಯಾಗದ ಕಾರಣ ಪರ್ಶಿಯನ್ ಬೋಟ್ಗಳು ವಾರದ ಮುಂಚೆ ಲಂಗರು ಹಾಕಿದ್ದು, ಇದೀಗ ಟ್ರಾಲರ್ ಬೋಟ್ಗಳು ಕೂಡ ದಡಕ್ಕೆ ಆಗಮಿಸಿ ಲಂಗರು ಹಾಕತೊಡಗಿವೆ.

ಮೂರು ವರ್ಷದಿಂದ ಮೀನುಗಾರಿಕೆಯಲ್ಲಿ ಏರಿಕೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,139 ಪರ್ಸಿಯನ್, 3952 ಟ್ರಾಲರ್(ಫಿಶಿಂಗ್) ಬೋಟ್ಗಳಿದೆ. ಮೀನುಗಾರಿಕೆ ಆರಂಭದ ದಿನಗಳಲ್ಲಿ ಬಹುತೇಕ ಎಲ್ಲ ತರಹದ ಬೋಟ್ಗಳಿಗೂ ಉತ್ತಮ ಮೀನುಗಾರಿಕೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 1,31,039 ಮೆಟ್ರಿಕ್ ಟನ್ ಮೀನು ಉತ್ಪಾದನೆ ಮಾಡಲಾಗಿದೆ. 2021-22ರಲ್ಲಿ 1,17,266 ಮೆಟ್ರಿಕ್ ಟನ್ ಮೀನು ಉತ್ಪಾದನೆ ಮಾಡಲಾಗಿತ್ತಾದರೂ, ಪ್ರಸಕ್ತ ಸಾಲಿನಲ್ಲಿ 13,773 ಮೆಟ್ರಿಕ್ ಟನ್ ಹೆಚ್ಚು ಮೀನು ಉತ್ಪಾದನೆಯಾಗಿದೆ. ಇನ್ನು 2020-21 ರಲ್ಲಿ 1,02,800 ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗಿ 14,446 ಮೆಟ್ರಿಕ್ ಟನ್ ಹೆಚ್ಚು ಮೀನು ಉತ್ಪಾದನೆಯಾಗಿತ್ತು.
ಆರಂಭದಲ್ಲಿ ಮಾತ್ರ ಉತ್ತಮ ಮೀನುಗಾರಿಕೆ
ಈ ಬಾರಿ ಆರಂಭದಲ್ಲಿ ಮೀನುಗಾರಿಕೆ ಉತ್ತಮ ರಿತಿಯಲ್ಲಿ ಆಗಿದೆ. ಅದರಲ್ಲಿಯೂ ಪರ್ಶಿಯನ್ ಬೋಟ್ನವರು ಉತ್ತಮ ಮೀನುಗಾರಿಕೆ ಮಾಡಿ ಸಂಪಾದನೆ ಮಾಡಿದ್ದಾರೆ. ಆದರೆ ಫಿಶಿಂಗ್ ಬೋಟನವರಿಗೆ ಆರಂಭದಲ್ಲಿ ಮೀನುಗಾರಿಕೆ ಆಗಿದೆಯಾದರೂ ನವೆಂಬರ್ ಬಳಿಕ ಸರಿಯಾಗಿ ಮೀನುಗಾರಿಕೆಯಾಗಿಲ್ಲ. ಮೀನುಗಾರಿಕೆಗೆ ತೆರಳಿದರು ಮೀನು ಸಿಗದೆ ವಾಪಸ್ ತೆರಳಿದ್ದರಿಂದ ನಷ್ಟವಾಗಿದೆ. ಆದರೆ ಲಾಭಗಳಿಸಿದ ಒಂದಿಷ್ಟು ಬೋಟ್ ಮಾಲಿಕರು ಈ ಬಾರಿ ಇರುವ ಸಾಲ ಸ್ವಲ್ಪ ಮಟ್ಟಿಗೆ ತೀರಿಸಿಕೊಂಡ ಕಾರಣ ಮತ್ತೆ ಸಾಲ ಪಡೆಯಲು ಸಹಕಾರಿಯಾಗಿದೆ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್.

