"ಅನರ್ಹ ಶಾಸಕರ ಅನ್ಯಾಯಕ್ಕೆ ತಕ್ಕ ಉತ್ತರ ನಮ್ಮಲ್ಲಿದೆ"
ಕಾರವಾರ, ನವೆಂಬರ್ 14: ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಗೆ ಯಲ್ಲಾಪುರ ಮುಂಡಗೋಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ಇಂದು ಮಾಜಿ ಸಚಿವ ಹಾಗೂ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಬಳಿಕ ಪಟ್ಟಣದ ದೇವಿ ಮೈದಾನದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಭೀಮಣ್ಣ ನಾಯ್ಕ, 'ಪಕ್ಷಕ್ಕೆ ದ್ರೋಹ ಮಾಡಿದ ಅನರ್ಹ ಶಾಸಕರಿಗೆ ಬುದ್ಧಿ ಕಲಿಸಿ. ಜನರ ಬಳಿ ಕಾರ್ಯಕರ್ತರು ಹೋಗಿ ಅನರ್ಹ ಶಾಸಕರು ಮಾಡಿರುವ ಅನ್ಯಾಯದ ಬಗ್ಗೆ ತಿಳಿಸಿ. ಪಕ್ಷದ ಕಾರ್ಯಕರ್ತರು, ಮತದಾರರು ಹೆಬ್ಬಾರ್ ಸೋಲಿಸಲು ಒಂದಾಗಿದ್ದಾರೆ. ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಸಿದ್ದರಾಮಯ್ಯ ದೇಶಪಾಂಡೆ ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ' ಎಂದರು.
ಆರ್.ವಿ.ದೇಶಪಾಂಡೆ ಮಾತನಾಡಿ, 'ಯಲ್ಲಾಪುರ ಕ್ಷೇತ್ರದಲ್ಲಿ ಗೆಲುವು ನಮ್ಮದೇ. ಈ ಬಗ್ಗೆ ಯಾವುದೇ ಸಂದೇಹವಿಲ್ಲ. ಕಾರ್ಯಕರ್ತರು ನಮ್ಮ ಪಕ್ಷದ ಆಸ್ತಿ, ನಮ್ಮ ಶಕ್ತಿ. ನೀವು ಪ್ರಾಮಾಣಿಕವಾಗಿ ಮನೆ ಮನೆಗೆ ಹೋಗಿ ಮತ ಯಾಚನೆ ಮಾಡಿ ಗೆಲ್ಲಿಸಿ. ಸಿದ್ದರಾಮಯ್ಯ ನಾಯಕತ್ವದಲ್ಲಿ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸ ಈ ಬಾರಿ ಉತ್ತರ ಕೊಡಲಿದೆ' ಎಂದರು.

'ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ತುರ್ತಾಗಿ ಹಣ ಬಿಡುಗಡೆ ಮಾಡಿದೆ. ಆದರೆ ಬಿಡುಗಡೆ ಮಾಡಿದ ಹಣದ ಕೆಲಸವಾಗಿಲ್ಲ. ಸ್ಪೀಕರ್ ಹೆಬ್ಬಾರರನ್ನು ಅನರ್ಹತೆ ಮಾಡಿದ್ದರು. ಸುಪ್ರೀಂ ಸಹ ಇದನ್ನ ಒಪ್ಪಿಕೊಂಡಿದೆ. ಅನರ್ಹ ಶಾಸಕರಿಗೆ ಅನರ್ಹತೆ ಎನ್ನುವ ಪಟ್ಟ ಜೀವನದಲ್ಲಿ ಬದಲಾವಣೆ ಆಗುವುದಿಲ್ಲ. ಮತದಾರರು ಅನರ್ಹರಿಗೆ ಬುದ್ಧಿ ಕಲಿಸಿ' ಎಂದರು. 'ಹದಿನೈದು ಕ್ಷೇತ್ರದಲ್ಲಿ ಪಕ್ಷಾಂತರದಿಂದ ಚುನಾವಣೆ ನಡೆಯುತ್ತಿದೆ. ಇದರ ಭಾರ ಯಾರ ಮೇಲೆ? ಅನರ್ಹ ಶಾಸಕರ ಅಧಿಕಾರದ ಆಸೆಯಿಂದ ಚುನಾವಣೆ ಬಂದಿದೆ' ಎಂದು ಕಿಡಿಕಾರಿದರು.
ಯಲ್ಲಾಪುರದ ದೇವಿ ಮೈದಾನದಿಂದ ತಹಶೀಲ್ದಾರರ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಬಳಿಕ ಶಿರಸಿ ಉಪವಿಭಾಗಧಿಕಾರಿ, ಕ್ಷೇತ್ರದ ಚುನಾವಣಾ ಅಧಿಕಾರಿಯೂ ಆಗಿರುವ ಈಶ್ವರ್ ಉಳ್ಳಾಗಡ್ಡಿ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಲಾಯಿತು.












Click it and Unblock the Notifications