ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಯೋಗಿ ಕರೆತರಲು ಬಿಜೆಪಿ ತಂತ್ರ
ಬೆಂಗಳೂರು, ಮೇ 22: ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ನೂರೈವತ್ತು ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿರುವ ಬಿಜೆಪಿಯು ಅದಕ್ಕಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ನೆರವು ಪಡೆಯುವುದಕ್ಕೆ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣೆಯ ಸ್ಟಾರ್ ಪ್ರಚಾರಕರು ಎಂಬುದರಲ್ಲಿ ಯಾವುದೇ ಬದಲಾವಣೆಯಿಲ್ಲ.
ಜತೆಗೆ ಯೋಗಿಯೂ ಇರಲಿ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಸುದ್ದಿ. ಚುನಾವಣೆ ಪ್ರಚಾರಕ್ಕೆ ಕರ್ನಾಟಕಕ್ಕೆ ಬನ್ನಿ ಎಂದು ಯೋಗಿ ಆದಿತ್ಯನಾಥ್ ರನ್ನು ಈಗಾಗಲೇ ಪಕ್ಷದಿಂದ ಮನವಿ ಕೂಡ ಮಾಡಲಾಗಿದೆ. ಇತ್ತೀಚೆಗೆ ನಡೆದ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ.[RSS ಇಲ್ಲದಿದ್ರೆ ಕಾಶ್ಮೀರ, ಪಾಕಿಸ್ತಾನದ ಪಾಲಾಗುತ್ತಿತ್ತು: ಯೋಗಿ]
ಆ ನಂತರ ಪಕ್ಷದಲ್ಲಿ ಆಂತರಿಕ ಭಿನ್ನಮತ ಕೂಡ ಕಾಣಿಸಿಕೊಂಡಿದೆ. ಎಲ್ಲದರಿಂದ ಮೈಕೊಡವಿ ಎದ್ದು ನಿಂತು, ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನೂರೈವತ್ತು ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕು ಎಂಬ ಗುರಿಗೆ ಯೋಗಿ ಆದಿತ್ಯನಾಥ್ ರಿಂದ ಸಹಾಯವಾಗುತ್ತದೆ ಎಂಬ ನಿರೀಕ್ಷೆ ಇದೆ.[ತಿವಾರಿ ಸಾವಿನ ಕೇಸ್, ಶೋಭಾ ಮನವಿ ಪುರಸ್ಕರಿಸಿದ ಸಿಎಂ ಯೋಗಿ]
ಯೋಗಿ ಚುನಾವಣಾ ಪ್ರಚಾರಕ್ಕೆ ಧುಮುಕಿದರೆ ಸಂಚಲನಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಮತ ಸೆಳೆಯಲು ನೆರವಾಗುತ್ತದೆ ಎಂಬುದು ರಾಜ್ಯ ಬಿಜೆಪಿಯ ಲೆಕ್ಕಾಚಾರ. ಆದರೆ ಅಂತಿಮ ತೀರ್ಮಾನ ಆಗಬೇಕಿದೆ. ಆದರೆ ಈ ಉಪಾಯಕ್ಕೆ ಕೇಂದ್ರ ನಾಯಕರು ಇಲ್ಲ ಎನ್ನಲಾರರು ಎಂಬ ಅಚಲ ವಿಶ್ವಾಸ ರಾಜ್ಯನಾಯಕರಿಗಿದೆ.