ಉ.ಕ ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರಿಗೆ ಸೌಲಭ್ಯ ನೀಡುವಲ್ಲಿಯೂ ಸರ್ಕಾರದಿಂದ ತಾರತಮ್ಯ ಆರೋಪ!
ಕಾರವಾರ, ಅಕ್ಟೋಬರ್ 19: ಕಳೆದ ಎರಡು ದಶಕಗಳ ಹಿಂದೆ ಗೇರು ಮರಗಳಿಗೆ ಬಾಧಿಸಿದ್ದ ರೋಗದ ನಿರ್ಮೂಲನೆಗೆ ಹೆಲಿಕಾಪ್ಟರ್ ಮೂಲಕ ಉಡುಪಿ, ಮಂಗಳೂರು, ಉತ್ತರಕನ್ನಡ ಭಾಗದ ಗೇರು ಮರಗಳಿರುವ ಪ್ರದೇಶದಲ್ಲಿ ಎಂಡೋಸಲ್ಫಾನ್ ಔಷಧಿ ಸಿಂಪಡಿಸಲಾಗಿತ್ತು. ಆದರೆ ಇದು ಗೇರು ಗಿಡದ ರೋಗ ವಾಸಿಗಿಂತ ಇದರ ವಿಷ ವರ್ತುಲ ಮನುಷ್ಯರ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಪರಿಣಾಮ ಈ ವಿಷದಿಂದಾಗಿ ಹುಟುವ ಮಕ್ಕಳಲ್ಲಿ ಅಂಗವೈಕಲ್ಯತೆ, ಬುದ್ಧಿ ಮಾಂದ್ಯತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಾಧಿತರಾಗಿ ನರಳುವಂತಾಗಿದೆ.
ಉತ್ತರಕನ್ನಡ ಜಿಲ್ಲೆಯಾದ್ಯಂತ ಈವರೆಗೆ ಸುಮಾರು ಎರಡು ಸಾವಿರ ಮಂದಿ ಎಂಡೋಸಲ್ಫಾನ್ ಪೀಡಿತರಾಗಿದ್ದಾರೆ. ಸದ್ಯ ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ ಹಾಗೂ ಸಿದ್ಧಾಪುರ ಸೇರಿ ಒಟ್ಟೂ 1690 ಮಂದಿ ಎಂಡೋಸಲ್ಫಾನ್ ಪೀಡಿತರು ಜಿಲ್ಲೆಯಲ್ಲಿದ್ದಾರೆ ಎಂದು ಇಲಾಖೆ ವರದಿಗಳು ಹೇಳುತ್ತಿದೆ.ಆದರೆ ಇದು ಸರ್ಕಾರವು 2013-14 ನೇ ಸಾಲಿನಲ್ಲಿ ನಡೆಸಿದ ಸಮೀಕ್ಷೆಯಾಗಿದೆ. ಅಂದು ನಡೆಸಿದ ಸಮೀಕ್ಷೆಯಲ್ಲಿ ಕೇವಲ ಶೇ. 4 ರಷ್ಟು ಮಾತ್ರ ಗುರುತಿಸಿ ಸೌಲಭ್ಯ ಕಲ್ಪಿಸಲಾಗಿದೆ.
ಸೊಳ್ಳೆ ನನಗೆ ಮಾತ್ರ ಕಚ್ಚುತ್ತೆ ಅನ್ನೋರು ಕಾರಣ ತಿಳಿಯಿರಿ
ಅಸಲಿಯಾಗಿ ಜಿಲ್ಲೆಯಲ್ಲಿ ಇನ್ನೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೊಳಗಾದ ಎಂಡೋಸಲ್ಫಾನ್ ಪೀಡಿತರು ಇದ್ದು, ಅವರು ಶಿಬಿರದಿಂದ ಹೊರಗುಳಿದಿದ್ದಾರೆ. ಅಲ್ಲದೇ ವಿಷಯವೇ ತಿಳಿಯದೇ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಜಿಲ್ಲಾಮಟ್ಟದ ಸಮಗ್ರ ವಿಕಲಚೇತನರ ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ಹಾಗೂ ಎಂಆರ್ಡಬ್ಲ್ಯೂ ನೌಕರರ ಒಕ್ಕೂಟ ಜಿಲ್ಲಾಡಳಿತಕ್ಕೆ ದೂರು ನೀಡಿದೆ.
ಸೌಲಭ್ಯದ ಹೊರಗುಳಿದ ಉ.ಕ ಭಾಗದ ಪೀಡಿತರು
ಇನ್ನು ಇದೇ ರೀತಿ ಸಮಸ್ಯೆಗೊಳಗಾದ ಪಕ್ಕದ ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನವರೆಗೂ ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಕೇವಲ ಒಮ್ಮೆ ಮಾತ್ರ ಸಮೀಕ್ಷೆ ಮಾಡಿದ್ದು ಇದರಿಂದ ಅದೆಷ್ಟೋ ಎಂಡೋಸಲ್ಫಾನ್ ಪೀಡಿತರು ಸೌಲಭ್ಯದ ಹೊರಗುಳಿದಿದ್ದಾರೆ. ಇದರಿಂದ ರೋಗಬಾಧೆಗೊಳಗಾದವರಿಗೆ ಅನ್ಯಾಯ ಮಾಡಿದಂತಾಗುತ್ತಿದೆ ಎಂದು ತೊಂದರೆಗೊಳಗಾದವರು ಅಳಲು ತೋಡಿಕೊಂಡಿದ್ದಾರೆ.
ಹುಷಾರ್: ದೀಪಾವಳಿಗೆ ಪಟಾಕಿ ಹೊಡೆದರೆ 200 ರೂಪಾಯಿ ದಂಡ, 6 ತಿಂಗಳು ಜೈಲು!
ಉತ್ತರಕನ್ನಡ ಜಿಲೆಗೆ ಸೌಲಭ್ಯ ತಾರತಮ್ಯ
ಇನ್ನು ಉಡುಪಿ ಮತ್ತು ಮಂಗಳೂರಿನಲ್ಲಿ ಎಂಡೋಸಲ್ಫಾನ್ ಪೀಡಿತರಿಗೆ ಇರುವ ಸೌಲಭ್ಯಗಳು ಉತ್ತರಕನ್ನಡ ಜಿಲ್ಲೆಯಲ್ಲಿನ ಪೀಡಿತರಿಗೆ ಇಲ್ಲದಿರುವುದು ಸೌಲಭ್ಯಗಳಲ್ಲಿ ಸಾಕಷ್ಟು ತಾರತಮ್ಯ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸುವಿಕೆ ಆಗುತ್ತಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಒಮ್ಮೆ ಮಾತ್ರ ಸಮೀಕ್ಷೆ ನಡೆಸಲಾಗಿದೆ. ಅಲ್ಲಿ ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರವಾಗಿ 5 ಎಕರೆ ಸ್ಥಳ ಮಂಜೂರಿಸಲಾಗಿದೆ. ಆದರೆ ನಮ್ಮಲ್ಲಿ ಇದ್ಯಾವುದು ನಡೆದಿಲ್ಲ ಎಂದು ಆರೋಪಿಸಿದ್ದಾರೆ.
ತಿಂಗಳಿಗೆ ನೀಡುವ ಮಾಸಾಶನದಲ್ಲೂ ತಾರತಮ್ಯ
ಇನ್ನು ಉಡುಪಿ, ಮಂಗಳೂರು ಭಾಗದಲ್ಲಿ ಶೇಕಡಾ 25 ರಿಂದ 58 ಒಳಗಿರುವ ಎಂಡೋಸಲ್ಫಾನ್ ಫಲಾನುಭವಿಗಳಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಾಗೂ 59 ಮೇಲ್ಮಟ್ಟ ಫಲಾನುಭವಿಗಳಿಗೆ 4 ಸಾವಿರ ರೂ ಮಾಸಾಶನ ನೀಡುತ್ತಿದ್ದಾರೆ. ಆದರೆ ನಮ್ಮಲ್ಲಿ 25 ರಿಂದ 60 ರವರೆಗಿನ ಎಂಡೋಸಲ್ಫಾನ್ ಫಲಾನುಭವಿಗಳಿಗೆ 2 ಸಾವಿರ ರೂ ಮಾತ್ರ ಹಾಗೂ 61 ಮೇಲ್ಪಟ್ಟ ಫಲಾನುಭವಿಗಳಿಗೆ 4 ಸಾವಿರ ರೂ ನೀಡಿ ತಾರತಮ್ಯ ಮಾಡಲಾಗುತ್ತಿದೆ. ಎಂಡೋಸಲ್ಫಾನ್ ಪೀಡಿತರು ಮರಣ ಹೊಂದಿದರೆ ಮರಣ ಪರಿಹಾರ ನೀಡುತ್ತಿದ್ದಾರೆ, ಆದರೆ ಜಿಲ್ಲೆಯಲ್ಲಿ ಯಾರಿಗೂ ಬಿಡಿಗಾಸು ನೀಡಿಲ್ಲ ಎಂದು ಎಂಡೋಸಲ್ಫಾನ್ ಪೀಡಿತರಾದ ನಾಗೇಶ ನಾಯ್ಕ ಭಟ್ಕಳ ಆರೋಪಿಸಿದ್ದಾರೆ.
ಸೌಲಭ್ಯ ವಂಚಿತರನ್ನು ಪತ್ತೆ ಹಚ್ಚಲು ಆಗ್ರಹ
ಇನ್ನು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಜಿಲ್ಲಾಮಟ್ಟದ ಸಮಗ್ರ ವಿಕಲಚೇತನರ ವಿಆರ್ಡಬ್ಲ್ಯೂ, ಯುಆರ್ಡಬ್ಲ್ಯೂ ಹಾಗೂ ಎಂಆರ್ಡಬ್ಲ್ಯೂ ನೌಕರರ ಒಕ್ಕೂಟ ಜಿಲ್ಲಾಡಳಿತಕ್ಕೆ ದೂರು ನೀಡಿದೆ. ಉಡುಪಿ ಮಂಗಳೂರಿನಂತೆ ಸೌಲಭ್ಯ ಕಲ್ಪಿಸುವುದರ ಜೊತೆಗೆ ಸಮೀಕ್ಷೆ ನಡೆಸಿ ಸೌಲಭ್ಯ ಪಟ್ಟಿಯಲ್ಲಿ ಬಿಟ್ಟು ಹೋದವರನ್ನು ಪತ್ತೆಹಚ್ಚಲು ಆಗ್ರಹಿಸಿದ್ದಾರೆ.
ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ ಹಾಗೂ ಸಿದ್ದಾಪುರ ಸೇರಿ ಒಟ್ಟೂ 1690 ಮಂದಿ ಎಂಡೋಸಲ್ಫಾನ್ ಪೀಡಿತರು ಜಿಲ್ಲೆಯಲ್ಲಿದ್ದಾರೆ. ಇಂತವರಿಗೆ 2018 ರಿಂದ ಸ್ಕಾಡವೇಸ್ ಸಂಸ್ಥೆ ಮೂಲಕ ಆಯಾ ತಾಲ್ಲೂಕುಗಳಿಗೆ ಅಂಬ್ಯುಲೆನ್ಸ್ ಮೂಲಕ ಸಿಬ್ಬಂದಿ ತಿಂಗಳಿಗೆ ಒಂದು ಬಾರಿಯಂತೆ ಪ್ರತಿಯೊಬ್ಬ ಎಂಡೋಸಲ್ಫಾನ್ ಬಾಧಿತರ ಮನೆಗೂ ತೆರಳಿ ಅಗತ್ಯ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿಗಳನ್ನು ಒದಗಿಸುತ್ತಿದ್ದರು. ಇದರಿಂದಾಗಿ ಎಂಡೋಸಲ್ಫಾನ್ ಪೀಡಿತರಿಗೂ ಸಾಕಷ್ಟು ಅನುಕೂಲವಾಗಿದ್ದು ಹಲವರಲ್ಲಿ ಚೇತರಿಕೆ ಸಹ ಕಂಡುಬಂದಿತ್ತು. ಆದರೆ ಒಂದು ವರ್ಷದಿಂದ ಎಂಡೋಸಲ್ಫಾನ್ ಪೀಡಿತರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಕೂಡಲೇ ಈ ಹಿಂದಿನಂತೆ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ಒದಗಿಸುವ ವ್ಯವಸ್ಥೆ ಜಾರಿಯಾಗಬೇಕು ಎಂದು ಎಂಡೋಸಲ್ಫಾನ್ ಪೀಡಿತೆ ಪ್ರವೀಣಾ ನಾಯ್ಕ ಒತ್ತಾಯಿಸಿದ್ದಾರೆ.