ಯಶವಂತಪುರ-ವಾಸ್ಕೋ ನೂತನ ರೈಲಿನ ವೇಳಾಪಟ್ಟಿ, ನಿಲ್ದಾಣಗಳು
ಬೆಂಗಳೂರು, ಫೆಬ್ರವರಿ 12 : ನೈಋತ್ಯ ರೈಲ್ವೆ ಬೆಂಗಳೂರು ಮತ್ತು ಕರಾವಳಿಯನ್ನು ಸಂಪರ್ಕಿಸಲು ಹೊಸ ರೈಲನ್ನು ಘೋಷಣೆ ಮಾಡಿದೆ. ಬೆಂಗಳೂರು-ಗೋವಾ ನಡುವೆ ಈ ರೈಲು ಸಂಚಾರ ನಡೆಸಲಿದ್ದು, ರಾಜಧಾನಿಯಿಂದ ಪ್ರವಾಸ ಹೋಗುವ ಜನರಿಗೂ ಸಹಾಯಕವಾಗಲಿದೆ.
ಯಶವಂತಪುರ-ವಾಸ್ಕೋ ನಡುವೆ ಎಕ್ಸ್ಪ್ರೆಸ್ ರೈಲನ್ನು ಓಡಿಸುವುದಾಗಿ ನೈಋತ್ಯ ರೈಲ್ವೆ ಹೇಳಿದೆ. ಈ ರೈಲು ಪ್ರತಿದಿನ ಸಂಚಾರ ನಡೆಸಲಿದೆ. ರೈಲಿನ ವೇಳಾಪಟ್ಟಿಯನ್ನು ಇಲಾಖೆ ಅಂತಿಮಗೊಳಿಸಿದೆ. ಆದರೆ, ರೈಲು ಸಂಚಾರದ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.
ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ವಾಸ್ಕೋ ನಡುವಿನ 696 ಕಿ. ಮೀ. ದೂರವನ್ನು ರೈಲು 16 ಗಂಟೆಗಳಲ್ಲಿ ಕ್ರಮಿಸಲಿದೆ. ಸುಮಾರು ವರ್ಷಗಳಿಂದ ಬೆಂಗಳೂರು-ವಾಸ್ಕೋ ನಡುವಿನ ನೇರ ರೈಲಿಗಾಗಿ ಬೇಡಿಕೆ ಇಡಲಾಗುತ್ತಿತ್ತು.
ಬೆಂಗಳೂರಿನಿಂದ ಗೋವಾಕ್ಕೆ ಹುಬ್ಬಳ್ಳಿ-ಧಾರವಾಡ ಮೂಲಕ ಈಗಾಗಲೇ ರೈಲು ಸಂಚಾರ ನಡೆಸುತ್ತಿದೆ. ಈ ರೈಲು ಸಹ 16 ಗಂಟೆಯಲ್ಲಿ ಕ್ರಮಿಸುತ್ತದೆ. ಆದರೆ, ನೂತನವಾಗಿ ಘೋಷಣೆಯಾದ ರೈಲು ಹಾಸನ, ಉಡುಪಿ, ಕಾರವಾರ ಮೂಲಕ ಸಂಚಾರ ನಡೆಸಲಿದ್ದು, ರಾಜಧಾನಿ ಬೆಂಗಳೂರನ್ನು ಮಲೆನಾಡು, ಕರಾವಳಿ ಜೊತೆಗೆ ಬೆಸೆಯಲಿದೆ.

ರೈಲಿನ ವೇಳಾಪಟ್ಟಿ
ರೈಲು ನಂಬರ್ 06587/06588 ಯಶವಂತಪುರ-ವಾಸ್ಕೋ ನಡುವೆ ಸಂಚಾರ ನಡೆಸಲಿದೆ. ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಸಂಜೆ 6.45ಕ್ಕೆ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲುಪಲಿದೆ. ವಾಸ್ಕೋಗೆ 10.30ಕ್ಕೆ ತಲುಪಲಿದೆ.
ಪ್ರತಿದಿನ ಸಂಜೆ 4.40ಕ್ಕೆ ವಾಸ್ಕೋದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 8.32ಕ್ಕೆ ತಲುಪಲಿದೆ ಎಂದು ನೈಋತ್ಯ ರೈಲ್ವೆ ವೇಳಾಪಟ್ಟಿ ಪ್ರಕಟಿಸಿದೆ. ಆದರೆ, ರೈಲು ಸಂಚಾರದ ದಿನಾಂಕ ಪ್ರಕಟಿಸಿಲ್ಲ.

ಎಲ್ಲೆಲ್ಲಿ ನಿಲ್ದಾಣಗಳು?
ಬೆಂಗಳೂರಿನ ಯವಶಂತಪುರದಿಂದ ಹೊರಡುವ ರೈಲು ಮಲೆನಾಡು, ಕರಾವಳಿಯನ್ನು ಸಂಪರ್ಕಿಸಲಿದೆ. ರೈಲು ಚನ್ನರಾಯಪಟ್ಟಣ, ಹಾಸನ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಸುರತ್ಕಲ್, ಉಡುಪಿ, ಕುಂದಾಪುರ, ಕಾರವಾರ, ಮಡ್ಗಾಂವ್ ಮೂಲಕ ವಾಸ್ಕೋಗೆ ತಲುಪಲಿದೆ.

ಮಂಗಳೂರು ಜಂಕ್ಷನ್ಗೆ ಹೋಗುವುದಿಲ್ಲ
ಯಶವಂತಪುರ-ವಾಸ್ಕೋ ರೈಲು ಮಂಗಳೂರು ಜಂಕ್ಷನ್ ಅಥವ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸುವುದಿಲ್ಲ. ಪಡೀಲ್ ಮೂಲಕ ಕೊಂಕಣ ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಆದ್ದರಿಂದ, ರೈಲಿನಲ್ಲಿ ಪ್ರಯಾಣಿಸಬೇಕಾದರೆ ಮಂಗಳೂರು ನಗರದ ಜನರು ಸುರತ್ಕಲ್ಗೆ ತೆರಳಬೇಕು. ಬಂಟ್ವಾಳದಲ್ಲೂ ರೈಲು ನಿಲ್ಲುವುದಿಲ್ಲ.

ಹಲವು ವರ್ಷಗಳ ಬೇಡಿಕೆ
ಈ ರೈಲು ಕರಾವಳಿ ಮತ್ತು ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುತ್ತದೆ. ಅದರಲ್ಲೂ ಉಡುಪಿ, ಕುಂದಾಪುರ, ಬೈಂದೂರು, ಕಾರವಾರ ಭಾಗದ ಜನರಿಗೆ ಅನುಕೂಲವಾಗಲಿದೆ. ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣಾ ವೇದಿಕೆ ಈ ರೈಲಿಗಾಗಿ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿತ್ತು. ಅದಕ್ಕೆ ಈಗ ರೈಲ್ವೆ ಇಲಾಖೆ ಒಪ್ಪಿಗೆ ಕೊಟ್ಟಿದೆ












Click it and Unblock the Notifications