ಕ್ಯಾನ್ಸರ್ ಪೀಡಿತ ಮಗುವಿನ ಆರೋಗ್ಯದಲ್ಲಿ ಚೇತರಿಕೆ: ಫಲಿಸಿದ ಮಾಧವ ನಾಯಕ, ಕ್ಯಾನ್ವಿನ್ ಗ್ರೂಪ್ನ ಶ್ರಮ
ಮುಖವನ್ನು ಆವರಿಸಿದ್ದ ಕ್ಯಾನ್ಸರ್ನಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕಾರವಾರದ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಕ್ಯಾನ್ಸರ್ ತಜ್ಞರ ‘ಕ್ಯಾನ್ವಿನ್ ಗ್ರೂಪ್’ ತಂಡ ಹಾಗೂ ಮಾಧವ ನಾಯಕ ಮಗುವಿನ ಚಿಕಿತ್ಸೆಗಾಗಿ ಅವಿರತ ಶ್ರಮವಹಿಸಿದ್ದಾರೆ.
ಕಾರವಾರ, ಫೆಬ್ರವರಿ 2: ಕ್ಯಾನ್ಸರ್ ದೃಢಪಟ್ಟು ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರವಾರ ನಗರದ ನಂದನಗದ್ದಾದ ನಾಲ್ಕು ವರ್ಷದ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ. ನುರಿತ ಕ್ಯಾನ್ಸರ್ ತಜ್ಞರ 'ಕ್ಯಾನ್ವಿನ್ ಗ್ರೂಪ್' ತಂಡ ಅವಿರತ ಶ್ರಮದ ಫಲವಾಗಿ ಬಾಲಕನ ಆರೋಗ್ಯದಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬಂದಿದೆ.
ಕಿವಿಯ ಹಿಂಬದಿಯ ಚಿಕ್ಕ ಗುಳ್ಳೆಯೊಂದು ಬೃಹದಾಕಾರವಾಗಿ ಬೆಳೆದು ಮುಖವನ್ನಾವರಿಸಿಕೊಂಡಿದ್ದ ಕಾರವಾರದ ನಂದನಗದ್ದಾದ ಬಾಲಕನಿಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹಾಗೂ ಇತರರು ಕಾರವಾರ ಜಿಲ್ಲಾಸ್ಪತ್ರೆಯ ಬಳಿಕ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಿದ್ದರು.
ಕಾರವಾರ: ಕಾಡು ಹಂದಿ ಮಾಂಸ ಎಂದು ನಾಯಿ ಮಾಂಸ ಮಾರಾಟ: ಗ್ರಾಮಸ್ಥರ ಬಲೆಗೆ ಬಿದ್ದ ಖದೀಮರು
ಕಿಮ್ಸ್ನಲ್ಲಿ ಬಾಲಕನಿಗೆ ಕ್ಯಾನ್ಸರ್ ದೃಢಪಟ್ಟಿತ್ತು. ಈ ವೇಳೆ ಹಲವರ ಸಲಹೆ- ಸೂಚನೆಯ ಮೇರೆಗೆ 'ಕ್ಯಾನ್ವಿನ್ ಗ್ರೂಪ್' ತಂಡದ ವೈದ್ಯರುಗಳನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದ ಮಾಧವ ನಾಯಕ ಅವರು ಬಾಲಕನನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿದ್ದರು.
ಕ್ಯಾನ್ಸರ್ ಪೀಡಿತ ಬಾಲಕನ ಆರೋಗ್ಯದಲ್ಲಿ ಚೇತರಿಕೆ
ಸದ್ಯ ಇಂಡಿಯಾನ ಆಸ್ಪತ್ರೆಯಲ್ಲಿ 'ಕ್ಯಾನ್ವಿನ್ ಗ್ರೂಪ್'ನ ಡಾ.ಅಜಯಕುಮಾರ್, ಡಾ.ರಾಮನಾಥ ಶೆಣೈ ನೇತೃತ್ವದಲ್ಲಿ ಆಸ್ಪತ್ರೆಯ ಇತರ ವೈದ್ಯರು ಹಾಗೂ ಸಿಬ್ಬಂದಿ ಬಾಲಕನಿಗೆ ಚಿಕಿತ್ಸೆಯ ಜೊತೆಗೆ ಆರೈಕೆ ಮಾಡುತ್ತಿದ್ದಾರೆ. ಹೆಚ್ಚಿನ ಕಾಳಜಿ ವಹಿಸಿ ಬಾಲಕನನ್ನು ಕ್ಯಾನ್ಸರ್ ಮುಕ್ತವಾಗಿಸಲು ಶ್ರಮಿಸುತ್ತಿದ್ದಾರೆ. ಸದ್ಯ ಬಾಲಕನ ಆರೋಗ್ಯದಲ್ಲಿ ಈ ಮೊದಲಿಗಿಂತಲೂ ಚೇತರಿಕೆ ಕಂಡುಬಂದಿದ್ದು, ಇನ್ನೊಂದು ವೈದ್ಯಕೀಯ ವರದಿ ಬಂದ ಬಳಿಕ, ಅಂದರೆ ಇನ್ನೆರಡು ವಾರಗಳಲ್ಲಿ ಬಾಲಕನನ್ನ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಾಲಕನ ಚಿಕಿತ್ಸೆಗೆ 1 ಲಕ್ಷ ರೂ ನೀಡಿದ ಕ್ಯಾನ್ಸರ್ ಸೊಸೈಟಿ
ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಲಕನ ಚಿಕಿತ್ಸೆ ಸಂಬಂಧ ಆತನ ಕುಟುಂಬಕ್ಕೆ ಯಾವುದೇ ಆರ್ಥಿಕ ಹೊರೆಯಾಗದಂತೆ ಅನೇಕ ದಾನಿಗಳು ನೆರವಾಗಿದ್ದಾರೆ. ಮಂಗಳೂರಿನ ಕ್ಯಾನ್ಸರ್ ಸೊಸೈಟಿ ಬಾಲಕನ ಚಿಕಿತ್ಸೆಗೆ 1 ಲಕ್ಷ ರೂಪಾಯಿ ನೀಡಿ ನೆರವಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿ ಕೂಡ ಕೆಲವು ಸಂಘ- ಸಂಸ್ಥೆಗಳ ನೆರವಿನೊಂದಿಗೆ ಹೆಚ್ಚು ಖರ್ಚು ಬಾರದಂತೆ ನೋಡಿಕೊಳ್ಳುತ್ತಿದೆ.
ಬಾಲಕನ ಕುಟುಂಬಕ್ಕೆ ನೆರವಾದ ದಾನಿಗಳು
ಇನ್ನು ಕಾರವಾರದಲ್ಲಿ ಮಹಿಳಾ ಮೀನುಗಾರರ ಮುಖಂಡರಾದ ಸುಶೀಲಾ ಹರಿಕಂತ್ರ, ಮಗುವಿನ ಚಿಕಿತ್ಸೆಗೆ ಮೀನು ಮಾರಾಟ ಮಹಿಳೆಯರಿಂದ ಸುಮಾರು 10 ಸಾವಿರ ಹಣ ಸಂಗ್ರಹಿಸಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ನರೇಂದ್ರ ದೇಸಾಯಿ 5 ಸಾವಿರ, ನಗರಸಭೆಯ ಉಪಾಧ್ಯಕ್ಷ ಪ್ರಕಾಶ ನಾಯ್ಕ 2 ಸಾವಿರ, ಮಾಜಿ ಶಾಸಕ ಸತೀಶ್ ಸೈಲ್ 10 ಸಾವಿರ ಹಾಗೂ 'ಕರಾವಳಿ ಮುಂಜಾವು' ಸೇರಿದಂತೆ ಅನೇಕ ಸಂಘ- ಸಂಸ್ಥೆಗಳು, ದಾನಿಗಳು ಬಾಲಕನ ಕುಟುಂಬಕ್ಕೆ ನೆರವಾಗಿದ್ದಾರೆ.
ಬಾಲಕ ಗುಣಮುಖನಾದರೆ ಸಾಕು ಎಂದ ಮಾಧವ ನಾಯಕ
ನಂದನಗದ್ದಾದ ದಂಪತಿಯ ನಾಲ್ಕು ವರ್ಷದ ಮಗುವಿನ ಕಿವಿಯ ಹಿಂಬದಿಯಲ್ಲಿ ಮೂಡಿದ್ದ ಚಿಕ್ಕ ಗುಳ್ಳೆಯೊಂದು ಮುಖದ ತುಂಬೆಲ್ಲ ಆವರಿಸಿಕೊಂಡು, ಮುಖವನ್ನು ಕಣ್ಣೆತ್ತಿ ನೋಡಲೂ ಆಗದ ಸ್ಥಿತಿಗೆ ತಲುಪಿತ್ತು. ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಷ್ಟೇ ಅಲ್ಲದೇ, ಮಹಾರಾಷ್ಟ್ರದಲ್ಲಿ ನಾಟಿ ಔಷಧಿ ಮಾಡಿದ್ದರೂ, ಮಗುವಿನ ಕಾಯಿಲೆ ಉಲ್ಬಣವಾಗಿತ್ತೇ ವಿನಹಃ ಗುಣಮುಖವಾಗುವ ಯಾವುದೇ ಲಕ್ಷಣ ಗೋಚರಿಸುತ್ತಿರಲಿಲ್ಲ. ಬಡ ಮೀನುಗಾರ ಕುಟುಂಬದವರಾದ ಮಗುವಿನ ಪಾಲಕರು, ಆರ್ಥಿಕ ಸಮಸ್ಯೆಯಿಂದಾಗಿ ದೊಡ್ಡ ಆಸ್ಪತ್ರೆಗಳಿಗೆ ಮಗುವನ್ನು ಕರೆದುಕೊಂಡು ಹೋಗಲಾಗದೆ ಮನೆಯಲ್ಲೇ ಆರೈಕೆ ಮಾಡಿಕೊಂಡಿದ್ದರು. ಈ ವೇಳೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಈ ಕುಟುಂಬದ ನೆರವಿಗೆ ಬಂದಿದ್ದು, ಮಗುವಿನ ಆರೋಗ್ಯ ಚೇತರಿಗೆ ಶ್ರಮಿಸಿದ್ದಾರೆ.
ಮಗುವಿನ ಈಗಿನ ಪರಿಸ್ಥಿತಿ ಬಗ್ಗೆ ಮಾತನಾಡಿದ ಮಾಧವ ನಾಯಕ ಅವರು, "ಆಸ್ಪತ್ರೆಯವರು ಹಾಗೂ ವೈದ್ಯರುಗಳ ತಂಡ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದಾಗಿ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಷ್ಟೇ ಖರ್ಚು ಬಂದರೂ ಅದನ್ನು ದಾನಿಗಳ ನೆರವು ಪಡೆದು ಭರಿಸಿಕೊಡುವುದಾಗಿ ಕುಟುಂಬಕ್ಕೆ ಧೈರ್ಯ ನೀಡಿದ್ದೇನೆ. ನಮಗೆ ಬಾಲಕ ಗುಣಮುಖನಾಗಿ ಮೊದಲಿನಂತಾದರಷ್ಟೇ ಸಾಕು" ಎಂದಿದ್ದಾರೆ.