ಕಾರವಾರ: ಆನ್ ಇಟ್ಟಿದ್ದ ಮೊಬೈಲ್ ಚಾರ್ಜರ್ ಕಡಿದು 8 ತಿಂಗಳ ಮಗು ದಾರುಣ ಸಾವು
ಕಾರವಾರ, ಆಗಸ್ಟ್ 02: ಮನೆಯಲ್ಲಿ ಚಿಕ್ಕಮಕ್ಕಳಿರುವ ಪೋಷಕರು ಸ್ಪಲ್ಪ ಎಚ್ಚರ ತಪ್ಪಿದರೂ ಎಂತಹ ಅವಘಡ ಸಂಭವಿಸಬಹುದು, ಕೆಲವೊಮ್ಮೆ ಪ್ರಾಣವೇ ಹೋಗಬಹುದು ಎನ್ನುವುದಕ್ಕೆ ಉತ್ತರ ಕನ್ನಡದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸ್ವೀಚ್ ಬೋರ್ಡ್ಗೆ ಹಾಕಿದ್ದ ಮೊಬೈಲ್ ಚಾರ್ಜರ್ ವೈಯರ್ ಮಗು ಬಾಯಿಗೆ ಹಾಕಿದ ಪರಿಣಾಮ ವಿದ್ಯುತ್ ಪ್ರಹರಿಸಿ 8 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಸಿದ್ದರದಲ್ಲಿ ಬುಧವಾರ ನಡೆದಿದೆ.
ಸಿದ್ದರ ಗ್ರಾಮದ ಸಂತೋಷ ಕಲ್ಗುಟಕರ್, ಸಂಜನಾ ಕಲ್ಗುಟಕರ್ ದಂಪತಿಯ ಏಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಕಲ್ಲುಟಕರ್ ಮೃತಪಟ್ಟಿದೆ. ಇಂದು(ಆಗಸ್ಟ್ 02) ಬೆಳಗ್ಗೆ ಮನೆಯಲ್ಲಿ ಸ್ವಿಚ್ ಬೋರ್ಡ್ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಆಫ್ ಮಾಡಿರಲಿಲ್ಲ. ಆದರೆ ಇದೇ ಸಮಯದಲ್ಲಿ ಮಗು ಆನ್ ಇದ್ದ ಚಾರ್ಜರ್ ವೈಯರ್ ಅನ್ನು ಬಾಯಿಗೆ ಹಾಕಿದ್ದು, ಈ ವೇಳೆ ಏಕಾಏಕಿ ವಿದ್ಯುತ್ ಪ್ರಹರಿಸಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ವಿದ್ಯುತ್ ಅಪಘಡ ಸಂಭವಿಸುತ್ತಿದ್ದಂತೆ ಕೂಡಲೇ ಮಗುವನ್ನು ಉತ್ತರ ಕನ್ನಡ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ದುರಾದೃಷ್ಟವಶಾತ್ ಅದಾಗಲೇ ಎಂಟು ತಿಂಗಳ ಕಂದಮ್ಮ ಕೊನೆಯುಸಿರೆಳೆದಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.
ಇನ್ನು ಹೆಸ್ಕಾಂನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಮಗುವಿನ ತಂದೆ ಸಂತೋಷ ಕಲ್ಗುಟಕರ್ ವಿಷಯ ಕೇಳಿ ಅಸ್ವಸ್ತರಾಗಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಸಿದ್ದರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತ ಮಗುವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಇನ್ನು ಸಾನಿಧ್ಯ ಕಲ್ಲುಟಕರ್, ಸಂತೋಷ್ ಕಲ್ಗುಟಕರ್ ದಂಪತಿಗೆ ಮೂರನೇ ಮಗುವಾಗಿತ್ತು. ಇನ್ನಿಬ್ಬರು ಹೆಣ್ಣುಮಕ್ಕಳ ಪೈಕಿ ಓರ್ವಳ ಹುಟ್ಟುಹಬ್ಬ ಇಂದು ಇದ್ದ ಕಾರಣ, ಮಗುವಿನ ತಾಯಿ ಹಾಗೂ ಕುಟುಂಬಸ್ಥರು ಹುಟ್ಟುಹಬ್ಬದ ಆಚರಣೆ ಸಂಭ್ರಮದಲ್ಲಿದ್ದರು. ಈ ಮಧ್ಯದಲ್ಲಿ ಈ ಅವಘಡ ಸಂಭವಿಸಿದ್ದು, ಸಂಭ್ರಮದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಘಟನೆ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications