ವರ್ಗಾವಣೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಆರೋಪ; ಶಾಸಕಿ- ಸಚಿವರ ನಡುವೆ ಮುಸುಕಿನ ಗುದ್ದಾಟ?
ಕಾರವಾರ, ಅಕ್ಟೋಬರ್ 12: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದ್ದು, ಕೆಲವರ ವರ್ಗಾವಣೆ ವಿಚಾರದಲ್ಲಿ ಇಬ್ಬರ ನಡುವೆ ಮುಸುಕಿನ ಗುದ್ದಾಟವೇ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಯಲ್ಲಾಪುರ ಶಾಸಕರಾಗಿದ್ದ ಶಿವರಾಮ ಹೆಬ್ಬಾರ್ ಪ್ರಮುಖ ಪಾತ್ರವಹಿಸಿದ್ದರು. ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಹೆಬ್ಬಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನಕ್ಕೆ ಕಾರಣವಾಗಿ, ಬಿಜೆಪಿ ಸರ್ಕಾರ ರಚನೆಯಾದ ನಂತರ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆಲುವು ಪಡೆದಿದ್ದರು. ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವರಾಮ ಹೆಬ್ಬಾರ್ ಅವರಿಗೆ ಸಚಿವ ಸ್ಥಾನವನ್ನು ನೀಡಿದ್ದರು.

ಹೆಬ್ಬಾರ್ ಹಾಗೂ ರೂಪಾಲಿ ನಡುವೆ ಮುಸುಕಿನ ಗುದ್ದಾಟ
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಶಿಕಲಾ ಜೊಲ್ಲೆಯವರಿದ್ದ ಸಂದರ್ಭದಲ್ಲಿ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ರೂಪಾಲಿ ಹೇಳುತ್ತಿದ್ದ ಕೆಲಸಕ್ಕೆ ಜೊಲ್ಲೆ ಸದಾ ಸಮ್ಮತಿ ಸೂಚಿಸುತ್ತಿದ್ದರು. ಆದರೆ, ಶಿವರಾಮ ಹೆಬ್ಬಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಘೋಷಣೆಯಾದ ನಂತರ ಹೆಬ್ಬಾರ್ ಹಾಗೂ ರೂಪಾಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪ್ರಮುಖ ಕಾರಣ ವರ್ಗಾವಣೆ!
ಸಾಮಾನ್ಯವಾಗಿ ಜಿಲ್ಲಾ ಮಟ್ಟದ ಹುದ್ದೆಗಳ ವರ್ಗಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದವರಿಗೆ ಆದ್ಯತೆ ಹೆಚ್ಚಾಗಿ ನೀಡಲಾಗುತ್ತದೆ. ಇದಲ್ಲದೇ ಜಿಲ್ಲಾ ಕೇಂದ್ರದ ಶಾಸಕರು ಮಾಡುವ ಮನವಿಗೂ ಕೆಲ ವೇಳೆ ಸ್ಪಂದಿಸಿ ವರ್ಗಾವಣೆಗೆ ಆದ್ಯತೆ ನೀಡಲಾಗುತ್ತದೆ. ಇನ್ನು ಸಚಿವರು ವರ್ಗಾವಣೆ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದ ಶಾಸಕರ ಅಭಿಪ್ರಾಯವನ್ನು ಪಡೆಯುತ್ತಾರೆ. ಆದರೆ, ಇದೇ ವಿಚಾರದಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಚಿವ ಹೆಬ್ಬಾರ್ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎನ್ನಲಾಗಿದೆ.

ನಿರಂತರವಾಗಿರುವ ಭಿನ್ನಾಭಿಪ್ರಾಯ
ಹಲವು ವರ್ಗಾವಣೆ ಪ್ರಕರಣದಲ್ಲಿ ಶಾಸಕಿ ರೂಪಾಲಿ ನಾಯ್ಕ ಒಬ್ಬರ ಹೆಸರನ್ನು ನೀಡಿದರೆ, ಅದಕ್ಕೆ ಪ್ರತಿಯಾಗಿ ಹೆಬ್ಬಾರ್ ಬೇರೆಯವರ ಹೆಸರನ್ನು ನೀಡುತ್ತಿದ್ದು, ಇದು ಇಬ್ಬರ ನಡುವೆ ಜಿದ್ದಿನ ವಿಚಾರವಾಗಿ ತಿರುಗಿದ ಘಟನೆ ನಡೆದಿದೆ. ಇಬ್ಬರೂ ಪಟ್ಟು ಹಿಡಿದು ತಮಗೆ ಬೇಕಾದವರನ್ನು ವರ್ಗಾವಣೆ ಮಾಡಿಸಿಕೊಂಡು ಬರುತ್ತಿದ್ದು, ಕೆಲ ಪ್ರಕರಣದಲ್ಲಿ ಶಾಸಕಿ ರೂಪಾಲಿ ನಾಯ್ಕ ಸಿಎಂವರೆಗೆ ವಿಚಾರವನ್ನು ತೆಗೆದುಕೊಂಡು ಹೋಗಿ ತಮಗೆ ಬೇಕಾದವರನ್ನು ವರ್ಗಾವಣೆ ಮಾಡಿಸಿಕೊಂಡು ಬಂದಿರುವ ಘಟನೆಗಳೂ ನಡೆದಿದೆ ಎನ್ನಲಾಗಿದೆ.
ಹೆಬ್ಬಾರ್ ಜಿಲ್ಲಾ ಉಸ್ತುವಾರಿ ಸಚಿವರಾದರೂ ಕಾರವಾರ- ಅಂಕೋಲಾ ಕ್ಷೇತ್ರದ ಮಟ್ಟಿಗೆ ತಾನು ಸೂಚಿಸಿದವರಿಗೆ ವರ್ಗಾವಣೆಯಲ್ಲಿ ಹೆಚ್ಚಿನ ಆದ್ಯತೆ ಕೊಡಲಿ ಎನ್ನುವುದು ಶಾಸಕರ ಬೇಡಿಕೆ ಎನ್ನಲಾಗಿದೆ. ಇದಕ್ಕೆ ಹೆಬ್ಬಾರ್ ಸಹ ಕೆಲ ಸಂದರ್ಭದಲ್ಲಿ ಶಾಸಕರ ನಡೆಯ ವಿರುದ್ಧ ಕಿಡಿಕಾರಿದ್ದಾರೆ ಎನ್ನಲಾಗಿದೆ. ಶಿವರಾಮ ಹೆಬ್ಬಾರ್ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಈ ಗುದ್ದಾಟ ನಿರಂತರವಾಗಿ ನಡೆಯುತ್ತಿದೆ ಎನ್ನುವುದು ಬಿಜೆಪಿ ಪಕ್ಷದಲ್ಲಿನ ಪ್ರಮುಖ ನಾಯಕರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಜನ್ ವರ್ಗಾವಣೆ ವಿಚಾರದಲ್ಲೂ ಗುದ್ದಾಟ?
ಕಾರವಾರದ ಜಿಲ್ಲಾ ಆಸ್ಪತ್ರೆಯ ಸರ್ಜನ್ ಆಗಿದ್ದ ಡಾ.ಶಿವಾನಂದ್ ಕುಡ್ತರಕರ್ ವರ್ಗಾವಣೆ ವಿಚಾರದಲ್ಲೂ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಚಿವ ಶಿವರಾಮ ಹೆಬ್ಬಾರ್ ನಡುವೆ ಗುದ್ದಾಟ ನಡೆದಿತ್ತು ಎನ್ನುವ ಆರೋಪ ಕೇಳಿಬಂದಿತ್ತು.
ಬಾಣಂತಿ ಗೀತಾ ಬಾನಾವಳಿ ಸಾವಿನ ವಿಚಾರದಲ್ಲಿ ಸರ್ಜನ್ ಡಾ.ಕುಡ್ತರಕರ್ ನಿರ್ಲಕ್ಷ ವಹಿಸಿದ್ದಾರೆ. ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಶಾಸಕಿ ರೂಪಾಲಿ ಪಟ್ಟು ಹಿಡಿದಿದ್ದರು. ಆದರೆ, ಸಚಿವ ಹೆಬ್ಬಾರ್ ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ಇದೇ ಕಾರಣಕ್ಕೆ ಶಾಸಕಿ ಸಿಎಂ ಬಳಿ ಹೋಗಿದ್ದರೂ ಸರ್ಜನ್ ವರ್ಗಾವಣೆಗೆ ಹಲವು ದಿನಗಳು ತೆಗೆದುಕೊಂಡಿದ್ದವು. ಅಂತಿಮವಾಗಿ ರೂಪಾಲಿ ನಾಯ್ಕ ಪಟ್ಟು ಹಿಡಿದು ವರ್ಗಾವಣೆಗೆ ಮುಖ್ಯಮಂತ್ರಿಯಿಂದ ಆದೇಶ ಮಾಡಿಸಿಕೊಂಡು, ತಮ್ಮ ಸಾಮರ್ಥ್ಯ ತೋರಿಸಿದ್ದರು ಎನ್ನುವ ಮಾತು ಕೆಲ ಪಕ್ಷದ ನಾಯಕರಿಂದಲೇ ಕೇಳಿಬಂದಿತ್ತು.
Recommended Video

ಭಿನ್ನಾಭಿಪ್ರಾಯಕ್ಕೆ ಮಾಜಿ ಶಾಸಕರ ಒಡನಾಟ ಕಾರಣ?
ಶಾಸಕಿ ರೂಪಾಲಿ ನಾಯ್ಕ ಹಾಗೂ ಸಚಿವ ಶಿವರಾಮ ಹೆಬ್ಬಾರ್ ನಡುವೆ ಈ ಮುಸುಕಿನ ಗುದ್ದಾಟ ಪ್ರಾರಂಭಕ್ಕೆ ಮಾಜಿ ಶಾಸಕರ ನಡುವೆ ಹೆಬ್ಬಾರ್ ಗೆ ಇರುವ ಒಡನಾಟವೇ ಕಾರಣ ಎನ್ನುವ ಮಾತು ಕೂಡ ಕೇಳಿಬಂದಿದೆ.
ಸಚಿವ ಹೆಬ್ಬಾರ್ ಹಾಗೂ ಕಾರವಾರದ ಮಾಜಿ ಶಾಸಕರ ನಡುವೆ ಈ ಹಿಂದಿನಿಂದಲೂ ಉತ್ತಮ ಸಂಬಂಧ ಇದೆ. ಶಾಸಕಿ ರೂಪಾಲಿಯವರು, ಹೆಬ್ಬಾರ್ ಉಸ್ತುವಾರಿ ಸಚಿವರಾದ ಬಳಿಕ ತಮಗಿಂತ ಮಾಜಿ ಶಾಸಕರ ಮಾತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎನ್ನುವ ಅಸಮಾಧಾನವನ್ನು ಕೆಲವರ ಮುಂದೆ ತೋರಿಕೊಂಡಿದ್ದರು ಎನ್ನಲಾಗಿತ್ತು. ಇದಾದ ನಂತರ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯಲಾರಂಭಿಸಿದ್ದು, ಇದರ ಮುಂದಿನ ಭಾಗವಾಗಿ ವರ್ಗಾವಣೆ ವಿಚಾರದಲ್ಲಿ ಒಡಕು ಮೂಡಿದೆ ಎನ್ನಲಾಗಿದೆ. ಅಲ್ಲದೇ ಕೆಲ ಕಾಮಗಾರಿ ವಿಚಾರದಲ್ಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಅದು ಇಲ್ಲಿಯವರೆಗೂ ಹಾಗೇ ಮುಂದುವರೆದಿದೆ ಎನ್ನುವ ಅಭಿಪ್ರಾಯ ಬಿಜೆಪಿ ಪಕ್ಷದ ಕೆಲ ನಾಯಕರದ್ದಾಗಿದೆ.












Click it and Unblock the Notifications