ಜೆಡಿಎಸ್ಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ
ಕಾರವಾರ, ಮಾರ್ಚ್ 16 : ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್'ಗೆ ಬಿಟ್ಟು ಕೊಟ್ಟಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ.
ಶಿರಸಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕರಿಗೆ ಘೇರಾವ್ ಹಾಕಿರುವ ಕಾರ್ಯಕರ್ತರು, ಟೈರ್ ಗಳಿಗೆ ಬೆಂಕಿ ಹಚ್ಚಿ, ಕುರ್ಚಿಗಳನ್ನು ಎಸೆದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಉಳಿಸಿ, ಕಾಂಗ್ರೆಸ್ ಬಚಾವ್ ಎಂದು ಘೋಷಣೆಗಳನ್ನು ಕೂಗಿ, ವಿರೋಧ ವ್ಯಕ್ತಪಡಿಸಿದರು.

ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಶ್ರೀಪಾದ ಹೆಗಡೆ ಕಡವೆ ಮತ್ತು ಸಂಗಡಿಗರು ಮಾತನಾಡಿ, ವಿಧಾನಸಭೆಯನ್ನು ಸೇರಿದಂತೆ ಸ್ಥಾನಿಕ ಚುನಾವಣೆಗಳಲ್ಲಿಯೂ ಒಂದು ಸ್ಥಾನವನ್ನು ಪಡೆಯಲೂ ಅಸಮರ್ಥವಾದ, ಇಡೀ ಜಿಲ್ಲೆಯಲ್ಲಿ ಒಂದು ಲಕ್ಷ ಮತವನ್ನೂ ಗಳಿಸಲು ಸಾಧ್ಯವಾಗದ ಜೆಡಿಎಸ್ ಗೆ ಸೀಟು ಕೊಟ್ಟಿರುವುದು ನಮಗೆ ನೋವು ತಂದಿದೆ ಎಂದರು.
ಹೀಗಾದರೆ ಮುಂದಿನ ದಿನಗಳಲ್ಲಿ ನಮ್ಮ ಸಾಂಪ್ರದಾಯಿಕ ವೋಟುಗಳು ಕಳೆದು ಹೋಗುತ್ತವೆ. ಅನಂತ ಕುಮಾರ ಹೆಗಡೆ ಹಾಗೂ ಬಿಜೆಪಿಯ ಕೋಮುವಾದದ ವಿರುದ್ಧ ಹೋರಾಡುವ ಕಾಂಗ್ರೆಸ್ ಸೋತು ಹೋಗುವ ಆತಂಕ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಆರಂಭದಿಂದಲೂ ಕಾಂಗ್ರೆಸ್ಸಿಗರು. ಹೈಕಮಾಂಡ್ ನ ಈ ನಿರ್ಧಾರ ಅಸ್ತಿತ್ವವೇ ಇಲ್ಲದ ಜೆಡಿಎಸ್ ಅನ್ನು ಬಲಪಡಿಸಲಿದೆ. ಮುಂದಿನ ದಿನಗಳಲ್ಲಿ ಬೇರೆ ಚುನಾವಣೆಗಳಲ್ಲಿ ಯಾವ ಮುಖದೊಂದಿಗೆ ಜನರ ಬಳಿ ನಾವು ಹೋಗುವುದು. ಎಂದು ಕಾರ್ಯಕರ್ತರು ಪ್ರಶ್ನಿಸಿದರು.
2014ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅನಂತ್ ಕುಮಾರ್ ಹೆಗಡೆ (5,46,939) ಅವರು ಕಾಂಗ್ರೆಸ್ ನ ಪ್ರಶಾಂತ್ ಆರ್ ದೇಶಪಾಂಡೆ (4,06,239) ಅವರನ್ನು 1 ಲಕ್ಷ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.












Click it and Unblock the Notifications