ಶಿರಸಿಯ ಶಂಕರತೀರ್ಥ ತಡೆ ಗೋಡೆ ಕುಸಿತ: ಪ್ರವೇಶ ನಿರ್ಬಂಧ
ಕಾರವಾರ, ಆಗಸ್ಟ್.21: ಶಿರಸಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅಘನಾಶಿನಿ ನದಿ ಮೂಲವಾದ ಶಂಕರತೀರ್ಥದ ತಡೆ ಗೋಡೆ ಕುಸಿತಕ್ಕೊಳಗಾಗಿದೆ. ಕುಸಿತದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ. ತಡೆ ಗೋಡೆ ಕುಸಿತದಿಂದಾಗಿ ಶಂಕರತೀರ್ಥ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿರಾಕರಿಸಲಾಗಿದೆ.
ಕೆರೆಯ ಒಂದು ಬದಿಯ ತಡೆ ಗೋಡೆ ಬಹುತೇಕ ಕುಸಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಂಕರತೀರ್ಥದ ಪ್ರವೇಶ ನಿರ್ಭಂಧಿಸಲಾಗಿದೆ. ಇತ್ತೀಚೆಗೆ ಶಂಕರತೀರ್ಥದ ಸಮಗ್ರ ಅಭಿವೃದ್ಧಿಯನ್ನು ಶಿರಸಿ ಜೀವಜಲ ಕಾರ್ಯಪಡೆ ಕೈಗೊಂಡಿತ್ತು. ಆದರೆ ಅತೀವೃಷ್ಟಿಯ ಕಾರಣ ತಡೆಗೋಡೆ ಕುಸಿದು ಕೆರೆ ಸೇರಿದೆ.

ಇದರ ಜೊತೆ ಬೀದಿದೀಪದ ಕಂಬ ಕೂಡ ನೆಲಕ್ಕುರುಳಿದೆ. ಕೆರೆ ಸುತ್ತ ಇನ್ನೂ ಹಲವೆಡೆ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಬೀಳುವ ಅಪಾಯದಲ್ಲಿದೆ. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications