Zameer Ahmed: ಅಲ್ಪಸಂಖ್ಯಾತ ನಿಗಮದಲ್ಲಿ ಮಧ್ಯವರ್ತಿ ಗಳಿಗೆ ಬ್ರೇಕ್ ಹಾಕಲು ಸಚಿವ ಜಮೀರ್ ಅಹಮದ್ ಸೂಚನೆ
ಬೆಂಗಳೂರು, ಜೂನ್ 13: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಮಧ್ಯವರ್ತಿ ಗಳ ಹಾವಳಿಗೆ ಬ್ರೇಕ್ ಹಾಕಿ ನಿಗಮದ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕ ವ್ಯವಸ್ಥೆ ಅಳವಡಿಸಿ ಕೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ನಿಗಮದ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಹೆಸರಿಗೆ ಮಾತ್ರ ಯೋಜನೆಗಳು ಇರಬಾರದು, ರಾಜ್ಯವ್ಯಾಪಿ ಪ್ರಚಾರ ಪಡಿಸಿ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ತಾಕೀತು ಮಾಡಿದರು.

ಅಲ್ಪಸಂಖ್ಯಾತ ಇಲಾಖೆ ಹಾಗೂ ಅಭಿವೃದ್ಧಿ ನಿಗಮ ದಲ್ಲಿ ಲಭ್ಯ ಇರುವ ಯೋಜನೆಗಳ ಬಗ್ಗೆ ಸಮುದಾಯಕ್ಕೆ ಮಾಹಿತಿ ನೀಡಲು ಬೃಹತ್ ಮಟ್ಟದ ಪ್ರಚಾರ ಅಭಿಯಾನ ಆರಂಭಿಸಲು ಸೂಚನೆ ನೀಡಿದ ಅವರು, ನಿಗಮದ ವತಿಯಿಂದ ನೀಡಲಾಗುವ ಟ್ಯಾಕ್ಸಿ, ಆಟೋ, ಸರಕು ಸಾಗಣೆ ವಾಹನ ಸಾಲ ಯೋಜನೆಯಲ್ಲಿ ಫಲಾನುಭವಿಗಳಿಂದ ಶೇ.10 ರಷ್ಟು ವಂತಿಗೆ ಪಡೆಯುವುದು ಕಡ್ಡಾಯಗೊಳಿಸಬೇಕು. ನಿಗಮವೇ ಬ್ಯಾಂಕುಗಳ ಜತೆ ಸಮನ್ವಯ ಸಾಧಿಸಿ ನಮ್ಮ ಮೂಲಕವೇ ಏಕ ಗವಾಕ್ಷಿ (ಸಿಂಗಲ್ ವಿಂಡೋ ) 6 ಅಡಿ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲ ವಸೂಲಾತಿ ಪ್ರಮಾಣ ಶೇ.15 ರಷ್ಟು ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈ ವರ್ಷ ಶೇ. 50 ರಷ್ಟು ವಸೂಲಾತಿ ಆಗಬೇಕು. 760 ಕೋಟಿ ರೂ. ಶಿಕ್ಷಣ ಸಾಲ ವಸೂಲಾತಿಗೆ ಬಾಕಿ ಇದ್ದು ಒಂದು ಬಾರಿಗೆ ಇತ್ಯರ್ಥ (ಒನ್ ಟೈಮ್ ಸೆಟಲ್ ಮೆಂಟ್ ) ಯೋಜನೆ ಜಾರಿಗೊಳಿಸಿ ಬಡ್ಡಿ ಮನ್ನಾ ಮಾಡಿ ಸಾಲ ವಸೂಲಿ ಮಾಡಲು ಸೂಚಿಸಿದರು.
ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಹೊಸ ಸ್ಟಾರ್ಟ್ ಅಪ್ ಗೆ ಮುಂದಾದರೆ ಸಬ್ಸಿಡಿ ಸಹಿತ ಹಣಕಾಸು ನೆರವು ಕೊಡುವ ಯೋಜನೆ ಹೆಚ್ಚು ಮಂದಿಗೆ ತಲುಪುವಂತೆ ಮಾಡಿ. ಕೋಮುಗಲಬೆಯಿಂದ ಸಂತ್ರಸ್ತರಾಗುವ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸುವ ಮನೆಯ ಮಾಳಿಗೆ ಯೋಜನೆ ಅನುದಾನ ಬಳಕೆ ಮಾಡಲು ಸೂಚನೆ ನೀಡಿದರು.
ಅಭಿವೃದ್ಧಿ ನಿಗಮದ ವತಿಯಿಂದ ಬಡವರು ಮನೆ ನಿರ್ಮಿಸಿಕೊಳ್ಳಲು ಕೊಳೆಗೇರಿ ಮಂಡಳಿ ಗೆ ನೀಡಿರುವ 31 ಕೋಟಿ ರೂ. ಎಷ್ಟರ ಮಟ್ಟಿಗೆ ಪ್ರಯೋಜನವಾಗಿದೆ ಎಂಬುದರ ಕುರಿತು ಪ್ರಗತಿಯ ವಿವರ ನೀಡುವಂತೆ ಸೂಚಿಸಿ ಈ ಯೋಜನೆಯ ಅಗತ್ಯ ವಿದ್ದು, ಹೊಸ ಪ್ರಸ್ತಾವನೆ ಸಿದ್ದಪಡಿಸುವಂತೆ ನಿರ್ದೇಶನ ನೀಡಿದರು.
ನಿಗಮದ ಯೋಜನೆಗಳ ಜಾರಿಗೆ ಬಜೆಟ್ ನಲ್ಲಿ ಅಗತ್ಯ ವಾದ ಅನುದಾನ ದ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಲು ಸೂಚನೆ ನೀಡಲಾಯಿತು. ಇನ್ನೂ ಇದೇ ಸಂದರ್ಭದಲ್ಲಿ ವೃತ್ತಿ ಪರ ಕೋರ್ಸ್ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ಸಮುದಾಯದ ಆರೂವರೆ ಸಾವಿರ ವಿದ್ಯಾರ್ಥಿ ಗಳಿಗೆ 10 ಕೋಟಿ ರೂ. ಸಾಲ ನೀಡುವ ಅರಿವು ಯೋಜನೆಯ ಚೆಕ್ ಪರೀಕ್ಷಾ ಪ್ರಾಧಿಕಾರಕ್ಕೆ ಸಚಿವ ಜಮೀರ್ ಅಹಮದ್ ಅವರು ಹಸ್ತಾಂತರ ಮಾಡಿದರು.
ವಖ್ಫ್ ಅಸ್ತಿ ರಕ್ಷಣೆಗೆ ಕಾರ್ಯಪಡೆ ರಚಿಸಿ ಎಲ್ಲ ಆಸ್ತಿಗಳಿಗೆ ಕಾಪೌಂಡ್ ಹಾಕಲು ಕ್ರಮ ಕೈಗೊಳ್ಳಲಾಗುವುದು. ವಖ್ಫ್ ಆಸ್ತಿ ಸಂರಕ್ಷಣೆ ಹಾಗೂ ಸ್ಥಳೀಯ ಮಟ್ಟದಲ್ಲೇ ಕುಂದು ಕೊರತೆ ಪರಿಹಾರಕ್ಕೆ ವಿಭಾಗೀಯ ಮಟ್ಟದ ಕಚೇರಿ ಸ್ಥಾಪಿಸಲಾಗುವುದು ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಆಯೋಗಕ್ಕೆ ಭೇಟಿ ನೀಡಿ ಸನ್ಮಾನ ಪಡೆದು ಅಧ್ಯಕ್ಷ ಅಬ್ದುಲ್ ಅಜೀಮ್ ಅವರಿಂದ ಮನವಿ ಪಡೆದು ಮಾತನಾಡಿದ ಅವರು, ವಖ್ಫ್ ಆಸ್ತಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕು ಅದರಲ್ಲೂ ಶಾಲೆ ಹಾಗೂ ಆಸ್ಪತ್ರೆ ಗೆ ಹೆಚ್ಚು ಆದ್ಯತೆ ನೀಡಲಾಗುವುದು. ಎಲ್ಲರ ಸಹಕಾರ ದೊರೆತರೆ ದೇಶದಲ್ಲೇ ಮಾದರಿ ಆಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.












Click it and Unblock the Notifications