ಉತ್ಪಾದನೆ ಹೆಚ್ಚಾದರೂ ಸಿಗದ ಲಾಭ
ಇನ್ನು ಕಳೆದ ಒಂದೆರಡು ವರ್ಷದಿಂದ ಮೀನುಗಾರಿಕೆ ಹೆಚ್ಚಾಗುತ್ತಿದ್ದರೂ ಕೂಡ ಖರ್ಚು ಕೂಡ ಹೆಚ್ಚಾಗುತ್ತಿದೆ. ಈ ಹಿಂದೆ ಡಿಸೇಲ್ ಕಡಿಮೆ ದರದಲ್ಲಿ ಸಿಗುತ್ತಿತ್ತು. ಜೊತೆಗೆ ಸಬ್ಸಿಡಿ ಕೂಡ ನೀಡುತ್ತಿದ್ದರು. ಆದರೆ ಇದೀಗ ಅದು ಯಾವುದು ಇಲ್ಲ. ನೋಡುವುದಕ್ಕೆ ಕೇವಲ ಮೀನುಗಾರಿಕೆ ಉತ್ತಮವಾದ ರೀತಿ ಕಾಣಿಸುತ್ತದೆ. ಬಲೆ, ಬೋಟ್ ಸಾಮಗ್ರಿ ಸೇರಿದಂತೆ ಪ್ರತಿ ವಸ್ತುಗಳ ಬೆಲೆ ಕೊರೊನಾ ಬಳಿಕ ಡಬಲ್ ಆಗಿರುವ ಕಾರಣ ಎಷ್ಟೇ ಹೆಚ್ಚು ಮೀನು ಉತ್ಪಾದನೆ ಮಾಡಿದರು ಕೂಡ ನಮಗೆ ಸಿಗುವಷ್ಟು ಲಾಭ ಮಾತ್ರ ಸಿಗುತ್ತಿದೆ ಎಂದು ಮೀನುಗಾರರಾದ ಉಮೇಶ ದುರ್ಗೇಕರ್ ಹೇಳಿದ್ದಾರೆ.
ಲಂಗರು ಹಾಕಿದ ಬೋಟ್ಗಳು
ಪ್ರತಿ ವರ್ಷ ಜೂನ್-ಜುಲೈ ತಿಂಗಳ ಮಳೆಗಾಲದ ಪ್ರಾರಂಭದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ಕಾರಣ ಮೀನುಗಾರಿಕೆ ಸ್ಥಗಿತಗೊಳಿಸಲಾಗುತ್ತದೆ. ಕರಾವಳಿಯಾದ್ಯಂತ ಆಳ ಸಮುದ್ರಕ್ಕೆ ತೆರಳುವ ಯಾತ್ರಿಕೃತ ಬೋಟ್ಗಳು ಈಗಾಗಲೇ ಲಂಗರು ಹಾಕಿದ್ದು, ಫಿಶಿಂಗ್ ಬೀಟ್ಗಳು ಕಳೆದೊಂದು ವಾರದಿಂದ ಲಂಗರು ಹಾಕತೊಡಗಿವೆ. ಇನ್ನು ಎರಡು ದಿನ ಕಾಲಾವಕಾಶ ಇರುವ ಕಾರಣ ಒಂದೆರಡು ಫಿಶಿಂಗ್ ಬೋಟ್ಗಳು ಮೀನುಗಾರಿಕೆಗೆ ತೆರಳಿದ್ದು ನಾಳೆ ವೇಳೆಗೆ ಲಂಗರು ಹಾಕಲಿವೆ. ಅಲ್ಲದೆ ಎರಡು ತಿಂಗಳುಗಳ ಕಾಲ ಬಿಡುವ ಇರುವ ಹಿನ್ನಲೆಯಲ್ಲಿ ಕೆಲವರು ಬಲೆಗಳನ್ನು ಸ್ವಚ್ಛಗೊಳಿಸಿ ಜೋಪಾನ ಮಾಡುತ್ತಿದ್ದರೆ ಇನ್ನು ಕೆಲವರು ಬೋಟ್ ರಿಪೇರಿಗೆ ಮುಂದಾಗಿದ್ದಾರೆ.

ಊರು ಸೇರಿದ ಕಾರ್ಮಿಕರು
ಜಿಲ್ಲೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರ ಪೈಕಿ ಬಹುತೇಕರು ಓರಿಸ್ಸಾ, ಬಿಹಾರ್, ಚತ್ತಿಸಗಡ, ಜಾರಖಂಡ್ ಸೇರಿದಂತೆ ಹೊರ ರಾಜ್ಯದ ಕಾರ್ಮಿಕರಾಗಿದ್ದಾರೆ. ಎರಡು ತಿಂಗಳು ಮೀನುಗಾರಿಕೆ ನಿಷೇಧ ಇರುವ ಹಿನ್ನಲೆಯಲ್ಲಿ ವಾರದ ಹಿಂದೆಯೇ ಬಹುತೇಕರು ಊರು ಸೇರಿಕೊಂಡಿದ್ದಾರೆ. ಅಲ್ಲದೆ ಮೀನುಗಾರಿಕೆ ಆರಂಭವಾಗುವ ಆಗಸ್ಟ್ ವೇಳೆಗೆ ಎಲ್ಲ ಕಾರ್ಮಿಕರು ಮರಳಲಿದ್ದಾರೆ.












Click it and Unblock the Notifications