ಚೈತ್ರಾ ಕೊಠಾರಕರ್ ಬಿಜೆಪಿ ಸೇರ್ಪಡೆ?; ಅಮಿತ್ ಶಾ ಪುತ್ರನ ಕರೆ!
ಕಾರವಾರ, ಏಪ್ರಿಲ್ 07; ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ಕಾಂಗ್ರೆಸ್ನ ಚೈತ್ರಾ ಕೊಠಾರಕರ್ ಬಿಜೆಪಿ ಸೇರಲಿದ್ದಾರೆ?. ಗೃಹ ಸಚಿವ ಅಮಿತ್ ಶಾ ಪುತ್ರ ಕರೆ ಮಾಡಿ ಬಿಜೆಪಿಗೆ ಆಹ್ವಾನಿಸಿದ್ದಾರಂತೆ.
ಹೌದು, ಚೈತ್ರಾ ಕೊಠಾರಕರ್ ಪತಿ ಚಂದ್ರಹಾಸ ಕೊಠಾರಕರ್ ಈ ಹಿಂದೆ ಕಾರವಾರ ತಾಲೂಕು ಪಂಚಾಯತಿ ಅಧ್ಯಕ್ಷರಾಗಿದ್ದರು. ಪತಿ, ಪತ್ನಿ ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದು, ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು.
ಕಳೆದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕಾರವಾರದ ಅಮದಳ್ಳಿ ಕ್ಷೇತ್ರದಿಂದ ಹಾಲಿ ಶಾಸಕಿ ರೂಪಾಲಿ ನಾಯ್ಕ ಕಣಕ್ಕೆ ಇಳಿದಿದ್ದರು. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದ ಅವರಿಗೆ ಚೈತ್ರಾ ಕೊಠಾರಕರ್ ತೀವ್ರ ಸ್ಪರ್ಧೆ ನೀಡಿದ್ದರು.
ಅಂದು ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಹೆಚ್ಚಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಿದ್ದ ಚೈತ್ರಾ ಕೊಠಾರಕರ್ ಗೆಲುವು ಕಂಡು, ರೂಪಾಲಿ ನಾಯ್ಕ ಸೋಲನ್ನು ಕಂಡಿದ್ದರು.

ಬಿಜೆಪಿ ಸೇರುವ ಇಂಗಿತ
ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಕ್ಷೇತ್ರದಲ್ಲಿ ಓಡಾಟ ಹೆಚ್ಚಿಗೆ ಮಾಡಿ ಬಿಜೆಪಿ ಟಿಕೆಟ್ ಪಡೆದು ಶಾಸಕರಾದ ರೂಪಾಲಿ ನಾಯ್ಕ ಹಾಗೂ ಚೈತ್ರಾ ಕೊಠಾರಕರ್ ನಡುವೆ ಇಂದಿಗೂ ಮುಸುಕಿನ ಗುದ್ದಾಟ ಮುಂದುವರಿದಿದೆ. ಆದರೂ ಇದೀಗ ಬಿಜೆಪಿ ಸೇರುವ ಬಗ್ಗೆ ಸ್ವತಃ ಚೈತ್ರಾ ಕೊಠಾರಕರ್ ಇಂಗಿತ ವ್ಯಕ್ತಪಡಿಸಿದ್ದಾರೆ.

ಅಮಿತ್ ಶಾ ಪುತ್ರನ ಕರೆ?
"ಈ ಬಾರಿ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸುತ್ತಿಲ್ಲ. ಆದರೆ ಅಮಿತ್ ಶಾ ಅವರ ಪುತ್ರನೇ ನನಗೆ ಕರೆ ಮಾಡಿ, ಬಿಜೆಪಿಗೆ ಸೇರ್ಪಡೆಯಾಗುವಂತೆ ತಿಳಿಸಿದ್ದಾರೆ. ನಾನು ಈವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಳ್ಳುತ್ತೇನೆ" ಎಂದು ಚೈತ್ರಾ ಕೊಠಾರಕರ್ ಹೇಳಿದ್ದಾರೆ.

ರಾಷ್ಟ್ರ ಮಟ್ಟದ ಹುದ್ದೆ
ಶಾಸಕಿ ರೂಪಾಲಿಯವರಿಗೆ ತಮ್ಮ ಮೇಲೆ ಇನ್ನೂ ಮುನಿಸಿದೆ. ಹೀಗಿರುವಾಗ ಹೇಗೆ ಬಿಜೆಪಿ ಸೇರ್ಪಡೆಯಾಗಿವಿರಿ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, "ಸ್ಥಳೀಯವಾಗಿ ಅಲ್ಲ, ರಾಷ್ಟ್ರ ಮಟ್ಟದ ಹುದ್ದೆಯೊಂದನ್ನು ನೀಡುವುದಾಗಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
Recommended Video

ಬಿಜೆಪಿಯವರು ಒಪ್ಪಲಿದ್ದಾರೆಯೇ?
ಒಟ್ಟಾರೆಯಾಗಿ ಚೈತ್ರಾ ಕೊಠಾರಕರ್ ಮುಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಾ?, ಸೇರಿದರೆ ಪಕ್ಷ ಯಾವ ಹುದ್ದೆ ನೀಡಲಿದೆ?, ಸ್ಥಳೀಯವಾಗಿ ಬಿಜೆಪಿ ಪದಾಧಿಕಾರಿಗಳು ಅಥವಾ ಕಾರ್ಯಕರ್ತರು ಇವರ ಸೇರ್ಪಡೆ ಒಪ್ಪಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications