ಪುಣ್ಯಕ್ಷೇತ್ರದ ಮದುವೆಗಳಿಗೆ ಪುನೀತ್, ಯಶ್ ದಂಪತಿ ರಾಯಭಾರಿ
ಕಾರವಾರ, ಡಿಸೆಂಬರ್ 26: ಪುಣ್ಯಕ್ಷೇತ್ರದಲ್ಲಿ ವಿವಾಹ ಮಹೋತ್ಸವ ಜರುಗಿಸುವ ಸರ್ಕಾರದ ಯೋಜನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ನಟರಾದ ಪುನೀತ್ ರಾಜಕುಮಾರ್ ಹಾಗೂ ಯಶ್ ದಂಪತಿ ರಾಯಭಾರಿಗಳಾಗಿದ್ದಾರೆ.
ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಬಗ್ಗೆ ಮಾಹಿತಿ ನೀಡಿದ್ದು, 'ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇದಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಸಚಿವರು, ಮಠಾಧೀಶರು, ಗಣ್ಯರು ಖುದ್ದು ಈ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ' ಎಂದು ತಿಳಿಸಿದ್ದಾರೆ.

'ರಾಜ್ಯದಲ್ಲಿ ಹೆಚ್ಚಿನ ಆದಾಯವಿರುವ 16ಎ ದರ್ಜೆಯ ದೇವಾಲಯಗಳಲ್ಲಿ ಕಲ್ಯಾಣ ಮಂಟಪ, ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳಿರುವ ದೇವಾಲಯಗಳಲ್ಲಿ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಶ್ರೀಮಾರಿಕಾಂಬ ದೇವಾಲಯ, ಹೊನ್ನಾವರ ತಾಲೂಕು ಇಡಗುಂಜಿ ವಿನಾಯಕ ದೇವಾಲಯ ಹಾಗೂ ಭಟ್ಕಳ ತಾಲೂಕು ಶಿರಾಲಿ ಅಳ್ವೆಕೋಡಿಯ ಶ್ರೀದುರ್ಗಾಪರಮೇಶ್ವರಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇನ್ನೂ ಹೆಚ್ಚಿನ ದೇವಾಲಯಗಳಲ್ಲಿ ವಿವಾಹ ನಡೆಸಲು ಅವಕಾಶವಿದ್ದಲ್ಲಿ ಸರ್ಕಾರದ ಗಮನಕ್ಕೆ ತರಬೇಕು. ಪ್ರಸ್ತುತ ಸದರಿ ದೇವಾಲಯಗಳಲ್ಲಿ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಷರತ್ತಿಗನುಗುಣವಾಗಿ ಅರ್ಜಿ ಸಲ್ಲಿಸಲು ಪ್ರೇರೇಪಿಸಬೇಕು' ಎಂದು ಅವರು ತಿಳಿಸಿದರು.

ಪುಣ್ಯಕ್ಷೇತ್ರದಲ್ಲಿ ವಿವಾಹ ಮಹೋತ್ಸವ ಜರುಗಿಸುವ ಸರ್ಕಾರದ ಈ ಯೋಜನೆಗೆ ಸೆಲೆಬ್ರಿಟಿಗಳಾದ ಪುನೀತ್ ರಾಜಕುಮಾರ್ ಹಾಗೂ ಯಶ್ ದಂಪತಿ ಹಾಗೂ ಸುಧಾಮೂರ್ತಿ ರಾಯಭಾರಿಗಳಾಗುವುದಾಗಿ ಮಾಹಿತಿ ನೀಡಿದ್ದಾರೆ.












Click it and Unblock the Notifications