ಇನ್ಮುಂದೆ ಬೆಂಗಳೂರಿಗೆ ಹೋಗಿ ಬಂದರೂ ಕೊರೊನಾ ಟೆಸ್ಟ್ ಕಡ್ಡಾಯ
ಕಾರವಾರ, ಜೂನ್ 29: ಇಷ್ಟು ದಿನ ಹೊರ ದೇಶ, ಹೊರ ರಾಜ್ಯಕ್ಕೆ ಹೋಗಿ ಬಂದವರು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಬೆಂಗಳೂರಿಗೆ ಹೋಗಿ ಬಂದರೂ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
Recommended Video
ಕೆಲವು ದಿನಗಳ ಹಿಂದೆ ಯಲ್ಲಾಪುರದಿಂದ ಬೆಂಗಳೂರಿಗೆ ಹೋಗಿ ಬಂದಿದ್ದ ಕಂಡಕ್ಟರ್ ಒಬ್ಬರಿಗೆ ಕೊರೊನಾ ಸೋಂಕು ಕಂಡುಬಂದಿದ್ದು, ಆತ ಹಲವರ ಸಂಪರ್ಕ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಈ ಪ್ರಕರಣ ಆತಂಕ ಹುಟ್ಟಿಸಿತ್ತು. ಇನ್ನೊಂದು ಪ್ರಕರಣದಲ್ಲಿ, ಮಂಗಳೂರಿಗೆ ತೆರಳಿ ವಾಪಸ್ ಆಗಿದ್ದ ಅಂಕೋಲಾದ ವ್ಯಕ್ತಿಯೋರ್ವನಲ್ಲಿ ಕೊರೊನಾ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿತ್ತು. ಸೋಂಕಿತ, 'ಹೊರ ರಾಜ್ಯದವರ ಸಂಪರ್ಕಕ್ಕೆ ಬಂದಿಲ್ಲ. ನನಗೆ ಕೊರೊನಾ ಬಂದಿರಲು ಸಾಧ್ಯವಿಲ್ಲ' ಎಂದು ಕುಮಟಾ ಹಾಗೂ ಅಂಕೋಲಾ ತಾಲೂಕಿನ ಹಲವು ಭಾಗಗಳಲ್ಲಿ ತಿರುಗಾಟ ನಡೆಸಿದ್ದ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ಟ್ರಾವೆಲ್ ಹಿಸ್ಟರಿ ಕಂಡು ಹಿಡಿಯುವುದೇ ಆರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿತ್ತು.
ಉತ್ತರ ಕನ್ನಡ ಜಿಲ್ಲೆ; ಈ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆ ಲಭ್ಯ
ಈ ಎರಡೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಅಧಿಕ ಕೊರೊನಾ ಪ್ರಕರಣ ಕಂಡು ಬರುತ್ತಿರುವ ಬೆಂಗಳೂರಿಗೆ ಹೋಗಿ ಬರುವವರಿಂದ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡಬಾರದು ಎಂದು ಮುಂಜಾಗೃತಾ ಕ್ರಮವಹಿಸಿ, ಬೆಂಗಳೂರಿಗೆ ಯಾರು ಹೋಗಿ ಬರುತ್ತಾರೋ ಅವರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಿ ತಮ್ಮ ಮಾಹಿತಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆದೇಶಿಸಿದೆ ಎನ್ನಲಾಗಿದೆ.
ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕು ಆಡಳಿತಕ್ಕೆ ಈ ಬಗ್ಗೆ ತಿಳಿಸಿದ್ದು, ಕಾರವಾರ, ಭಟ್ಕಳ ತಾಲೂಕು ಆಡಳಿತದಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಿಂದ ಪ್ರತಿನಿತ್ಯ ಹೋಗಿ ಬರುವ ಬಸ್ಸುಗಳು ನಗರಕ್ಕೆ ಆಗಮಿಸುತ್ತಿದ್ದಂತೆ ಆಯಾ ವ್ಯಾಪ್ತಿಯ ಆಸ್ಪತ್ರೆಗೆ ತೆರಳಿ ಪ್ರಯಾಣಿಕರನ್ನು ಬಿಟ್ಟು ಬರುವಂತೆ ಆದೇಶ ಹೊರಡಿಸಲಾಗಿದೆ. ಪ್ರಯಾಣಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು, ತಮ್ಮ ಮಾಹಿತಿಗಳನ್ನು ಆಸ್ಪತ್ರೆಯಲ್ಲಿ ನೀಡಿ ಮನೆಗೆ ತೆರಳಬೇಕು. ಒಂದೊಮ್ಮೆ ಅವರಲ್ಲಿ ಸೋಂಕು ಕಂಡು ಬಂದಲ್ಲಿ ಅವರನ್ನು ತಕ್ಷಣ ಗುರತಿಸಿ ಆಸ್ಪತ್ರೆಗೆ ದಾಖಲು ಮಾಡಿ ಕೊರೊನಾ ವೈರಸ್ ಹರಡದಂತೆ ತಡೆಯಬೇಕು ಎನ್ನುವುದು ಜಿಲ್ಲಾಡಳಿತದ ಉದ್ದೇಶ ಎನ್ನಲಾಗಿದೆ.
ಕೇವಲ ಹೊರ ಜಿಲ್ಲೆಯಿಂದ ಮಾತ್ರವಲ್ಲದೇ, ಮೂರು ತಿಂಗಳು ಒಂದೇ ಪ್ರದೇಶದಲ್ಲಿ ನೆಲೆಸಿರುವವರನ್ನು ಹೊರತುಪಡಿಸಿ ಬೇರೆ ಯಾವುದೇ ಊರಿನಿಂದ ಬಂದರೂ ಅಂಥವರ ಮಾಹಿತಿ ನೀಡುವಂತೆ ಆದೇಶ ಹೊರಡಿಸಿ ಕೊರೊನಾ ಸೋಂಕಿನ ತಡೆಗೆ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಮೊದಲ ಹಂತವಾಗಿ ಬೆಂಗಳೂರಿನಿಂದ ಬಂದವರ ಪರೀಕ್ಷೆ ನಡೆಸಿ ಮನೆಗಳಿಗೆ ತೆರಳುವ ಆದೇಶ ಮಾಡಲಾಗಿದೆ.