ಕಾರವಾರ: ಆಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಕಾರವಾರ, ಜುಲೈ.30: ತುಂಬು ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಆಂಬುಲೆನ್ಸ್ ನಲ್ಲಿಯೇ ಹೆರಿಗೆಯಾಗಿದ್ದು, ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಇನಾಂನೀರಲಗಿಯ ಕಾವ್ಯಾ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಆಂಬುಲೆನ್ಸ್ ನಲ್ಲಿ ಜನ್ಮ ನೀಡಿದವರು.
ಮುಂಬೈ ರೈಲಿನಲ್ಲೇ ಅವಳಿ ಮಕ್ಕಳ ಹೆರಿಗೆ, ದೇವರಂತೆ ಬಂದ ಪೊಲೀಸರು
ಹೆರಿಗೆ ನೋವು ತೀವ್ರಗೊಂಡ ಅವರನ್ನು ಮುಂಡಗೋಡ ತಾಲೂಕಿನ ಮಳಗಿ ಕೇಂದ್ರದ 108 ಆಂಬುಲೆನ್ಸ್ ನಲ್ಲಿ ಅಕ್ಕಿಆಲೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯದಲ್ಲಿ ಹೆರಿಗೆಯಾಗಿದೆ.
ಕಾವ್ಯಾರಿಗೆ ಇದು ಮೊದಲ ಹೆರಿಗೆಯಾಗಿದ್ದು, ತಾಯಿ ಹಾಗೂ ಇಬ್ಬರೂ ಮಕ್ಕಳು ಆರೋಗ್ಯವಾಗಿದ್ದಾರೆ.
ಇಂತಹ ಘಟನೆಗಳು ಆಗಾಗ ಅಲ್ಲಲ್ಲಿ ನಡೆಯುತ್ತಿರುವುದನ್ನು ನಾವು ಕಾಣುತ್ತಿರುತ್ತೇವೆ. ಈ ಹಿಂದೆ ಬಳ್ಳಾರಿಯಲ್ಲಿ ಗರ್ಭಿಣಿಗೆ ವಿಪರೀತವಾದ ನೋವು ಕಾಣಿಸಿಕೊಂಡ ಕಾರಣ ಆಂಬುಲೆನ್ಸ್ ನಲ್ಲಿಯೇ ವೈದ್ಯರು ಹೆರಿಗೆ ಮಾಡಿಸಿದ್ದರು.
ಜಿಲ್ಲೆಯ ಕಂಪ್ಲಿ ತಾಲೂಕಿನ ಕಣವಿತಿಮ್ಮಾಪುರ ಗ್ರಾಮದ ಹುಲಿಗೆಮ್ಮ ಎಂಬವರು ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗುತ್ತಿತ್ತು.
ಆದರೆ ದಾರಿಯಲ್ಲಿ ಬರುವಾಗ ಆಂಬುಲೆನ್ಸ್ ನಲ್ಲಿಯೇ ಮಹಿಳೆಗೆ ಹೆರಿಗೆ ನೋವು ಜೋರಾಗಿದೆ. ತಕ್ಷಣ ಅಂಬುಲೆನ್ಸ್ ನಲ್ಲಿದ್ದ ವೈದ್ಯಾಧಿಕಾರಿ ಚಂದ್ರಮೋಹನ್ ಹಾಗೂ ಸಿಬ್ಬಂದಿಗಳಾದ ನೇತ್ರಾ ಹಾಗೂ ಸುರೇಶ್ ಎಂಬವರು ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದರು.